i
ಜಮೀನಿಗೆ ಹೋಗಲು ರಸ್ತೆ ಬಿಡಿ, ಇರುವ ರಸ್ತೆಯಲ್ಲೇ ಓಡಾಡಿ, ಒಂದೇ ಜಾತಿಯ ಎರಡು ಗುಂಪುಗಳ ಮಧ್ಯೆ ರಸ್ತೆಗಾಗಿ ಜಿದ್ದಾಜಿದ್ದಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರೈತರ ಜಮೀನುಗಳಿಗೆ ಓಡಾಡಲು 2006ರಲ್ಲಿ ತಹಶೀಲ್ದಾರ್ ನ್ಯಾಯಾಲಯದಲ್ಲಿ ಆದೇಶ ಆಗಿರುವಂತೆ 20 ಅಡಿಗಳಷ್ಟು ರಸ್ತೆ ಬಿಡುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದರ ಮೇರೆಗೆ ತಾಲೂಕು ಆಡಳಿತ ರಸ್ತೆ ಬಿಡಿಸಿಕೊಡಲು ತೆರಳಿದ್ದಾಗ ಎರಡು ಗುಂಪುಗಳ ಮಧ್ಯ ಹೈಡ್ರಾಮ ನಡೆದಿರುವ ಘಟನೆ ಹಿರಿಯೂರು ತಾಲೂಕಿನ ಗೌನಹಳ್ಳಿಯಲ್ಲಿ ಜರುಗಿದೆ.
ತಹಶೀಲ್ದಾರ್ ಪಾಟೀಲ್, ಭೂಮಾಪನ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಶನಿವಾರ ಗೌನಹಳ್ಳಿ ಗ್ರಾಮಕ್ಕೆ ಓಡಾಡುವ ರಸ್ತೆ ಸಮಸ್ಯೆ ಇತ್ಯರ್ಥ ಮಾಡಲು ತೆರಳಿದ್ದಾಗ ಗೌನಹಳ್ಳಿ ಗೊಲ್ಲರಹಟ್ಟಿಯ ಲಕ್ಷ್ಮಕ್ಕ ಚಿತ್ತಪ್ಪ ಎನ್ನುವವರು 20 ಅಡಿ ರಸ್ತೆ ನೀಡಲು ಸಾಧ್ಯವಿಲ್ಲ, ಈಗಾಗಲೇ 10-12 ಅಡಿಯಷ್ಟು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಈ ರಸ್ತೆಯಲ್ಲದೆ ಸರ್ವೆ ನಂಬರ್ 29ರ ಜಮೀನಿಗೆ ಹೋಗಲು ಮತ್ತೊಂದು ರಸ್ತೆಯೂ ಇದೆ, ಆದರೂ ದುರುದ್ದೇಶದಿಂದ ಇದೇ ರಸ್ತೆಯಲ್ಲಿ 20 ಅಡಿ ಬಿಡಿಸಿಕೊಳ್ಳಲು ಒತ್ತಡ ತರುತ್ತಿದ್ದು ಯಾವುದೇ ಕಾರಣಕ್ಕೂ 20 ಅಡಿ ರಸ್ತೆ ಬಿಡುವುದಿಲ್ಲ ಎಂದು ಆಕೆ ಹಠ ಹಿಡಿದು ಕೀಟ ನಾಶಕ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದರಿಂದಾಗಿ ಒಂದಿಷ್ಟು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಭೇಟಿ ಮಾಡುವಂತೆ ಅಧಿಕಾರಿಗಳು ಸೂಚನೆ ನೀಡಿ ವಾಪಸ್ ಬಂದಿದ್ದು ಸಮಸ್ಯೆ ಇತ್ಯರ್ಥವಾಗಿಲ್ಲ ಎನ್ನಲಾಗಿದೆ.
ತಹಶೀಲ್ದಾರ್ ಪಾಟೀಲ್ ಅವರು ಚಂದ್ರವಳ್ಳಿ ಪತ್ರಿಕೆಯೊಂದಿಗೆ ಮಾತನಾಡಿ, 2006ರಲ್ಲಿ ಅಂದಿನ ತಹಶೀಲ್ದಾರ್ ಆದೇಶ ಮಾಡಿರುವಂತೆ 20 ಅಡಿಗಳಷ್ಟು ರಸ್ತೆ ಮಾರ್ಕ್ ಮಾಡಲು ತೆರಳಿದ್ದಾಗ ಕೆಲವರು ಅಡ್ಡಿ ಪಡಿಸಿರುತ್ತಾರೆ. ಜಮೀನುಗಳ ದರಗಳ 30-40 ಲಕ್ಷಕ್ಕೆ ಏರಿಕೆಯಾಗಿದ್ದು 20 ಅಡಿಯಷ್ಟು ಬಿಟ್ಟರೂ ಐದಾರು ಗುಂಟೆ ಜಮೀನು ಕಳೆದುಕೊಳ್ಳುವ ಆತಂಕದಲ್ಲಿ ಕೆಲ ರೈತರಿದ್ದಾರೆ. ಈಗಾಗಲೇ 13-15 ಅಡಿಯಷ್ಟು ರಸ್ತೆ ಈಗಾಗಲೇ ರೈತರು ಬಿಟ್ಟಿದ್ದಾರೆ. ಓಡಾಟ ಮಾಡಲು ಯಾವುದೇ ತೊಂದರೆಯಿಲ್ಲ. ರೈತರು ಅನುಸರಿಸಿಕೊಂಡು ಹೋಗಬೇಕಾಗಿದೆ. ಹಿಂದಿನ ತಹಶೀಲ್ದಾರ್ ಆದೇಶದಂತೆ ರೈತರು 20 ಅಡಿ ರಸ್ತೆ ಬಿಡಲು ಒಪ್ಪುತ್ತಿಲ್ಲ. ಈಗಾಗಲೇ ಎರಡು ಗುಂಪುಗಳ ಮಧ್ಯ ಹೊಡೆದಾಟ ಆಗಿದೆ. ಆದರೂ ನ್ಯಾಯಾಲಯ ಮಧ್ಯ ಪ್ರವೇಶ ಮಾಡಿ ರಸ್ತೆ ಬಿಡಿಸುವಂತೆ ಆದೇಶಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.