i
ಶಾಸಕರಿಬ್ಬರ ಕಿತ್ತಾಟ ಮುಖ್ಯಮಂತ್ರಿಗಳ ಕಾರ್ಯಕ್ರಮ ದಿಢೀರ್ ಹಿರಿಯೂರಿಗೆ ಶಿಫ್ಟ್….
ಚಂದ್ರವಳ್ಳಿ ನ್ಯೂಸ್, ಹಿರಿಯೂರು: ಬಾಗಿನ ಅರ್ಪಣೆ ಕಾರ್ಯಕ್ರಮದ ವೇದಿಕೆ ಅಧ್ಯಕ್ಷತೆಗಾಗಿ ಕಿತ್ತಾಟ ಮಾಡಿದ್ದ ಗೂಳಿಹಟ್ಟಿ ಶೇಖರ್- ಪೂರ್ಣಿಮಾ ಶ್ರೀನಿವಾಸ್ ಇವರಿಂದಾಗಿ ಇಡೀ ಬಾಗಿನ ಕಾರ್ಯಕ್ರಮ ಮತ್ತು ಸಂಕಲ್ಪ ಯಾತ್ರೆ ಕಾರ್ಯಕ್ರಮ ರೂಪರೇಷ ಬದಲಾಗಿದೆ. ನವೆಂಬರ್-22ರಂದು ಮಂಗಳವಾರ ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿರಿಯೂರು ತಾಲೂಕಿನ ವಿ ವಿ ಸಾಗರಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ನಡುವೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರು ಕ್ಯಾತೆ ತೆಗೆದು ವಿವಿ ಸಾಗರದ ಡ್ಯಾಂ ಹೊಸದುರ್ಗದಲ್ಲಿ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ನಾನೇ ವಹಿಸಬೇಕು, ಇಡೀ ಹೊಸದುರ್ಗ ತಾಲೂಕಿನ ಅಧಿಕಾರಿಗಳು ಮತ್ತು ಜನರೇ ನಿರ್ವಹಿಸಬೇಕು ಎನ್ನುವುದಾಗಿ ಹೇಳಿಕೆ ನೀಡಿದರು.
ಇದರಿಂದ ಇಡೀ ಕಾರ್ಯಕ್ರಮ ಗೊಂದಲದ ಗೂಡಾಗಿ ಪರಿಣಮಿಸಿದರಿಂದಾಗಿ ವಿವಿ ಸಾಗರಕ್ಕೆ ಬಾಗಿನ ಅರ್ಪಿಸಿದ ನಂತರ ನಡೆಯುವ ಸಂಕಲ್ಪ ಯಾತ್ರೆ ಮತ್ತು ಬಹಿರಂಗ ಸಭೆಯನ್ನು ಹಿರಿಯೂರು ನಗರದ ನೆಹರು ಮೈದಾನಕ್ಕೆ ಶಿಪ್ಟ್ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಬರದಿಂದ ಕೆಂಗೆಟ್ಟಿದ್ದ ಮಧ್ಯ ಕರ್ನಾಟಕದ ಹಿರಿಯೂರು ಸಮೀಪ ವಾಣಿ ವಿಲಾಸ ಸಾಗರ ಡ್ಯಾಂ ನಿರ್ಮಾಣ ಮಾಡಿದ್ದ ಮೈಸೂರು ಮಹಾರಾಜರ ವಂಶಸ್ಥರನ್ನು ಬಾಗಿನ ಅರ್ಪಣೆ ಕಾರ್ಯಕ್ರಮ ಆಹ್ವಾನ ನೀಡಬೇಕು, ಕಾರ್ಯಕ್ರಮ ಕೇವಲ ಒಂದು ದಿನ ಬಾಕಿ ಇದ್ದು ಇನ್ನೂ ಬಾಗಿನ ಅರ್ಪಣೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಜನರ ಕೈ ಸೇರಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಕೂಡಲೇ ಆಹ್ವಾನ ಪತ್ರಿಕೆ ಮುದ್ರಿಸಬೇಕು, ಮೈಸೂರು ಮಹಾರಾಜರನ್ನು ಬಾಗಿನ ಅರ್ಪಣೆ ಕಾರ್ಯಕ್ಕೆ ಸ್ವಯಂ ಮುಖ್ಯಮಂತ್ರಿಗಳೇ ಆಹ್ವಾನ ನೀಡಬೇಕೆಂದು ಹಿರಿಯೂರು ತಾಲೂಕಿನ ರೈತರು ಮನವಿ ಮಾಡಿದ್ದಾರೆ.