i
ಸಚಿವ ಆನಂದ್ ಸಿಂಗ್ ಬಿಜೆಪಿ ತೊರೆಯುತ್ತಾರಾ?…
ಚಂದ್ರವಳ್ಳಿ ನ್ಯೂಸ್, ಕೊಪ್ಪಳ:
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಕುರಿತು ಮೆಚ್ಚುಗೆ ಮಾತನಾಡಿರುವ ಸಚಿವ ಆನಂದ್ ಸಿಂಗ್ ಬಿಜೆಪಿ ತೊರೆದು ಜನಾರ್ಧನರೆಡ್ಡಿ ಅವರ ಹೊಸ ಪಕ್ಷ ಸೇರುತ್ತಾರಾ ಎನ್ನುವ ಅನುಮಾನ ಮೂಡಿದೆ.
ಜನಾರ್ಧನರೆಡ್ಡಿ ಕುರಿತು ಸುದ್ದಿಗಾರರ ಜತೆ ಮಾತನಾಡಿರುವ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಜನಾರ್ಧನರೆಡ್ಡಿ ಅವರು ಹೊಸ ಪಕ್ಷ ಮಾಡಿರುವ ವಿಷಯ ಕೆಲವರಿಂದ ಕೇಳಿದ್ದೇನೆ. ಅವರು ನನ್ನ ಅತ್ಯಂತ ಆತ್ಮೀಯ ಸ್ನೇಹಿತರು. ಇಂದು ನಾನೇನಾದರೂ ರಾಜಕೀಯದಲ್ಲಿ ಬಂದಿದ್ದೇನೆ ಎಂದರೆ ಅವರೇ ಪ್ರಮುಖ ಕಾರಣ ಎಂದು ಹೇಳುವ ಮೂಲಕ ಬಿಜೆಪಿ ಬಿಡುತ್ತಾರಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.
ನಾನು 2008ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದಾಗ ಅವರೇ ನನಗೆ ಸ್ಪರ್ಧೆ ಮಾಡುವಂತೆ ಹೇಳಿದರು. ಅವರು ನನಗೆ ಧೈರ್ಯ ತುಂಬಿದ ಸ್ನೇಹಿತ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದರೂ ಪಕ್ಷ ಕಟ್ಟಬಹುದು. ನಾನು ಅವರಿಗೆ ಶುಭ ಕೋರಬಹುದೇ ವಿನಃ ಮತ್ತೇನೂ ಮಾಡಲು ಆಗಲ್ಲ. ನನ್ನ ಹಾಗೂ ಅವರ ಸ್ನೇಹ ಯಾವತ್ತೂ ಇರುತ್ತದೆ. ಚುನಾವಣೆ ಮೊದಲೂ ಸ್ನೇಹ ಇದೆ. ಚುನಾವಣೆ ನಂತರವೂ ನನ್ನ ಸ್ನೇಹ ಇರುತ್ತದೆ. ನಮ್ಮ ಸ್ನೇಹದಲ್ಲಿ ಯಾವುದೇ ಬಿರುಕಿಲ್ಲ. ರೆಡ್ಡಿ ಅವರನ್ನು ಬಿಜೆಪಿಗೆ ವಾಪಸ್ ಕರೆ ತರಲು ನಾನು ಅವರ ಮನವೊಲಿಸುವಂತಹ ದೊಡ್ಡ ವ್ಯಕ್ತಿಯಲ್ಲ. ಅದನ್ನು ವರಿಷ್ಠರು ನೋಡಿಕೊಳ್ಳುತ್ತಾರೆ. ರೆಡ್ಡಿ ಅವರ ವಿಚಾರದಲ್ಲಿ ಭವಿಷ್ಯ ಹೇಳಲಾಗಲ್ಲ ಎಂದು ತಿಳಿಸಿದರು.