i
ಜೈಲಿನಿಂದ ಬಿಡುಗಡೆಯಾದ ದುರ್ಗದ ಹುಲಿ ಬಸವರಾಜನ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅವರಿಗೆ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದ್ದು ಮಂಗಳವಾರ ಚಿತ್ರದುರ್ಗ ಕಾರಾಗೃಹದಿಂದ ಬಿಡುಗಡೆಯಾಗಿ ಮನೆ ಸೇರಿದ್ದಾರೆ.
ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಲ್ಲದೆ ಸಿಹಿ ಹಂಚಿಕೆ ಮಾಡಿದ್ದರು. ನ್ಯಾಯಾಲಯಕ್ಕೆ ಡಿ-24 ರಂದು ರಜಾ ಇರುವುದರಿಂದ ಸೋಮವಾರ ಜೈಲಿನಿಂದ ಬಿಡುಗಡೆ ಆಗಲಿದ್ದಾರೆಂದು ಅವರ ಅಭಿಮಾನಿ ತಿಳಿಸಿದ್ದರು. ಆದರೆ ಜಾಮೀನು ಮಂಜೂರಾದ ಪ್ರತಿ ಕಾರಾಗೃಹದ ಅಧಿಕಾರಿಗಳ ಕೈ ಸೇರದಿದ್ದರಿಂದಾಗಿ ಸೋಮವಾರ ಬಸವರಾಜನ್ ಬಿಡುಗಡೆಯಾಗಿರಲಿಲ್ಲ. ಡಿಸೆಂಬರ್ 27ರ ಮಂಗಳವಾರ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನು ಪ್ರತಿ ಜೈಲು ಅಧಿಕಾರಿಗಳ ಕೈ ಸೇರುತ್ತಿದ್ದಂತೆ ಬಸವರಾಜನ್ ಅವರ ಬಿಡುಗಡೆ ಪ್ರಕ್ರಿಯೆಗಳು ಮಂಗಳವಾರ ಸಂಜೆ 4 ಗಂಟೆ ವೇಳೆ ಪೂರ್ಣಗೊಂಡ ನಂತರ ಅವರು ಜೈಲಿನಿಂದ ಬಿಡುಗಡೆಯಾದರು.
ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾದ ತಕ್ಷಣ ಸಾವಿರಾರು ಅಭಿಮಾನಿಗಳೊಂದಿಗೆ ಮುರುಘಾಮಠಕ್ಕೆ ಭೇಟಿ ನೀಡಿದರಲ್ಲದೆ ಗದ್ದಿಗೆ ಪೀಠಕ್ಕೆ ನಮಸ್ಕರಿಸಿದರು. ಇದೇ ಸಂದರ್ಭದಲ್ಲಿ ಮಹಿಳೆಯರು ಆರತಿ ಮಾಡಿ ಬಸವರಾಜನ್ ಅವರಿಗೆ ದೃಷ್ಠಿ ತೆಗೆದ ಕಾರ್ಯವೂ ನಡೆಯಿತು.
ಬಸವರಾಜನ್ ಅವರ ಬಿಡುಗಡೆಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದ ಬಸವರಾಜನ್ ಅಭಿಮಾನಿಗಳು ಮಂಗಳವಾರ ನೂರಕ್ಕೆ ನೂರಷ್ಟು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎನ್ನುವ ಭರವಸೆಯೊಂದಿಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಅಲ್ಲದೆ ಅವರ ಹಿತೈಷಿಗಳು, ಅಭಿಮಾನಿಗಳು, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ದುರ್ಗದ ಹುಲಿ-
ಬಸವರಾಜನ್ ಅವರೊಂದಿಗೆ ಮುರುಘಾಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ ಅಭಿಮಾನಿಗಳ ಜೊತೆಯಲ್ಲಿ ಗದ್ದಿಗೆ ಪೂಜೆ ಪೂರ್ಣಗೊಳಿಸಿ ಹೊರ ಬರುತ್ತಿದ್ದಂತೆ ಅಭಿಮಾನದ ಕಟ್ಟೆ ಹೊಡೆದು ಜೈಕಾರಗಳ ಸುರಿಮಳೆಗೈದರು. ಅವರ ಶಿಷ್ಯರು, ಅಭಿಮಾನಿಗಳು ದುರ್ಗದ ಹುಲಿ ಎಂದು ಬಿರುದು ನೀಡಿ ಸಂಭ್ರಮಿಸಿದರು. ಸಂತೋಷ ತಾಳದೆ ಕುಣಿದು ಕುಪ್ಪಳಿಸಿದ ಅಭಿಮಾನಿಗಳು ಬಸವರಾಜನ್ ಅವರನ್ನು ಹೆಗಲ ಮೇಲೆ ಹೊರಲು ಮುಂದಾಗುತ್ತಿದ್ದಂತೆ ತಡೆದ ಬಸವರಾಜನ್ ಸಹಜವಾಗಿಯೇ ಅಭಿಮಾನಿಗಳೊಂದಿಗೆ ಹೆಜ್ಜೆ ಹಾಕಿದರು.
ಗದ್ದಿಗೆ ಪೀಠಕ್ಕೆ ಪೂಜೆ ಸಲ್ಲಿಸಿ ಮುರುಘಾಮಠದಿಂದ ನೇರವಾಗಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಇರುವ ಮನೆಗೆ ಭೇಟಿ ನೀಡಿದಾಗ ಆರತಿ ಬೆಳಗಿ ಬಸಣ್ಣನವರನ್ನು ಬರ ಮಾಡಿಕೊಳ್ಳಲಾಯಿತು.
ಅಭಿಮಾನಿಗಳ ಕಣ್ಣಲ್ಲಿ ಆನಂದಭಾಷ್ಪಗಳು ಕಂಡು ಬಂದವು. ಬಸಣ್ಣನವರ ಕೈ ಕುಲುಕಿದರು, ಕಾಲಿ ಎರಗಿ ನಮಸ್ಕರಿಸಿದರು. ಕೊನೆಗೆ ಬಸಣ್ಣನವರ ಬಾಯಿ ಬಂದ ಮಾತು ಸತ್ಯಮೇವ ಜಯತೆ ಎನ್ನುವುದಾಗಿತ್ತು.
ಬಾಡಿ ವಾರೆಂಟ್-
ಬಸವಣ್ಣನವರ ಬಿಡುಗಡೆ ಆಗುತ್ತದೆ ಎಂದು ಸಂಭ್ರಮದಲ್ಲಿದ್ದ ಕೆಲವರಿಗೆ ಬೆಳಿಗ್ಗೆ 11 ಗಂಟೆ ವೇಳೆಗೆ ಶಾಕಿಂಗ್ ನ್ಯೂಸ್ ಕಾಡಿತ್ತು. ಕೆಲವರು ವಾರ್ಡನ್ ರಶ್ಮಿ ಅವರ ಪ್ರಕರಣದಲ್ಲಿ ಬಸವರಾಜನ್ ಅವರಿಗೆ ಬಾಡಿ ವಾರೆಂಟ್ ಇದೆ ಎಂದು ವಕೀಲರಿಗೆ ಮಾಹಿತಿ ನೀಡಿದರು. ಒಂದು ಕ್ಷಣ ವಕೀಲರು ಇದು ಯಾವ ಕೇಸ್ ನಲ್ಲಿ ಬಾಡಿ ವಾರೆಂಟ್ ಎಂದು ಗಲಿಬಿಲಿಗೊಂಡರು. ಆದರೆ ಇದು ಗಾಳಿ ಸುದ್ದಿ ಎಂದು ತಿಳಿಯುತ್ತಲೆ ಎಲ್ಲರೂ ನಿಟ್ಟುಸಿರು ಬಿಟ್ಟರು.
ಏನಿದು ಪ್ರಕರಣಃ
ಅಪ್ರಾಪ್ತ ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪೋಕ್ಸೋ ಕಾಯ್ದೆ ಅಡಿ ಆರೋಪಿಯಾಗಿ ಕಾರಾಗೃಹದಲ್ಲಿರುವ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪಿತ್ತೂರು ಮಾಡಿ ಕ್ರಿಮಿನಲ್ ಸಂಚು ರೂಪಿಸಿದ ಆರೋಪದಡಿ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅವರನ್ನು ಬಂಧಿಸಲಾಗಿತ್ತು. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಹಿರಿಯ ವಕೀಲ ಹಷ್ಮತ್ ಪಾಷ ಬಸವರಾಜನ್ ಪರವಾಗಿ ವಾದ ಮಂಡಿಸಿ, ನಮ್ಮ ಕಕ್ಷಿದಾರರ ವಿರುದ್ಧ ಹೊರಿಸಲಾಗಿರುವ ಪ್ರಕರಣ ರಾಜಕೀಯ ದುರುದ್ದೇಶದಿಂದ ಕೂಡಿದೆ. ಮುರುಘಾ ಮಠದ ಉಸ್ತುವಾರಿ ಸ್ವಾಮೀಜಿ ಬಸವಪ್ರಭು ಸುಳ್ಳು ದೂರು ದಾಖಲು ಮಾಡಿದ್ದು ಯಾವುದೇ ಕೃತ್ಯ ಎಸಗದಿದ್ದರೂ ನ್ಯಾಯಾಂಗ ಬಂಧನದಲ್ಲಿರಿಸುವುದು ಕಾನೂನು ಬಾಹಿರವಾಗಿದೆ. ಆದ್ದರಿಂದ ಜಾಮೀನು ಮಂಜೂರು ಮಾಡುವಂತೆ ವಾದ ಮಂಡಿಸಿದ್ದರು. ಇವರ ವಾದ ಆಲಿಸಿದ ನ್ಯಾಯಾಲಯ ಎಸ್.ಕೆ.ಬಸವರಾಜನ್ ಅವರಿದಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದನ್ನ ಸ್ಮರಿಸಬಹುದಾಗಿದೆ.