i
ವಿವಿ ಸಾಗರಕ್ಕೆ 5 ಟಿಎಂಸಿ ನೀರು, ವೈದ್ಯಕೀಯ ಕಾಲೇಜ್, ನೇರ ರೈಲು ಯೋಜನೆಗೆ ಒತ್ತು ನೀಡಲಿ-ವಕೀಲ ಸಂಜಯ್…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಭರವಸೆ ನೀಡಿದಂತೆ ಭದ್ರಾ ಜಲಾಶಯದಿಂದ 5 ಟಿಎಂಸಿ ನೀರನ್ನ ವಾಣಿ ವಿಲಾಸ ಜಲಾಶಯಕ್ಕೆ ಹಂಚಿಕೆ ಮಾಡುವುದು ಸೇರಿದಂತೆ ನೆನೆಗುದಿಗೆ ಬಿದ್ದಿರುವ ವಿವಿಧ ಯೋಜನೆಗಳನ್ನು ತುರ್ತಾಗಿ ಅನುಷ್ಠಾನ ಮಾಡುವಂತೆ ವಕೀಲ ಬಬ್ಬೂರು ಬಿ.ಟಿ.ಸಂಜಯ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಒತ್ತಾಯಿಸಿದ್ದಾರೆ.
ನ.22ರಂದು ಮುಖ್ಯಮಂತ್ರಿಗಳು ಹಿರಿಯೂರು ಕಾರ್ಯಕ್ರಮಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದೆ ಸಿಎಂ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಹಿರಿಯೂರು ನಗರದಲ್ಲಿ ರೈತರು ವಾಣಿ ವಿಲಾಸ ಸಾಗರಕ್ಕೆ ಭದ್ರಾದಿಂದ ನೀರು ಭರ್ತಿ ಮಾಡುವಂತೆ 543 ದಿನಗಳ ಕಾಲ ಗಂಭೀರವಾದ ಹೋರಾಟ ನಡೆಸಿದ್ದರು. ಅಂದು ಅವರು ಹೋರಾಟದ ಸ್ಥಳಕ್ಕೆ ಆಗಮಿಸಿ 5 ಟಿಎಂಸಿ ನೀರನ್ನ ಹಂಚಿಕೆ ಮಾಡಿರುವುದಾಗಿ ಹೋರಾಟ ಮಾಡುತ್ತಿದ್ದ ರೈತರಿಗೆ ಮನವೊಲಿಸಿ ಹೋರಾಟವನ್ನು ವಾಪಸ್ ತೆಗೆಯುವಂತೆ ಮಾಡಿದ್ದೀರಿ. ಇದನ್ನ ತಾವುಗಳೇ ಹರಿಯಬ್ಬೆ ಕಾರ್ಯಕ್ರಮದಲ್ಲಿ ಸ್ಮರಿಸಿದ್ದು ಆಗಿದೆ. ಆದರೆ ವಾಣಿ ವಿಲಾಸ ಸಾಗರಕ್ಕೆ ತುರ್ತಾಗಿ 5 ಟಿಎಂಸಿ ನೀರನ್ನು ಹಂಚಿಕೆ ಮಾಡಿ ಆದೇಶ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.
ತಾವುಗಳು ವಿವಿ ಸಾಗರಕ್ಕೆ ಹಂಚಿಕೆ ಮಾಡಿದ್ದ 5 ಟಿಎಂಸಿ ನೀರಿನಲ್ಲಿ ಕಾಂಗ್ರೆಸ್ ಸರ್ಕಾರ 3 ಟಿಎಂಸಿ ನೀರು ಕಡಿತಗೊಳಿಸಿ 2 ಟಿಎಂಸಿಗೆ ಇಳಿಸಿದೆ ಎಂದು ಆರೋಪಿಸಿದ್ದೀರಿ. ಈಗ ತಾವುಗಳೇ ಮುಖ್ಯಮಂತ್ರಿಗಳಾಗಿದ್ದೀರಿ, ಹಿಂದೆ ಆಗಿರುವ ತಪ್ಪು ಸರಿ ಮಾಡುವ ಅವಕಾಶ ನಿಮಗಿದ್ದು ಕೂಡಲೇ ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ಬಾಕಿ ಇರುವ ನೀರನ್ನು ಹಂಚಿಕೆ ಮಾಡಬೇಕು ಎಂದು ವಕೀಲ ಸಂಜಯ್ ಮನವಿ ಮಾಡಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಆಡಳಿತ ಮಾಡುತ್ತಿದ್ದು ಕೂಡಲೇ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ಆದೇಶಿಸಬೇಕು. ನೆನೆಗುದಿಗೆ ಬಿದ್ದಿರುವ ಈ ಕಾಮಗಾರಿ ವೇಗ ಹೆಚ್ಚಳ ಮಾಡಬೇಕು. ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ನೇರ ರೈಲು ಸಂಪರ್ಕ ಕಲ್ಪಿಸುವ ಯೋಜನೆಯನ್ನು ತುರ್ತಾಗಿ ಅನುಷ್ಟಾನ ಮಾಡಬೇಕು. ಧರ್ಮಪುರ ಹೋಬಳಿಯಾದ್ಯಂತ ಬಿಟ್ಟು ಹೋಗಿರುವ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು, ವೈದ್ಯಕೀಯ ಕಾಲೇಜ್ ಆರಂಭಿಸಬೇಕು ಎಂದು ಅವರು ಆಗ್ರಹ ಮಾಡಿದ್ದಾರೆ.