i
ಮೀಸಲಾತಿಗಾಗಿ ನಂಜಾವಧೂತ ಸ್ವಾಮೀಜಿ ಮತ್ತು ಕುಂಚಿಟಿಗ ಯುವಕರ ಜಟಾಪಟಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕುಂಚಿಟಿಗ ಜಾತಿಗೆ ಕೇಂದ್ರದ ಒಬಿಸಿ ಮೀಸಲು, ಕುಲಶಾಸ್ತ್ರೀಯ ಅಧ್ಯಯನ ವರದಿ ಅನುಷ್ಟಾನದ ಬಗ್ಗೆ ಸಮಾಜದ ಸ್ವಾಮೀಜಿಗಳಾಗಿ ತಾವುಗಳು ಏಕೆ ಧ್ವನಿ ಎತ್ತುತ್ತಿಲ್ಲ ಎಂದು ನಂಜಾವಧೂತ ಸ್ವಾಮೀಜಿಗಳಿಗೆ ಬುಡುರುಕುಂಟೆಯ ಯುವಕನೊಬ್ಬ ತೀವ್ರ ರೀತಿಯಲ್ಲಿ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿದೆ.
ತಾವುಗಳು ಕುಂಚಿಟಿಗರಾಗಿದ್ದುಕೊಂಡು ಕುಂಚಿಟಿಗರ ನೆಲದಲ್ಲಿ ಕುಂಚಿಟಿಗರನ್ನು ಒಕ್ಕಲಿಗ ಜಾತಿಯ ಉಪಜಾತಿ ಎನ್ನುವಿರಿ, ಒಕ್ಕಲಿಗ ಜಾತಿ ಅಡಿ ಕುಂಚಿಟಿಗರಿಗೆ ಏಕೆ ಮೀಸಲಾತಿ ಕೇಳುತ್ತೀರಿ, ಪ್ರತ್ಯೇಕ ಜಾತಿಯಾಗಿರುವ ಕುಂಚಿಟಿಗರಿಗೆ ಮೀಸಲಾತಿ ಕೇಳುತ್ತಿಲ್ಲ ಎಂದು ಏರು ಧ್ವನಿಯಲ್ಲಿ ಯುವಕನೊಬ್ಬ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದ ಪ್ರಸಂಗ ನಡೆಯಿತು.
ಸ್ಫಟಿಕಪುರಿ ನಂಜಾವಧೂತ ಸ್ವಾಮೀಜಿ ಈ ಸಂದರ್ಭದಲ್ಲಿ ಮಾತನಾಡಿ, ಹೇ ತಡಿಯಪ್ಪ, ನಿನ್ನ ಸಮಸ್ಯೆ ಏನು ಹೇಳು ಎನ್ನುತ್ತಲೆ ಪೊಲೀಸರಿಗೆ ಆತನನ್ನು ಕೂರಿಸಲು ಮನವಿ ಮಾಡಿಕೊಳ್ಳುತ್ತಿದ್ದ ಸ್ವಾಮೀಜಿ ಮನವಿಗೆ ಯುವಕ ಕ್ಯಾರೇ ಎನ್ನಲಿಲ್ಲ, ನನಗೆ ಮಾತನಾಡಲು ಅವಕಾಶ ಕೊಡಿ ನಿಖಿಲ್ ಕುಮಾರಸ್ವಾಮಿ ಅಣ್ಣನವರೇ ಎಂದು ಮನವಿ ಮಾಡಿಕೊಂಡಾಗ ನಿಖಿಲ್ ಕುಮಾರಸ್ವಾಮಿ ಎದ್ದು ಮಾತನಾಡಲು ಆರಂಭಿಸುತ್ತಿದ್ದಂತೆ ಮತ್ತೇ ವಾಪಸ್ ಕರೆದು ಸ್ವಾಮೀಜಿಗಳು ನಿಖಿಲ್ ಅವರನ್ನ ಆಸನದಲ್ಲಿ ಕೂರಿಸುತ್ತಾರೆ.
ಆದರೂ ಸುಮ್ಮನಾಗದ ಯುವಕ ನಮಗೆ ನ್ಯಾಯ ಕೊಡಿ, ಕುಂಚಿಟಿಗರನ್ನು ಅಡ್ಡದಾರಿಗೆ ಎಳೆಯಬೇಡಿ ಎಂದು ಏರು ಧ್ವನಿಯಲ್ಲಿ ಕೇಳುತ್ತಿದ್ದ ಸಂದರ್ಭದಲ್ಲೇ ಪೊಲೀಸರು ಮಧ್ಯ ಪ್ರವೇಶ ಮಾಡಿ ಆ ಯುವಕನನ್ನ ಕೂರಿಸುವ ಪ್ರಯತ್ನ ಮಾಡುತ್ತಾರೆ. ಸಾಲದಕ್ಕೆ ಸ್ವಾಮೀಜಿ ಮತ್ತಿಬ್ಬರು ಶಿಷ್ಯರ ಹೆಸರು ಹೇಳಿ ಆತನನ್ನ ಕೂರಿಸಿ ಎಂದು ತಾಕೀತು ಮಾಡುತ್ತಾರೆ.
ಯುವಕನನ್ನ ಕೂರಿಸಿ ಎನ್ನತ್ತಲೇ ಕುಮಾರಸ್ವಾಮಿ ಅವರು 2019ರಲ್ಲಿ ಕೇಂದ್ರ ಸರ್ಕಾರಕ್ಕೆ ಒಕ್ಕಲಿಗ ಉಪ ಜಾತಿಯಾದ ಕುಂಚಿಟಿಗರಿಗೆ ಒಬಿಸಿ ಮೀಸಲಾತಿ ಕೊಡಲು ಶಿಫಾರಸು ಮಾಡಿದ್ದಾರೆ.
ಕೇಂದ್ರದ ಒಬಿಸಿ ಮೀಸಲಾತಿ ಕೊಡಲು ನನ್ನ ಕೈಯಲ್ಲಿಲ್ಲ, ಕುಮಾರಸ್ವಾಮಿ ಕೈಯಲ್ಲಿಲ್ಲ, ಅದು ಮೋದಿ ಕೈಯಲ್ಲಿದೆ ಎನ್ನುವ ಉಡಾಪೆ ಉತ್ತರವನ್ನು ಒಂದು ಹಂತದಲ್ಲಿ ಸ್ವಾಮೀಜಿ ನೀಡುತ್ತಾರೆ.
ಆ ಸಂದರ್ಭದಲ್ಲಿ ಮೀಸಲಾತಿ ಕುರಿತು ಏನು ಅರಿಯದ ಮುಗ್ದ ಕುಂಚಿಟಿಗ ಸಮಾಜ ಚಪ್ಪಾಳೆ ತಟ್ಟುತ್ತದೆ. ಕುಂಚಿಟಿಗರು ಯಾರು ಎನ್ನುವ ಸತ್ಯ ಮುಗ್ದ ಸಮಾಜದಲ್ಲಿ ತಿಳಿದಿಲ್ಲ. ಖಂಡಿತ ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲಿ ಸಂಪುಟದಲ್ಲಿ ಕುಲಶಾಸ್ತ್ರೀಯ ಅಧ್ಯಯನ ವರದಿ ಚರ್ಚಿಸಿ ಒಪ್ಪಿಗೆ ಪಡೆಯದೇ ನೇರವಾಗಿ ಹಿಂದುಳಿದ ವರ್ಗಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಒಕ್ಕಲಿಗ ಉಪ ಜಾತಿಯಾಗಿರುವ ಕುಂಚಿಟಿಗ ಜಾತಿಗೆ ಮೀಸಲಾತಿ ನೀಡಲು ಶಿಫಾರಸು ಮಾಡುತ್ತಾರೆ. ಆದರೆ ಕಾನೂನಾತ್ಮಕವಾಗಿ ಸರ್ಕಾರಕ್ಕೆ ಶಿಫಾರಸು ಮಾಡಲು ಅಧಿಕಾರವೇ ಇಲ್ಲ. ರಾಜ್ಯ ಹಿಂದುಳಿದ ವರ್ಗಗಳ ಮೂಲಕ ಶಿಪಾರಸು ಮಾಡಿಸಬೇಕಿತ್ತು. ಆದರೆ ಕುಮಾರಸ್ವಾಮಿ ಅವರು ಹಾಗೇ ಮಾಡಲಿಲ್ಲ. ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಸಂಪುಟಕ್ಕೆ ತಂದು ಚರ್ಚಿಸಲಿಲ್ಲ, ಸಂಪುಟದಲ್ಲಿ ಚರ್ಚಿಸಿ ಒಪ್ಪಿಗೆಯಾದ ವಿಷಯವನ್ನು ಸರ್ಕಾರದ ಗೆಜೆಟ್ ನಲ್ಲಿ ಅಧಿಸೂಚನೆ ಹೊರಡಿಸಿ ಆ ಅಧಿಸೂಚನೆ ಪ್ರತಿಯನ್ನು ರಾಜ್ಯ ಹಿಂದುಳಿದ ವರ್ಗಗಳಿಗೆ ಕಳುಹಿಸಿ ಅಲ್ಲಿಂದ ಕೇಂದ್ರ ಮತ್ತು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳುಹಿಸಬೇಕಿತ್ತು. ಈ ರೀತಿ ಕಾನೂನಾತ್ಮಕವಾಗಿ ಸರ್ಕಾರ ಅಥವಾ ಕುಮಾರಸ್ವಾಮಿ ಮಾಡದೇ ಇರುವುದರಿಂದ ಆ ಶಿಫಾರಸು ಮತ್ತೆ ವಾಪಸ್ ಬಂದಿದೆ. ಈ ಸತ್ಯವನ್ನು ನಂಜಾವಧೂತ ಸ್ವಾಮೀಜಿ ತಮ್ಮ ಸಮುದಾಯದವರಿಗೆ ಹೇಳುವ ಬದಲಿಗೆ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿರುವುದು ಸಮಾಜಕ್ಕೆ ಮಾಡಿದ ವಂಚನೆಯಾಗಿದೆ ಎಂದು ಬುಡುರುಕುಂಟೆಯ ಯುವಕ ಗೌಡ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಂಜಾವಧೂತ ಸ್ವಾಮೀಜಿಯವರು ಪದೇಪದೇ ಕುಂಚಿಟಿಗ ಜಾತಿಯನ್ನು ಒಕ್ಕಲಿಗ ಜಾತಿಯ ಉಪ ಜಾತಿ ಎಂದು ಹೇಳುವ ಮೂಲಕ ಕುಂಚಿಟಿಗ ಸಮಾಜಕ್ಕೆ ದ್ರೋಹ ಮಾಡುತ್ತಿದ್ದಾರೆ. ಸ್ವಾಮೀಜಿಯವರ ಹೇಳಿಕೆಯಿಂದ ಕುಂಚಿಟಿಗ ಸಮಾಜಕ್ಕೆ ಅವಮಾನ ಆಗಿದೆ. ಸ್ವಾಮೀಜಿಗಳು ಸಮಾಜದಲ್ಲಿ ಹುಟ್ಟಿ ಒಕ್ಕಲಿಗರ ಉಪಜಾತಿ ಎಂದು ಕುಂಚಿಟಿಗ ಜಾತಿಯನ್ನು ಬಣ್ಣಿಸುತ್ತಿರುವುದು ಯಾವ ಪುರುಷಾರ್ಥಕ್ಕೆ ಕುಂಚಿಟಿಗ ಜಾತಿ ಒಂದು ಸ್ವತಂತ್ರ ಜಾತಿ ಪದೇಪದೇ ನೀವು ಇದನ್ನು ಒಕ್ಕಲಿಗರ ಉಪಜಾತಿ ಎಂದು ವೇದಿಕೆಯಲ್ಲಿ ಪ್ರತಿಬಿಂಬಿಸಿದರೆ ಮುಂದಿನ ದಿನ ನಾವೆಲ್ಲರೂ ಒಗ್ಗಟ್ಟಾಗಿ ಬೀದಿಗಿಳಿದು ಹೋರಾಟ ಮಾಡುವ ಪ್ರಸಂಗ ಒದಗಿಬರುವ ಕಾಲ ದೂರವಿಲ್ಲ ಎಂದು ಕುಂಚಿಟಿಗ ಕೇಂದ್ರ ಮೀಸಲಾತಿ ಹೋರಾಟಗಾರ ಮಂಜುನಾಥ ಅವರು ಎಚ್ಚರಿಕೆ ನೀಡಿದ್ದಾರೆ.