i
ಸಮಯದ ಸಾವು-ರವಿನಾಗ್ ತಾಳ್ಯ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಮಯದ ಸಾವು
ಉರುಳುತಿಹುದು ಕಾಲಚಕ್ರ
ನೆನಪಿನ ಸುರುಳಿಯ ಸುತ್ತುತಲಿ
ನೋವು ನಲಿವು ಮೆಲ್ಲುತಲಿ
ಮುನ್ನಡೆವುದಷ್ಟೇ ಚಕ್ರದ ಗುರಿಯು
ಹಿಂದಕೆ ತಿರುಗುವ ಮಾತೇ ಇಲ್ಲ
ಮುಂದಕೆ ಉರುಳಲು ಅಂಜಿಕೆ ಇಲ್ಲ
ಚಕ್ರದ ಹಿಂದೆ ಸವೆದಿದೆ ಬದುಕು
ಸುತ್ತುತ ಬಿತ್ತುತ ನೆನಪುಗಳ
ಕಳಚುತ ಬೆಳೆಸುತ ಬಂಧಗಳ
ಸಮಯದ ಕುರುಹುಗಳಷ್ಟೇ ಜೀವಂತ
ಸಮಯಕೂ ಪ್ರತಿ ಕ್ಷಣ ಸಾವಿನ ಪುಳಕ
ಸಮಯದ ಸಾವಲಿ ಬದುಕುವ ತವಕ
ಸ್ಥಾವರ ಜಂಗಮಗಳೆಲ್ಲ ಕಾಲದ ವಶವು
ಎಲ್ಲದಕೂ ಇಲ್ಲಿ ಅಂತ್ಯವಿದೆ
ಸಮಯವೇ ಇಲ್ಲಿ ಸಾಯುತಿದೆ
ಸಾಯುವ ಸಮಯಕೆ ಸಂಭ್ರಮವೇತಕೆ
ಪ್ರತಿ ಕ್ಷಣ ನಿನ್ನದೆ ಆಸ್ವಾದಿಸು
ನಿನಗಿತ್ತ ಪಾಳಿಯ ನಿರ್ವಹಿಸು
ಸಾಯುವ ಕ್ಷಣಗಳು ಬದುಕು ಕ್ಷಣಿಕ ಎಂದಿವೆ
ಸಾಯುವ ಕ್ಷಣಕೂ ಜೀವ ನೀಡು ಸಾಧನೆಯೊಂದಿಗೆ
ಬದುಕಿದ ಕ್ಷಣಗಳ ಬಿಟ್ಟು ಹೋಗು ನೆನಪುಗಳೊಂದಿಗೆ
ನಿನಗಿತ್ತ ಬದುಕಿನ ಪ್ರತಿ ಕ್ಷಣವೂ ಹೊಸದೇ
ಇರಲಿ ಬದುಕಿದ ಸಂಭ್ರಮಾಚರಣೆ ಅನುಕ್ಷಣ
ಪ್ರತಿ ಕ್ಷಣವೂ ಅಮೂಲ್ಯ, ಬೇಡ ಕಾಲಹರಣ
✍️ ಕವಿತೆಃರವಿನಾಗ್ ತಾಳ್ಯ…