i
ಡಿ.18 ರಂದು ಅಪಾಯಕಾರಿ ಗಣಿಗಾರಿಕೆ ಸವಾಲುಗಳ ಸಂವಾದ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಪಾಯಕಾರಿ ಗಣಿಗಾರಿಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ಮತ್ತು ಗಣಿಬಾಧಿತ ಗ್ರಾಮಗಳ ಜನಸಾಮಾನ್ಯರ ಬದುಕಿಗೆ ಎದುರಾಗುತ್ತಿರುವ ಸವಾಲುಗಳ ಕುರಿತು ಸಾರ್ವಜನಿಕ ಸಂವಾದ ಕಾರ್ಯಕ್ರಮ ಡಿ.18 ರಂದು ಬೆಳಿಗ್ಗೆ 11 ಕ್ಕೆ ತ.ರಾ.ಸು.ರಂಗಮಂದಿರದಲ್ಲಿ ನಡೆಯಲಿದೆ ಎಂದು ಸಾಮಾಜಿಕ ಹೋರಾಟಗಾರ ಹೊಳೆಯಪ್ಪ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪರಿಸರ ಸಂರಕ್ಷಣಾ ವೇದಿಕೆ ಹಾಗೂ ಗಣಿಬಾಧಿತ ಗ್ರಾಮಗಳ ಸಂರಕ್ಷಣಾ ಸಮಿತಿಯಿಂದ ಹಮ್ಮಿಕೊಂಡಿರುವ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಚ್ಚನ್ಯಾಯಾಲಯದ ಹಿರಿಯ ವಕೀಲ ಎಸ್.ಬಾಲನ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವ ಜನಪರ ಪರಿಸರವಾದಿ ಸಾಹಿತಿ ಪ್ರಗತಿಪರ ಚಿಂತಕ ಶೃಂಗೇರಿಯ ಕಲ್ಕುಳಿ ವಿಠಲ್ ಹೆಗ್ಡೆ ಗಣಿಗಾರಿಕೆಯಿಂದ ಜನಸಾಮಾನ್ಯರಿಗಾಗುವ ದುಷ್ಪರಿಣಾಮಗಳು ಹಾಗೂ ಸಂಘಟನೆಯ ಪಾತ್ರ ಕುರಿತು ಮಾತನಾಡಲಿದ್ದಾರೆ.
ಚಿಂತಕ ಸಿ.ಕೆ.ಮಹೇಶ್ವರಪ್ಪ, ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ನ್ಯಾಯವಾದಿ ಶಿವುಯಾದವ್, ಮಂಜುನಾಥ್ ತಾಳಿಕೆರೆ, ಟಿ.ಶಫಿವುಲ್ಲಾ ಇನ್ನು ಅನೇಕರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದರು. ಪ್ರೊ.ಸಿ.ಕೆ.ಮಹೇಶ್, ಜೆ.ಯಾದವರೆಡ್ಡಿ ಪತ್ರಿಕಾಗೋಷ್ಟಿಯಲ್ಲಿದ್ದರು.