i
ಕ್ರೀಡಾ ತರಬೇತುದಾರರಿಂದ ಅರ್ಜಿ ಆಹ್ವಾನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಕ್ರೀಡಾ ತರಬೇತುದಾರರನ್ನು ರಾಮನಗರ, ಯಾದಗಿರಿ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಹಾವೇರಿ, ಬೆಳಗಾವಿ ಜಿಲ್ಲೆಯ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳಿಗೆ ತರಬೇತಿ ನೀಡುವ ಸಲುವಾಗಿ ಸೆಪ್ಟೆಂಬರ್ – 2023ರ ಅಂತ್ಯದವರೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹಾಕಿ, ಅಥ್ಲೆಟಿಕ್ಸ್, ಫುಟ್ಬಾಲ್, ಕುಸ್ತಿ ಕ್ರೀಡೆಗಳು ಸೇರಿದಂತೆ ಒಟ್ಟು ಆರು ತರಬೇತುದಾರರಿಂದ ಅರ್ಜಿ ಆಹ್ವಾನಿಸಿದ್ದು, ತರಬೇತುದಾರರಿಗೆ ಮಾಸಿಕ ಸಂಚಿತ ವೇತನ 39,960/- ರೂಗಳನ್ನು ನೀಡಲಾಗುವುದು. ತರಬೇತುದಾರರು ಪದವಿ ಮತ್ತು ರಾಷ್ಟ್ರೀಯ ಕ್ರೀಡಾ ಶಿಕ್ಷಣ (ಎನ್ಎಸ್-ಎನ್ಐಎಸ್) / ಭಾರತೀಯ ಕ್ರೀಡಾ ಪ್ರಾಧಿಕಾರ ಸಂಸ್ಥೆಯಿಂದ ಆಯಾ ಕ್ರೀಡೆಯಲ್ಲಿ ಒಂದು ವರ್ಷದ ಅವಧಿ ತರಬೇತಿಯಲ್ಲಿ ಡಿಪ್ಲೊಮಾ ಪಡೆದಿರಬೇಕು / ಏಷಿಯನ್ ಕ್ರೀಡಾಕೂಟ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಪಡೆದಿರಬೇಕು / ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿರಬೇಕು.
ಅರ್ಜಿ ಮತ್ತು ಇನ್ನಿತರೆ ಪೂರಕ ದಾಖಲೆಗಳನ್ನು ನವೆಂಬರ್ 30ರ 4 ಗಂಟೆಯೊಳಗೆ ಮಹಾನಿರ್ದೇಶಕರು, ಕರ್ನಾಟಕ ಕ್ರೀಡಾ ಪ್ರಾಧಿಕಾರ, ರಾಜ್ಯ ಯುವ ಕೇಂದ್ರ, ಬೆಂಗಳೂರು ಇಲ್ಲಿಗೆ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಡಿಸೆಂಬರ್ 12 ರಂದು ಸಂದರ್ಶನ ನಡೆಸಲಾಗುವುದು.
ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವೆಬ್ಸೈಟ್ www.dyes.karnataka.gov.in ನಲ್ಲಿ ಪಡೆಯಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.