i
ಖ್ಯಾತ ಪ್ರವಚನಕಾರರು, ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ಇನ್ನಿಲ್ಲ…
ಚಂದ್ರವಳ್ಳಿ ನ್ಯೂಸ್, ವಿಜಯಪುರ:
ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಖ್ಯಾತ ಪ್ರವಚನಕಾರರು, ನಡೆದಾಡುವ ದೇವರು, ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಇಹಲೋಕ ತ್ಯಜಿಸಿದ್ದಾರೆ.
ಕಳೆದ ಡಿಸೆಂಬರ್ 10ರಿಂದ ಸಿದ್ದೇಶ್ವರ ಸ್ವಾಮೀಜಿ ಅವರ ಅನಾರೋಗ್ಯ ಬಗ್ಗೆ ಸುದ್ದಿ ಹೊರ ಬಂದಿತ್ತು..ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಅನಾರೋಗ್ಯದ ಮಧ್ಯೆಯೂ ಸಿದ್ದೇಶ್ವರ ಶ್ರೀಗಳು ನಿತ್ಯ ಮಧ್ಯಾಹ್ನ 1 ಗಂಟೆಗೆ ಭಕ್ತರಿಗೆ ದರ್ಶನ ನೀಡುತ್ತಿದ್ದರು.. ನಡೆದಾಡುವ ದೇವರು ಎಂದೇ ಜಗತ್ತಿನಾದ್ಯಂತ ಪ್ರಖ್ಯಾತರಾಗಿದ್ದ ಸಿದ್ದೇಶ್ವರ ಸ್ವಾಮೀಜಿ ನಡೆದು ಬಂದ ದಾರಿ ಇಲ್ಲಿದೆ..
ಜನನ-ಸಿದ್ದೇಶ್ವರ ಸ್ವಾಮೀಜಿ ಪೂರ್ವಾಶ್ರಮದ ಹೆಸರು ಸಿದ್ದಗೊಂಡಪ್ಪ. 1941 ಅಕ್ಟೋಬರ್ 24 ರಂದು ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ಸಿದ್ದಗೊಂಡಪ್ಪನವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜನಿಸಿದ್ದರು. ಸಂಗಮ್ಮ, ಓಗಪ್ಪ ಬಿರಾದಾರ ಪಾಟೀಲ್ ದಂಪತಿಯ ಹಿರಿಯ ಪುತ್ರನೇ ಸಿದ್ದಗೊಂಡಪ್ಪ. ಬಿಜ್ಜರಗಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿವರೆಗೆ ವ್ಯಾಸಂಗ ಮಾಡಿದ ಶ್ರೀಗಳು ಸಿದ್ದೇಶ್ವರ ಸ್ವಾಮೀಜಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಮುಗಿಸಿದ್ದರು. ಮಹಾರಾಷ್ಟ್ರದ ಕೊಲ್ಹಾಪುರ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ವಿಷಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದರು. ಸಿದ್ದೇಶ್ವರ ಸ್ವಾಮೀಜಿ ಆಧ್ಯಾತ್ಮದ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದರು. ಕನ್ನಡ, ಸಂಸ್ಕೃತ,ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಸಿದ್ದೇಶ್ವರ ಸ್ವಾಮೀಜಿ ನಿಪುಣರಾಗಿದ್ದರು.
1957ರಲ್ಲಿ ಮಲ್ಲಿಕಾರ್ಜುನ ಶ್ರೀ ಚಡಚಣದಲ್ಲಿ ಪ್ರವಚನ ಆರಂಭಿಸಿದ್ದರು. ಈ ವೇಳೆ ಮಲ್ಲಿಕಾರ್ಜುನ ಶ್ರೀಗಳ ಕಣ್ಣಿಗೆ ಬಿದ್ದಿದ್ದು ಸಿದ್ದಗೊಂಡರು. ಆ ಸಮಯದಲ್ಲಿ ಮಲ್ಲಿಕಾರ್ಜುನ ಶ್ರೀಗಳು ಸಿದ್ದಗೊಂಡನನ್ನ ಅಧಿಕೃತ ಶಿಷ್ಯನಾಗಿ ಸ್ವೀಕರಿಸಿದ್ದರು. ಬಾಲಕ ಸಿದ್ಧೇಶ್ವರನ ಚುರುಕುತನ ಮಲ್ಲಿಕಾರ್ಜುನ ಸ್ವಾಮಿಗಳ ಗಮನಕ್ಕೆ ಬಂತು. ಮಲ್ಲಿಕಾರ್ಜುನ ಸ್ವಾಮೀಜಿ ತಮ್ಮ ಪ್ರವಚನ ಮಾಡುವ ಸ್ಥಳಗಳಿಗೆ ಸಿದ್ದೇಶ್ವರರನ್ನು ಕರೆದುಕೊಂಡು ಹೋಗುತ್ತಿದ್ದರು. ಮಲ್ಲಿಕಾರ್ಜುನ ಶ್ರೀಗಳೇ ಸಿದ್ದಗೊಂಡನನ್ನ ಸಿದ್ದೇಶ್ವರ ಎಂದು ಮರುನಾಮಕರಣ ಮಾಡಿದ್ದರು.
ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಸಿದ್ದೇಶ್ವರ ಸ್ವಾಮೀಜಿ. ನನ್ನದು-ತನ್ನದೆಂಬ ಮಮಕಾರ ತೊರೆದಿದ್ದವರು ಸಿದ್ದೇಶ್ವರ ಸ್ವಾಮೀಜಿ. ಸಿದ್ದೇಶ್ವರ ಸ್ವಾಮೀಜಿ ಯಾವತ್ತೂ ಕಾವಿ ಬಟ್ಟೆ ತೊಡಲಿಲ್ಲ, ಬದಲಾಗಿ ಬಿಳಿ ಬಣ್ಣದ ಬಟ್ಟೆ, ಕಿಸೆ ಇಲ್ಲದ ಶರ್ಟ್ ಹಾಕಿಕೊಳ್ಳುತ್ತಿದ್ದರು. ಸಿದ್ದೇಶ್ವರ ಸ್ವಾಮೀಜಿ ಪ್ರವಚನ ಎಲ್ಲಿಯೇ ಇದ್ದರೂ ಸಾವಿರಾರು ಭಕ್ತರು ಸೇರುತ್ತಿದ್ದರು. ಸಿದ್ದೇಶ್ವರ ಸ್ವಾಮೀಜಿ ಪ್ರವಚನ ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ದೇಶ ವಿದೇಶಗಳಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರವಚನ ಫೇಮಸ್ ಆಗಿತ್ತು. ಸಿದ್ದೇಶ್ವರ ಸ್ವಾಮೀಜಿ ಪ್ರವಚನದಲ್ಲಿ ಪ್ರಕೃತಿಯ ವಸ್ತುಗಳೇ ವಿಷಯ ವಸ್ತುಗಳಾಗಿರುತ್ತಿದ್ದವು. ಕಲ್ಲು, ಮಣ್ಣು, ಗಿಡ, ಮರ, ಹೂ, ಪಕ್ಷಿ, ಪ್ರಾಣಿಗಳಲ್ಲಿ ಜೀವಚೈತನ್ಯವಿದೆ ಎಂದು ಶ್ರೀಗಳು ವಿವರಿಸುತ್ತಿದ್ದ ರೀತಿ ಅದ್ಬುತ ಆಗಿರುತ್ತಿತ್ತು.
ಶಿಕ್ಷಣದ ನಂತರ ವಿಜಯಪುರಕ್ಕೆ ಆಗಮಿಸಿದ ಸಿದ್ದೇಶ್ವರರಿಗೆ ಭಗವದ್ಗೀತೆಯ ಬಗ್ಗೆ ಆಸಕ್ತಿ ಹೆಚ್ಚಾಗಿತ್ತು. ಉಪನಿಷತ್ತುಗಳು, ಭಗವದ್ಗೀತೆ, ಯೋಗಸೂತ್ರ, ವಚನಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ ಪ್ರವಚನ ನೀಡುತ್ತಿದ್ದರು. ಗಹನವಾದ ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನಮಾನಸದಲ್ಲಿ ಉಳಿಯುವಂತೆ ವಿವರಿಸುವುದೇ ಅವರ ವೈಶಿಷ್ಟ್ಯ ಶ್ರೀ ಸಿದ್ದೇಶ್ವರ ಪ್ರವಚನ, ಭಾಷಣಗಳು ಪ್ರತಿಯೊಬ್ಬರ ಜೀವನದಲ್ಲಿ ಅದ್ಭುತ ರೂಪಾಂತರವನ್ನು ತಂದಿವೆ. ಸಿದ್ದೇಶ್ವರ ಸ್ವಾಮೀಜಿ ಉಪನ್ಯಾಸ ಸರಣಿಯ ಬದುಕುವದು ಹೇಗೆ ನಾವು ಹೇಗೆ ಬದುಕಬೇಕು, ದಾರಿ ಮಾಡಿಕೊಳ್ಳಬೇಕು ಎಂಬ ಪ್ರವಚನ ಹೆಚ್ಚು ಪ್ರಚಾರವಾಗಿದೆ. ಸಿದ್ದೇಶ್ವರ ಸ್ವಾಮೀಜಿ ಅಲ್ಲಮ ಪ್ರಭುವಿನ ವಚನಗಳ ಮೇಲೆ ಅಧಿಕೃತ ಭಾಷಣಕಾರರಾಗಿದ್ದು ವಿಶೇಷ.
ಸಿದ್ದೇಶ್ವರ ಶ್ರೀಗಳು ಸರಳ, ಸ್ಪೂರ್ತಿದಾಯಕ ಜೀವನ ಶೈಲಿಯನ್ನು ಹೊಂದಿದ್ದರು. 2018ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ನಾಗರಿಕ ಪ್ರಶಸ್ತಿಗೆ ಆಯ್ಕೆ ಆಗಿದ್ದರು. ಆದರೆ, ಪ್ರಶಸ್ತಿ ಘೋಷಿಸಿದ ವೇಳೆಯೇ ಸಿದ್ದೇಶ್ವರ ಸ್ವಾಮೀಜಿ ನಿರಾಕರಿಸಿದ್ದರು. ಪ್ರಶಸ್ತಿ ಬಗ್ಗೆ ಅಪಾರ ಗೌರವವಿದೆ. ನಾನೊಬ್ಬ ಸರಳ ವ್ಯಕ್ತಿ. ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವ ಉದ್ದೇಶ ನನ್ನದು. ಪ್ರಶಸ್ತಿಗಳ ಅವಶ್ಯತೆ ನನಗಿಲ್ಲ. ಎಲ್ಲ ಗೌರವಾಧರಗಳೊಂದಿಗೆ ಈ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದೇನೆ. ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಕ್ಕೆ ಧನ್ಯವಾದಗಳು. ಅನ್ಯತಾ ಭಾವಿಸದಿರಿ ಎಂದು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಪದ್ಮಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪ್ರಕಟಿಸಿತ್ತು. ಆದರೆ ಶ್ರೀಗಳು ಆ ಪದವಿಯನ್ನೂ ಸ್ವೀಕರಿಸಿರಲಿಲ್ಲ. ಸಿದ್ದೇಶ್ವರ ಶ್ರೀಗಳು ತಮಗೆ ಸಂದ ಎಷ್ಟೋ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಅವರು ವಿನಮೃವಾಗಿಯೇ ನಿರಾಕರಿಸಿದ್ದಾರೆ. ಇಂತಹ ನೈಜ ಸರಳ ಜ್ಞಾನಯೋಗರ ಅಗತ್ಯ ಎಲ್ಲ ಸಮಾಜಕ್ಕೂ ಬೇಕಿದೆ.