i
ಮೈಸೂರು ಒಡನಾಡಿ ಸಂಸ್ಥೆ ವಿರುದ್ಧ ತನಿಖೆಗೆ ಒತ್ತಾಯಿಸಿ ಎಡಿಜಿಪಿಗೆ ದೂರು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪೋಕ್ಸೋ ಕಾಯ್ದೆ ಅಡಿ ಕಾರಾಗೃಹದಲ್ಲಿರುವ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದು ಮೈಸೂರು ಒಡನಾಡಿ ಸಂಸ್ಥೆ ಮುಖ್ಯಸ್ಥರಾದ ಸ್ಟ್ಯಾನ್ಲಿ, ಪರಶು ಇವರುಗಳನ್ನು ಸಮಗ್ರ ತನಿಖೆಗೆ ಒಳಪಡಿಸುವಂತೆ ಸಾಮಾಜಿಕ ಕಾರ್ಯಕರ್ತ ಜಿತೇಂದ್ರ ಎನ್.ಹುಲಿಕುಂಟೆ ಅವರು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ದೂರು ಬರೆದು ಒತ್ತಾಯಿಸಿದ್ದಾರೆ. ಎಡಿಜಿಪಿ ಅವರಿಗೆ ದೂರಿನ ಪ್ರತಿ ಕಳುಹಿಸಿರುವ ಜಿತೇಂದ್ರ, ಮುರುಘಾ ಶರಣರ ವಿರುದ್ಧ ದೊಡ್ಡ ಮಟ್ಟದಲ್ಲಿ ಷಡ್ಯಂತ್ರ ನಡೆಯುತ್ತಿರುವ ಅನುಮಾನ ವ್ಯಕ್ತವಾಗುತ್ತಿದೆ. ಈ ಷಡ್ಯಂತದ ಭಾಗವಾಗಿ ಒಡನಾಡಿ ಸಂಸ್ಥೆಯ ಮುಖ್ಯಸ್ಥರು ಭಾಗಿ ಆಗಿರುವ ಸಾಧ್ಯತೆ ಇದೆ ಎನ್ನುವ ಅನುಮಾನ ಕಾಡತೊಡಗಿದೆ. ಅಲ್ಲದೆ ಮುರುಘಾ ಶರಣರ ವಿರುದ್ಧ ಪಿತ್ತೂರಿ ನಡೆಸಿರುವ ಸಾಧ್ಯತೆ ಇದ್ದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಒಂದು ದೂರಿನಲ್ಲಿ ಮುರುಘಾ ಶರಣರ ವಿರುದ್ಧ ಪಿತ್ತೂರಿ ನಡೆಸಿದವರಲ್ಲಿ ಒಡನಾಡಿ ಸಂಸ್ಥೆಯ ಮುಖ್ಯಸ್ಥರು 3ನೇ ಆರೋಪಿಯಾಗಿರುತ್ತಾರೆ.
ಮತ್ತೊಂದು ದೂರಿನಲ್ಲಿ ಮುರುಘಾ ಮಠದ ಅಡಿಗೆ ಸಹಾಯಕಿಯಾದ ಗಾಯಿತ್ರಿ ಅವರ ಅಪ್ರಾಪ್ತ ಪುತ್ರಿ ಒಡನಾಡಿ ಸಂಸ್ಥೆಯ ಆಶ್ರಯದಲ್ಲಿದ್ದು ಪಿತ್ತೂರಿ ಆರೋಪ ಹೊತ್ತಿರುವ ಒಡನಾಡಿ ಸಂಸ್ಥೆಯ ಆಶ್ರಯದಲ್ಲಿ ಅಪ್ರಾಪ್ತ ಬಾಲಕಿಯರು ಇರುವುದು ಎಷ್ಟು ಸರಿ ಎಂದು ಜಿತೇಂದ್ರ ಪ್ರಶ್ನಿಸಿ ಕೂಡಲೇ ಅಪ್ರಾಪ್ತ ಬಾಲಕಿಯರನ್ನ ಒಡನಾಡಿ ಸಂಸ್ಥೆಯಿಂದ ಬಿಡುಗಡೆಗೊಳಿಸಿ ಸರ್ಕಾರದ ಯಾವುದಾದರೊಂದು ಸಂಸ್ಥೆಯಲ್ಲಿ ಬಾಲಕಿಯರನ್ನ ಸೇರಿಸಬೇಕು, ಈ ವಿಷಯದಲ್ಲಿ ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ನಡೆಯು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು ಆ ಸಮಿತಿಯ ಸದಸ್ಯರನ್ನೂ ಕೂಡಲೇ ಸಮಗ್ರ ತನಿಖೆಗೆ ಒಳ ಪಡಿಸಬೇಕು ಎಂದು ಅವರು ಎಡಿಜಿಪಿ ಅವರಲ್ಲಿ ಮನವಿ ಮಾಡಿದ್ದಾರೆ.
ಒಂದು ವೇಳೆ ಒಡನಾಡಿ ಸಂಸ್ಥೆ ಆಶ್ರಯದಲ್ಲೇ ಅಪ್ರಾಪ್ತ ಬಾಲಕಿಯರು ಇದ್ದರೆ ಅವರಿಗೆ ಪ್ರಚೋದನೆ ಮಾಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ, ಹಾಗಾಗಿ ಅಪ್ರಾಪ್ತ ಬಾಲಕಿಯರನ್ನು ಅಲ್ಲಿಂದ ತೆರವುಗೊಳಿಸುವಂತೆ ಜಿತೇಂದ್ರ ಮನವಿ ಮಾಡಿದ್ದಾರೆ.
ಒಡನಾಡಿ ಸಂಸ್ಥೆಯವರು ಸಂತ್ರಸ್ತ ಬಾಲಕಿಯರಿಗೆ ನ್ಯಾಯ ಕೊಡಿಸುವ ನೆಪದಲ್ಲಿ ಮುರುಘಾ ಶರಣರ ವಿರುದ್ಧ ಮಾದಕ ವಸ್ತುಗಳ ಬಳಕೆ, ಇಂಜೆಕ್ಷನ್ ಗಳ ಬಳಕೆ, ಕುಡಿತ ಆರೋಪ ಸೇರಿದಂತೆ ಇಲ್ಲಸಲ್ಲದ ಆರೋಪಗಳು, ಕಾನೂನು ಬಾಹಿರ ಆಧಾರ ರಹಿತ ಸುಳ್ಳು ಆರೋಪಗಳು ಕೇಳಿ ಬರುತ್ತಿವೆ. ಇದರ ಜೊತೆಯಲ್ಲಿ ಒಡನಾಡಿ ಸಂಸ್ಥೆಯವರು ಪದೇಪದೇ ಮುರುಘಾ ಮಠದ ಮಕ್ಕಳು ನಾಪತ್ತೆ ಆಗಿರುವ ಕುರಿತು ಹೇಳಿಕೆ ನೀಡುತ್ತಿದ್ದಾರೆ. ಸರ್ಕಾರ ಈಗಾಗಲೇ ಎಲ್ಲ ಮಕ್ಕಳನ್ನು ತನ್ನ ವಶಕ್ಕೆ ಪಡೆದಿದೆ. ಆದರೂ ಒಡನಾಡಿ ಸಂಸ್ಥೆಯವರು ವಿನಾ ಕಾರಣ ಮಕ್ಕಳು ನಾಪತ್ತೆ ಆಗಿದ್ದಾರೆಂದು ಆರೋಪ ಮಾಡುತ್ತಿದೆ ಎಂದು ಅವರು ದೂರಿದ್ದಾರೆ.
ಇದರ ಜೊತೆಯಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವವರು ಮತ್ತು ನಾಪತ್ತೆ ಆಗಿರುವವರು ಈ ಪಿತ್ತೂರಿಯಲ್ಲಿ ಭಾಗಿ ಆಗಿರುವ ಸಾಧ್ಯತೆ ಇದ್ದು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಜಿತೇಂದ್ರ ಎನ್.ಹುಲಿಕುಂಟೆ ಎಡಿಜಿಪಿ ಅಲೋಕ್ ಕುಮಾರ್ ಅವರಲ್ಲಿ ಒತ್ತಾಯಿಸಿದ್ದಾರೆ.