i
ವಿವಿ ಸಾಗರ ಡ್ಯಾಂ ಭರ್ತಿ, ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಆರಂಭಿಸಲಿ…
ವರದಿ-ಎಚ್.ಸಿ.ಗಿರೀಶ್, ಹರಿಯಬ್ಬೆ/ ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಿಲ್ಲೆಯ ಏಕೈಕ ಬೃಹತ್ ಸಕ್ಕರೆ ಕಾರ್ಖಾನೆ ಆರಂಭ ಮಾಡುವುದು ಈಗ ಅಗತ್ಯವಾಗಿದ್ದು ಕೂಡಲೇ ಜಿಲ್ಲಾಡಳಿತ, ಕ್ಷೇತ್ರದ ಶಾಸಕರು ಮತ್ತು ರಾಜ್ಯ ಸರ್ಕಾರ ಕಾರ್ಖಾನೆ ಆರಂಭಕ್ಕೆ ಗಂಭೀರ ಪ್ರಯತ್ನ ಮಾಡಬೇಕಾಗಿದೆ.
ರಾಜ್ಯದ ಹತ್ತು-ಹಲವು ರೋಗಗ್ರಸ್ತ ಸಕ್ಕರೆ ಕಾರ್ಖಾನೆಗಳನ್ನು ರಾಜ್ಯ ಸರ್ಕಾರ ಪುನ್ಛೇತನಗೊಳಿಸಿದೆ. ಅದೇ ಮಾದರಿಯಲ್ಲಿ ಹಿರಿಯೂರು ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಆರಂಭಿಸಿ ಪುನಶ್ಚೇತನ ಮಾಡಲು ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಮೇಲೆ ಒತ್ತಡ ತರುವ ಕಾರ್ಯಕ್ಕೆ ಮುಂದಾಗಬೇಕಿದೆ.
ವಾಣಿ ವಿಲಾಸ ಸಾಗರ ಡ್ಯಾಂ 89 ವರ್ಷಗಳ ನಂತರ ಭರ್ತಿಯಾಗಿ ಕೋಡಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್-22 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಾಣಿ ವಿಲಾಸಕ್ಕೆ ಬಾಗಿನ ಅರ್ಪಿಸಲು ಆಗಮಿಸುತ್ತಿದ್ದಾರೆ. ಈ ಸುಸಂದರ್ಭ ಬಳಸಿಕೊಂಡು ಜಿಲ್ಲೆಯ ಶಾಸಕರುಗಳು, ಸಂಸದರು, ವಿಧಾನ ಪರಿಷತ್ ಶಾಸಕರು ಮುಖ್ಯಮಂತ್ರಿಗೆ ಒತ್ತಡ ತರುವ ಕಾರ್ಯ ಮಾಡಬೇಕಿದೆ.
ಇತಿಹಾಸ-
ವಾಣಿ ವಿಲಾಸ ಸಕ್ಕರೆ ಕಾರ್ಖಾನೆಯನ್ನು 1971-72ರಲ್ಲಿ ಪಕ್ಷತೀತವಾಗಿ ಆರಂಭಿಸಲಾಗಿತ್ತು. ಜಿಲ್ಲೆಯ ಅಂದಿನ ರಾಜಕಾರಣಿ ದಿ.ಬಿಲ್.ಎಲ್.ಗೌಡ, ವಿ.ಮಸಿಯಪ್ಪ, ಡಿ.ಮಂಜುನಾಥ್, ಎಚ್.ಏಕಾಂತಯ್ಯ, ಬಬ್ಬೂರು ಗುರುಬಸಣ್ಣ ಸೇರಿದಂತೆ ಹಲವು ಮಂದಿಯ ಪರಿಶ್ರಮದಿಂದ ಆರಂಭವಾಯಿತು. ಪ್ರತಿನಿತ್ಯ 1250 ಟನ್ ಕಬ್ಬು ಅರಿಯುವ ಸಾಮರ್ಥ್ಯ ಹೊಂದಿದೆ. ಕಾರ್ಖಾನೆ ನಡೆಯುತ್ತಿದ್ದ ಸಂದರ್ಭದಲ್ಲಿ 22 ಸೀಜನ್ ಗಳಲ್ಲಿ 26 ಲಕ್ಷ ಕಬ್ಬು ಅರೆಯಲಾಗಿದೆ. ಕಾರ್ಖಾನೆಗೆ ಹೊಂದಿಕೊಂಡಂತೆ 1979-80ಲ್ಲಿ ಡಿಸ್ಟಿಲರಿ ಆರಂಭಿಸಲಾಯಿತು. ಅತ್ಯಂತ ಲಾಭದಲ್ಲಿ ನಡೆಯುತ್ತಿದ್ದ ಕಾರ್ಖಾನೆಗೆ ಜಿಲ್ಲೆಗೆ ಬಂದೆರಗಿದ ಬರ ಶಾಪದಿಂದಾಗಿ ವಾಣಿ ವಿಲಾಸ ಜಲಾಶಯಕ್ಕೆ ನೀರು ಬಾರದಿದ್ದಾಗ ರೈತರು ಕಬ್ಬು ಬೆಳೆಯನ್ನು ಕೈಬಿಟ್ಟರು. ಇದರ ಫಲವೇ 2002ರಲ್ಲಿ ಕಾರ್ಖಾನೆ ಸ್ಥಗಿತಗೊಂಡಿದ್ದರಿಂದ 2004ರ ಅಕ್ಟೋಬರ್ನಲ್ಲಿ ಕಾರ್ಖಾನೆ ಸಮಾಪನಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿ ಕೈತೊಳೆದುಕೊಂಡಿತು.
ಸಾಕಷ್ಟು ಭೂಮಿ-
ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಒಡೆತನದಲ್ಲಿ 270 ಎಕರೆಗೂ ಹೆಚ್ಚಿನ ಭೂಮಿ ಇದೆ. ಕಾರ್ಖಾನೆ ನಡೆಯಲು ಅಗತ್ಯವಾದ ಕಟ್ಟಡ, ಬೃಹತ್ ಯಂತ್ರೋಪಕರಣಗಳು, ವಸತಿ ಗೃಹಗಳು, ಆಡಳಿತ ಕಚೇರಿ, ಉಗ್ರಾಣ ಮತ್ತಿತರ ಎಲ್ಲ ರೀತಿಯ ಮೂಲ ಸೌಲಭ್ಯಗಳು ಇವೆ. ಕೇವಲ 4 ಕೋಟಿ ರೂ.ಗಳ ವೆಚ್ಛದಲ್ಲಿ ಕಾರ್ಖಾನೆ ಆರಂಭಿಸಲಾಗಿತ್ತು. ಅವಿಭಜಿತ ಚಿತ್ರದುರ್ಗ ಜಿಲ್ಲೆ, ತುಮಕೂರು ಜಿಲ್ಲೆ, ಬಳ್ಳಾರಿ, ಹಾಸನದ ಕೆಲ ಭಾಗಗಳಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಅಂದು ಕಬ್ಬ ಅನ್ನು ಕಾರ್ಖಾನೆಗೆ ಬಿಡುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿ ನಾಲ್ಕು ಮತ್ತು ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ 270 ಎಕರೆಗೂ ಅಧಿಕ ಭೂಮಿ ಇದ್ದು ಇಂದಿನ ಮಾರುಕಟ್ಟೆ ದರ ಕನಿಷ್ಠ ಎಂದರೂ ಒಂದೂವರೆ ಕೋಟಿ ರೂ.ಗೂ ಅಧಿಕವಿದೆ. ರಾಷ್ಟ್ರೀಯ ಹೆದ್ದಾರಿ ನಾಲ್ಕರ ಅಗಲೀಕರಣ ವೇಳೆ ಕಾರ್ಖಾನೆಯ ಎರಡು ಮೂರು ಎಕರೆಯಷ್ಟು ಭೂಮಿ ವಶ ಪಡಿಸಿಕೊಂಡಿದ್ದು ಅದರ ಪರಿಹಾರವಾಗಿ 18 ಕೋಟಿ ರೂ.ನಷ್ಟು ಪರಿಹಾರ ಬಂದಿತ್ತು. ಆ ಹಣದಿಂದ ಕಾರ್ಖಾನೆಯ ಎಲ್ಲ ರೀತಿಯ ಸಾಲ, ವೇತನ ತೀರುವಳಿ ಮಾಡಲಾಗಿದೆ.
ಉದ್ಯೋಗ ಸೃಷ್ಠಿ- ಕಾರ್ಖಾನೆ 2002ರಲ್ಲಿ ಸ್ಥಗಿತಗೊಂಡಿದ್ದರಿಂದಾಗಿ ಕಾರ್ಖಾನೆ ಪುನಶ್ಚೇತನಕ್ಕೆ ಯಾರೊಬ್ಬರೂ ಪ್ರಯತ್ನಿ ಮಾಡಲಿಲ್ಲ. ಪ್ರತ್ಯಕ್ಷ-ಪರೋಕ್ಷವಾಗಿ ಸಾವಿರಾರು ಮಂದಿಗೆ ಉದ್ಯೋಗ ನೀಡುವ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಜಿಲ್ಲೆಯ ಜನ ಪ್ರತಿನಿಧಿಗಳು ಪ್ರಮಾಣಿಕವಾಗಿ ಪ್ರಯತ್ನ ಮಾಡಬೇಕಿದೆ.
ಇತರೆ ಯೋಜನೆಗಳು-
ಮಂದಗತಿಯಲ್ಲಿ ಸಾಗುತ್ತಿರುವ ಭದ್ರಾ ಯೋಜನೆಯನ್ನು ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಇರುವ ಅನುದಾನ ಲಭ್ಯತೆಗಾಗಿ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ಮೇಲೆ ಮುಖ್ಯಮಂತ್ರಿಗಳು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಒತ್ತಡ ತರಬೇಕಿದೆ.
ನೆನೆಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ವೇಗ ಹೆಚ್ಚಳ ಮಾಡಬೇಕು. ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ನೇರ ರೈಲು ಸಂಪರ್ಕ ಕಲ್ಪಿಸುವ ಯೋಜನೆಯನ್ನು ತುರ್ತಾಗಿ ಅನುಷ್ಟಾನ ಮಾಡಬೇಕು. ಭದ್ರಾ ಮೇಲ್ದಂಡೆ ಯೋಜನೆಯಿಂದ ವಂಚಿತವಾಗಿರುವಂತ ಧರ್ಮಪುರ ಹೋಬಳಿ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಯೋಜನೆ ವ್ಯಾಪ್ತಿಗೆ ತರುವ ಕಾರ್ಯ ಮಾಡಬೇಕು. ಭದ್ರಾ ಯೋಜನೆಯಿಂದ ಕೆರೆಗಳ ಭರ್ತಿ ಮಾಡಲಾಗುತ್ತಿದ್ದು ಜಿಲ್ಲೆಯಲ್ಲಿ ಬಿಟ್ಟು ಹೋಗಿರುವ ಕೆರೆಗಳಿಗೆ ನೀರು ಭರ್ತಿ ಮಾಡುವ ಕಾರ್ಯಕ್ಕೂ ಜಿಲ್ಲೆಯ ಪ್ರತಿನಿಧಿಗಳು ಮುಖ್ಯಮಂತ್ರಿಗಳ ಗಮನ ಸೆಳೆಯಬೇಕಿದೆ. ಮಧ್ಯ ಕರ್ನಾಟಕದ ಚಿತ್ರದುರ್ಗ ವೈದ್ಯಕೀಯ ಕಾಲೇಜ್ ಮಂಜೂರು ಮಾಡುವ ವಿಷಯದಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ಅತ್ತಂತೆ- ಸತ್ತಂತೆ ಮಾಡುತ್ತಿರುವುದ ಜಿಲ್ಲೆಯ ಜನತೆಗೆ ತಿಳಿಯದ ವಿಷಯವಲ್ಲ, ಹಾಗಾಗಿ ಯಾವುದೇ ಸಬೂಬು ಹೇಳದೆ ವೈದ್ಯಕೀಯ ಕಾಲೇಜ್ ಆರಂಭಿಸಬೇಕು. ಈರುಳ್ಳಿ, ರಾಗಿ, ಶೇಂಗಾ, ಮೆಕ್ಕೆಜೋಳ, ದಾಳಿಂಬೆ ಸೇರಿದಂತೆ ಮತ್ತಿತರ ಫಸಲಿಗೆ ಬೆಳೆ ವಿಮೆ ಕಟ್ಟಿರುವ ಎಲ್ಲ ರೈತರಿಗೂ ಬೆಳೆ ಹಾನಿ ವಿಮಾ ಪರಿಹಾರವನ್ನು ತಾರತಮ್ಯ ಇಲ್ಲದೆ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳಲ್ಲಿ ಗಮನ ಸೆಳೆಯಬೇಕಿದೆ.