i
ಶ್ರೀಗಂಧ ಬೆಳೆಯಲು ಅನುಮತಿ ಮುಖ್ಯಮಂತ್ರಿಗಳನ್ನ ಅಭಿನಂದಿಸಿದ ಶ್ರೀಗಂಧ ಬೆಳೆಗಾರ ರೈತರು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯದ ಶ್ರೀಗಂಧ ಬೆಳೆಗಾರ ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮತ್ತು ಸಂಪುಟದ ಸಹದ್ಯೋಗಿಗಳು ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಂಪುಟದಲ್ಲಿ ತೀರ್ಮಾನ ಮಾಡಿ ಶ್ರೀಗಂಧ ಬೆಳೆಯನ್ನು ಖಾಸಗಿ ಜಮೀನಿನಲ್ಲಿ ಬೆಳೆಯುವುದು ಮತ್ತು ಮುಕ್ತ ಮಾರುಕಟ್ಟೆಯಲ್ಲಿ ರೈತರು ಮಾರಾಟ ಮಾಡಲು ಅನುಕೂಲ ಮಾಡಿಕೊಟ್ಟಿದ್ದು ಇದೊಂದು ಕ್ರಾಂತಿಕಾರ ಬದಲಾವಣೆ ಆಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ ಶ್ರೀಗಂಧ ಬೆಳೆಗಾರ ರೈತರು ಮುಖ್ಯಮಂತ್ರಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಗಂಧ ಬೆಳೆಗಾರರ ಸಂಘದಿಂದ ಗೌರವ ಸ್ಪೀಕರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ರಾಜ್ಯದಲ್ಲಿನ ಶ್ರೀಗಂಧ ಬೆಳೆಗಾರರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಅಲ್ಲದೆ ಸರ್ಕಾರ ತೆಗೆದುಕೊಂಡಿರುವ ತೀರ್ಮಾನದಿಂದಾಗಿ ಕಳೆದ 20 ವರ್ಷಗಳಿಂದ ಶ್ರೀಗಂಧ ಬೆಳೆಗಾರರನ್ನು ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಶ್ರೀಗಂಧ ಬೆಳೆಗಾರರ ಇತರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುತ್ತದೆ. ಇದಕ್ಕಾಗಿ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಸಿಎಂ ಹೇಳಿದರು.
ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಶ್ರೀಗಂಧ ಬೆಳೆಗಾರರ ಪುಸ್ತಕ ಕೊಡುಗೆ ನೀಡಿ ಸನ್ಮಾನಿಸಿದರು.
ಮಂತ್ರಿಮಂಡಲದ ಸಭೆಯಲ್ಲಿ 2022ರ ಹೊಸ ಶ್ರೀಗಂಧದ ನೀತಿಯನ್ನು ಅನುಮೋಧಿಸಲಾಗಿದೆ. ಮುಖ್ಯವಾಗಿ ರೈತರು ತಮ್ಮ ಖಾಸಗಿ ಜಮೀನುಗಳಲ್ಲಿ ಬೆಳೆದ ಶ್ರೀಗಂಧವನ್ನು ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡಲು ಅನುವುಮಾಡಿಕೂಡಲಾಗಿದೆ ನಿಜಕ್ಕೂ ಇದು ನಮ್ಮ ಸಂಘಕ್ಕೆ ದೊರೆತ ಐತಿಹಾಸಿಕ ಜಯ ಎಂದು ಸಂಘದ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಹೇಳಿದರು.
ಶ್ರೀಗಂಧ ಬೆಳೆಗಾರರ ಸಂಘ ರಚನೆಯಾಗಿ ಕೇವಲ ಹತ್ತು ತಿಂಗಳಾಗಿದೆ. ಈ ಅಲ್ಪಾವಧಿಯ ಹೋರಾಟಕ್ಕೆ ರಾಜ್ಯ ಸರ್ಕಾರ ನಿಜಕ್ಕೂ ನ್ಯಾಯ ನೀಡಿದೆ. ಇದು ಸಂಘಕ್ಕೆ ಸಿಕ್ಕಿರುವ ಮೂದಲ ಯಶಸ್ಸು ಇದಾಗಿದೆ. ಟಿಪ್ಪುಸುಲ್ತಾನ್ ಮಾಡಿದ್ದ ತಪ್ಪನ್ನು 2002 ರಲ್ಲಿ ಭಾಗಶಃ ಸರಿಪಡಿಸಲಾಗಿತ್ತು ಈಗ ಅದನ್ನು ಪರಿಪೂರ್ಣಗೂಳಿಸಲಾಗಿದೆ ಈ ಯಶಸ್ಸಿನಲ್ಲಿ ಸಿಂಹಪಾಲು ಸಂಘಕ್ಕೆ ಸಲ್ಲುತ್ತದೆ. ಅದಕ್ಕಾಗಿ ನಮ್ಮ ಸಂಘ ನಿರಂತರವಾಗಿ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀಗಂಧ ಬೆಳೆಗಾರ ರೈತರು ಸಂಘದ ಅಧ್ಯಕ್ಷರಾದ ಕೆ.ಅಮರನಾರಾಯಣ ಮತ್ತು ಇತರೆ ಪದಾಧಿಕಾರಿಗಳನ್ನು ಅಭಿನಂದಿಸಿದರು. ಶ್ರೀಗಂಧ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಸದಾಶಿವ, ಪದಾಧಿಕಾರಿಗಳಾದ ಶರಣಪ್ಪ, ಎಚ್.ಸತೀಶ್ ಕುಮಾರ್ ಮಂಡೇರ ಹರಿಯಬ್ಬೆ, ಶ್ರೀನಿವಾಸ್, ಜಯರಾಮೇಗೌಡ, ಚಂದ್ರಶೇಖರ್ ಗೌಡ ಮತ್ತಿತರೆ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಪದಾಧಿಕಾರಿಗಳು ರೈತರು ಹಾಜರಿದ್ದರು.