i
ಜಿಲ್ಲಾಧಿಕಾರಿಗಳಿಂದ ಮುರುಘಾ ಮಠದ ಗೌಪ್ಯ ವರದಿ ಕಂದಾಯ ಇಲಾಖೆಗೆ ರವಾನೆ, ಸರ್ಕಾರ ಮಠಕ್ಕೆ ಆಡಳಿತಾಧಿಕಾರಿ ನೇಮಕ ಮಾಡುತ್ತಾ…
ಚಂದ್ರವಳ್ಳಿ ನ್ಯೂನ್, ಚಿತ್ರದುರ್ಗ:
ಅಪ್ರಾಪ್ತ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರಣದಡಿ ಶಿವಮೂರ್ತಿ ಶರಣರು ಕಾರಾಗೃಹದಲ್ಲಿದ್ದಾರೆ. ಇದರಿಂದಾಗಿ ಮುರುಘಾಮಠದ ಆಡಳಿತ, ವಿದ್ಯಾಸಂಸ್ಥೆಗಳ ನಿರ್ವಹಣೆ ಮತ್ತಿತರ ಕೆಲಸ ಕಾರ್ಯಗಳಿಗೆ ಹೆನ್ನಡೆಯಾಗಿದ್ದು ಕೂಡಲೇ ಸರ್ಕಾರ ಮಧ್ಯ ಪ್ರವೇಶ ಮಾಡುವಂತೆ ಮಠದ ಭಕ್ತರು ಹಾಗೂ ವೀರಶೈವ ಲಿಂಗಾಯಿತ ಮುಕಂಡ ಎಚ್.ಏಕಾಂತಯ್ಯ ಸೇರಿದಂತೆ ಮತ್ತಿತರರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರಿಂದಾಗಿ ಸರ್ಕಾರದ ಕಂದಾಯ ಇಲಾಖೆ ಮುರುಘಾ ಮಠ ಮತ್ತು ವಿದ್ಯಾಪೀಠದ ಕಾರ್ಯ ವೈಖರಿ ಕುರಿತಂತೆ ವಿಸ್ತೃತ ವರದಿ ನೀಡುವಂತೆ ಚಿತ್ರದುರ್ಗ ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಪ್ರಭು ಅವರನ್ನು ಕೇಳಿತ್ತು. ಈಗ ಅವರು ಗೌಪ್ಯವಾಗಿ ಮುಚ್ಚಿದ ಲಕೋಟೆಯಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಜಯರಾಮ್ ಇವರಿಗೆ ವರದಿ ಸಲ್ಲಿಕೆ ಮಾಡಿದ್ದಾರೆ.
ಜಿಲ್ಲಾಧಿಕಾರಿ ದಿವ್ಯಪ್ರಭು ಸುದ್ದಿಗಾರರೊಂದಿಗೆ ಮಾತನಾಡಿ, ನ.4 ರಿಂದ ಕಂದಾಯ ಇಲಾಖೆ ಕಾರ್ಯದರ್ಶಿ ಅವರು ಮುರುಘಾ ಮಠದ ಸಂಬಂಧ ವಾಸ್ತವಾಂಶದ ಕುರಿತು ವರದಿ ಕೇಳಿದ್ದರು. ಮಠ ಹಾಗೂ ಅದರ ಅಧೀನದಲ್ಲಿ ನಡೆಸಲಾಗುತ್ತಿರುವ ವಿದ್ಯಾಸಂಸ್ಥೆಗಳಿಗೆ ಖುದ್ದಾಗಿ ಭೇಟಿ ಮಾಡಿ ಪರಿಶೀಲನೆ ಮಾಡಿ ಆಡಳಿತಾತ್ಮಕ ವಿಚಾರದ ಬಗ್ಗೆ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮುರುಘಾ ಮಠ ಮತ್ತು ಅಧೀನ ಸಂಸ್ಥೆಗಳಲ್ಲಿನ ಆಡಳಿತ ವಿಚಾರಗಳ 5 ಪುಟಗಳು ಸೇರಿದಂತೆ 75 ಪುಟಗಳ ವಿಸ್ತ್ರೃತ ವರದಿ ಸಿದ್ಧಪಡಿಸಿ ರವಾನೆ ಮಾಡಲಾಗಿದೆ. ಆಡಳಿತ ಕಾರ್ಯವೈಖರಿ, ಸಿಬ್ಬಂದಿಯ ವೇತನ, ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ವಿವರ, ಆಸ್ತಿಗಳು ಮತ್ತಿತರ ಮಾಹಿತಿಯನ್ನು ಒಳಗೊಂಡಿದೆ. ಆದರೆ, ಇದಕ್ಕೆ ಸಂಬಂಧಪಟ್ಟ ಪ್ರಕರಣ ನ್ಯಾಯಾಲಯದಲ್ಲಿ ಇರುವ ಹಿನ್ನೆಲೆಯಲ್ಲಿ ಸಿದ್ಧಪಡಿಸಲಾದ ವರದಿಯನ್ನು ಮುಚ್ಚಿದ ಲಕೋಟೆ ಮಾದರಿಯಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹೀಗಾಗಿ ವರದಿಯಲ್ಲಿರುವ ಅಂಶಗಳನ್ನು ಬಹಿರಂಗ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ವರದಿ ಆಧರಿಸಿ ಸರ್ಕಾರ ಮುರುಘಾಮಠಕ್ಕೆ ಸೂಕ್ತ ವ್ಯಕ್ತಿಯೊಬ್ಬರನ್ನ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಭಕ್ತರು ಮತ್ತು ವೀರಶೈವ ಲಿಂಗಾಯಿತರ ತಂಡವು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೂಡಲೇ ಮುರುಘಾ ಶರಣರು ಪೀಠತ್ಯಾಗ ಮಾಡಿಸುವಂತೆ ಸರ್ಕಾರಕ್ಕೆ ಅವರುಗಳು ಒತ್ತಡ ಹೇರಿದ್ದರು.