i
ಪೌಷ್ಟಿಕಾಹಾರ ಕಿಟ್ ವಿತರಣೆ, ಕ್ಷಯರೋಗ ಭಯ ಬೇಡ-ಡಾ.ಸುಧಾ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕ್ಷಯ ಅಂದರೆ ಭಯ ಬೇಡ ಜಾಗೃತಿ ಇರಲಿ. ಶೀಘ್ರ ಪತ್ತೆ, ತ್ವರಿತ ಚಿಕಿತ್ಸೆಯಿಂದ ಕ್ಷಯ ನಾಶ ಮಾಡಬಹುದು ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಸಿ.ಓ.ಸುಧಾ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಜಿ.ಆರ್.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಚಿತ್ರದುರ್ಗ ತಾಲ್ಲೂಕಿನ ಎರಡು ಕ್ಷಯ ರೋಗಿಗಳನ್ನು ದತ್ತು ಪಡೆದು ಹಾಗೂ ಗುಡ್ಡದ ರಂಗವ್ವನಹಳ್ಳಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯವರು ತಲಾ ಒಂದರಂತೆ ಏಳು ಕ್ಷಯರೋಗಿಗಳನ್ನು ದತ್ತು ಪಡೆದು ಪೌಷ್ಟಿಕಾಹಾರ ಕಿಟ್ ವಿತರಣೆ ಮಾಡುವುದರ ಮೂಲಕ ಆರೋಗ್ಯ ಜಾಗೃತಿ ಮೂಡಿಸಿದರು.
ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ರಾತ್ರಿ ವೇಳೆ ಜ್ವರ, ಬೆವರುವುದು, ಕಫದಲ್ಲಿ ರಕ್ತ ತೂಕ ಇಳಿಕೆ, ಹಸಿವು ಆಗದಿರುವುದು ಕಂಡು ಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಕಫ ಪರೀಕ್ಷೆ ಮಾಡಿಸಿಕೊಳ್ಳಿ ಎಂದರು.
ಕಫ ಪರೀಕ್ಷೆ ಮಾಡಿಸುವುದರಿಂದ ಕ್ಷಯ ಬ್ಯಾಕ್ಟೀರಿಯಾ ನಮ್ಮ ದೇಹ ಸೇರಿರುವುದು ಪತ್ತೆಯಾಗುತ್ತದೆ. ಆಗ ಕ್ಷಯ ಮಾತ್ರೆಗಳನ್ನು ತೂಕಕ್ಕೆ ಮತ್ತು ವಯಸ್ಸಿಗೆ ಅನುಗುಣವಾಗಿ ಸಂಪೂರ್ಣ ಮಾತ್ರೆಗಳನ್ನು ಸೇವಿಸುವುದರಿಂದ ಕ್ಷಯ ನಾಶ ಮಾಡಬಹುದು ಎಂದು ತಿಳಿಸಿದ ಅವರು, ಯಾವುದೇ ಕಾರಣಕ್ಕೂ ಮಧ್ಯದಲ್ಲಿ ಮಾತ್ರೆಗಳನ್ನು ಬಿಡಬಾರದು ಎಂದು ಹೇಳಿದರು.
ಈ ಕ್ಷಯ ರೋಗವು ಗಾಳಿಯಿಂದ ಹರಡುವಂತಹ ರೋಗವಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಿಗೆ ಬೇಗನೆ ಹರಡಬಹುದು. ರೋಗ ಹರಡದಂತೆ ರೋಗಿಯ ಕಫ ಪರೀಕ್ಷೆ ಮಾಡಿಸಿ ತಕ್ಷಣವೇ ಚಿಕಿತ್ಸೆ ಪಡೆಯಬೇಕು. ಚಿಕಿತ್ಸೆ ಪಡೆಯುತ್ತಿರುವಾಗ ತಂಬಾಕು, ಮದ್ಯಪಾನ, ಗುಟ್ಕಾ ಈ ತರಹದ ವ್ಯಸನಗಳಿಂದ ದೂರವಿರಬೇಕು. ಜೊತೆಯಲ್ಲಿ ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಉಂಟಾಗುತ್ತದೆ ಎಂದು ತಿಳಿಸಿದರು.
ಸಮುದಾಯದಲ್ಲಿ ಪ್ರತಿಯೊಬ್ಬರಿಗೂ ಇದರ ಬಗ್ಗೆ ಅರಿವು ಮತ್ತು ಜಾಗೃತಿ ಇರಬೇಕು ಎಂದು ತಿಳಿಸಿದರು.
ಕೆಮ್ಮುವಾಗ, ಸೀನುವಾಗ ಕರವಸ್ತ್ರದಿಂದ ಬಾಯಿ ಮೂಗನ್ನು ಅಡ್ಡ ಹಿಡಿಯುವುದು. ಎಲ್ಲಿ ಬೇಕಾದಲ್ಲಿ ಉಗಳಬಾರದು ಎಂದು ತಿಳಿಸಿದರು.
ವೈದ್ಯಾಧಿಕಾರಿ ಡಾ. ಗೀತಾಂಜಲಿ ಮಾತನಾಡಿ, 2025 ರವೇಳೆಗೆ ಕ್ಷಯ ಮುಕ್ತ ಭಾರತ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಲಾದ ಮೂಗಪ್ಪ ಮಾತನಾಡಿ, ನಮ್ಮ ಹೋರಾಟ ರೋಗಿಯ ವಿರುದ್ಧ ಅಲ್ಲಾ ರೋಗದ ವಿರುದ್ಧ. ಕಫದ ಬ್ಯಾಕ್ಟೀರಿಯ ನಾಶ ಮಾಡುವಲ್ಲಿ ಎಲ್ಲರೂ ಕೈ ಜೋಡಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಾರುತಿ ಪ್ರಸಾದ್, ಮಹೇಂದ್ರ, ಮಾರುತಿ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಶಾಂತ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಿಲ್ಪ, ದ್ರಾಕ್ಷಾಯಿಣಿ, ಮಂಜುಳಾ, ನಾಗರತ್ನಮ್ಮ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಶಬಾನಾ, ಸಲ್ಮಾ, ಜಯಲತಾ, ಔಷಧಿ ವಿತರಣಾಧಿಕಾರಿಗಳಾದ ವಿಜಯಲಕ್ಷ್ಮಿ, ಶುಶ್ರೂಷಣಾಧಿಕಾರಿಗಳಾದ ಅಶ್ವಿನಿ, ಪ್ರಯೋಗಶಾಲಾ ತಂತ್ರಜ್ಞಾಧಿಕಾರಿಗಳಾದ ಚೇತನ ಹಾಗೂ ಆಶಾ ಕಾರ್ಯಕರ್ತರು, ಫಲಾನುಭವಿಗಳು ಇದ್ದರು.