i
ಸಿದ್ದೇಶ್ವರ ಸ್ವಾಮೀಜಿ ಶವಸಂಸ್ಕಾರಕ್ಕೆ ಅಪಸ್ವರ ಏಕೆ…
ಚಂದ್ರವಳ್ಳಿ ನ್ಯೂಸ್, ವಿಜಯಪುರ:
ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ನಮ್ಮನ್ನು ಅಗಲಿದ್ದಾರೆ. ಸ್ವಾಮೀಜಿಯವರು 2014 ರಲ್ಲಿ ಬರೆದಿಟ್ಟಿರುವ ಉಯಿಲು ಪತ್ರದ ಪ್ರಕಾರ ಅವರ ಕಳೇಬರವನ್ನು ಭೂಮಿಯಲ್ಲಿ ಹೂಳುವುದರ ಬದಲು ಅಗ್ನಿ ಸ್ಪರ್ಶ ಮಾಡಿ ಚಿತಾಭಸ್ಮವನ್ನು ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಿ ಶ್ರಾದ್ಧಿಕ ಕ್ರಿಯಾವಿಧಿಗಳನ್ನು ನೆರವೇರಿಸಬೇಕೆಂದು ತಮ್ಮ ಇಚ್ಚೆ ವ್ಯಕ್ತಪಡಿಸಿದ್ದಾರೆ. ಅದರಂತೆ ಅವರ ಶವಸಂಸ್ಕಾರ ವಿಧಿಗಳನ್ನು ಅನುಸರಿಸಲಾಗುತ್ತಿದೆ.
Mahantesh Kalburgi : ಸಿದ್ದೇಶ್ವರ ಸ್ವಾಮೀಜಿ ಸಂತರಾಗಿದ್ದರು. ಅವರು ಶರಣರಲ್ಲ. ಹಾಗಾಗಿ ಲಿಂಗಾಯತ ವಿರೋಧಿಯಾಗಿ ಶವಸಂಸ್ಕಾರ ಮಾಡಲಾಗುತ್ತಿದೆ.
ವಡ್ಡಗೆರೆ ನಾಗರಾಜಯ್ಯ : ಸಿದ್ದೇಶ್ವರ ಸ್ವಾಮೀಜಿಯವರು ಸಂತನೂ ಅಲ್ಲ ಶರಣನೂ ಅಲ್ಲ. ಅಸಾಮಾನ್ಯ ಸಾಧಕ ವ್ಯಕ್ತಿತ್ವವೇನಲ್ಲ. ಸ್ವಲ್ಪಮಟ್ಟಿಗೆ ಬಲಪಂಥೀಯ ಸಿದ್ಧಾಂತವನ್ನು ಅನುಸರಿಸುತ್ತಿದ್ದ ಒಬ್ಬ ಸರಳ ಸಾಧಾರಣ ವ್ಯಕ್ತಿಯಾಗಿದ್ದರು.
“ಸಂತ – ಸನ್ಯಾಸಿ – ಯತಿ – ವಿರಾಗಿ” ಎನ್ನಿಸಿಕೊಂಡವರಿಗೆ ಯಾವುದೇ ಧರ್ಮದ, ಯಾವುದೇ ಭಾಷೆಯ, ಯಾವುದೇ ವ್ಯಕ್ತಿಯ, ಯಾವುದೇ ಪ್ರಾಂತ್ಯದ, ಯಾವುದೇ ಜಾತಿಯ, ಯಾವುದೇ ಪ್ರಭುತ್ವದ ಹಂಗುಗಳಾಗಲೀ ಸೂತಕಗಳಾಗಲೀ ಇರುವುದಿಲ್ಲ. ಅನಿಕೇತನ ಪ್ರಜ್ಞೆಯ ಯಾರೇ ಸಂತ ಮಹಾಂತರು ಇಂತಹ ಮಾನವ ನಿರ್ಮಿತ ಕುಬ್ಜ ರಚನೆಗಳ ಚೌಕಟ್ಟಿನಲ್ಲಿ ಸಿಲುಕಿ ವ್ಯಸನಿಗಳಾಗಿ ನರಳುವುದಿಲ್ಲ. ಸಂತರು ಇಂತಹ ಎಲ್ಲ ರೀತಿಯ ಹಿತಾಸಕ್ತಿಗಳನ್ನು ಮೋಹಗಳನ್ನು ತೊರೆದಿರುತ್ತಾರೆ.
ಬುದ್ಧಗುರು ನಿರ್ವಾಣ ಹೊಂದುವ ಪೂರ್ವದಲ್ಲಿ ಅನುಯಾಯಿಗಳು ಆತನ ಕಳೇಬರವನ್ನು ಸಂಸ್ಕಾರ ಮಾಡುವ ವಿಧಿವಿಧಾನಗಳನ್ನು ಕುರಿತ ಇಚ್ಛೆಯನ್ನು ತಿಳಿಯಲು ಪ್ರಯತ್ನಿಸುತ್ತಾರೆ. ಆಗ ಬುದ್ಧಗುರುವು, ‘ಪ್ರತಿಯೊಂದು ಜೀವೋತ್ಪತ್ತಿಗೂ ಹುಟ್ಟು ಇರುವಂತೆಯೇ ಸಾವು ಕೂಡಾ ಸಹಜವಾದದ್ದು. ವಿಸರ್ಜನೆ ಮಾಡಿದ ದೇಹಕ್ಕೆ ಯಾವುದೇ ಅಂತಿಮ ಕ್ರಿಯಾವಿಧಿಗಳನ್ನು ನೆರವೇರಿಸುವುದಾದರೂ ಯಾಕೆ ಬೇಕು? ವಿಸರ್ಜನೆ ಮಾಡಲಾದ ನಂತರದ ದೇಹಕ್ಕೆ ಕೈಗೊಳ್ಳುವ ವಿಧಿಗಳ ಬಗ್ಗೆ ಬದುಕಿರುವಾಗಲೇ ವ್ಯಸನಿಗಳಾಗಬಾರದು” ಎಂದು ಉತ್ತರಿಸುತ್ತಾನೆ.
Prakash Kashetty Talikoti : ಡಾ.ವಡ್ಡಗೆರೆ ನಾಗರಾಜಯ್ಯನವರೇ, ಹಾಗಾದರೆ ಸಿದ್ದೇಶ್ವರ ಸ್ವಾಮೀಜಿಯವರು ಒಬ್ಬ ವ್ಯಕ್ತಿಯ ಹೊಗಳಿಕೆಯ ಮೋಹವನ್ನೂ ತೊರೆಯಬೇಕಾಗಿತ್ತು, ಅಲ್ಲವೇ ?
ವಡ್ಡಗೆರೆ ನಾಗರಾಜಯ್ಯ: ಪ್ರಕಾಶ್ ತಾಳಿಕೋಟೆಯವರೇ ನಿಮ್ಮ ಮಾತು ನಿಜ. ಹೊಗಳಿಕೆ ಮತ್ತು ತೆಗಳಿಕೆ ಎರಡೂ ಯಾವ ಬಗೆಯಲ್ಲಿ ಅಭಿವ್ಯಕ್ತಿಯಾಗಬೇಕೆಂಬುದು ಮುಖ್ಯ. ಹೊಗಳುವವರು ತೀವ್ರವಾಗಿ ತೆಗಳಲು ಕೂಡಾ ಸಿದ್ಧರಾಗಬೇಕು. ಉದಾಹರಣೆಗೆ ವಾಗ್ಗೇಯಕಾರ ಅನ್ನಮಯ್ಯನು ತಿರುಪತಿ ತಿಮ್ಮಪ್ಪನನ್ನು ಹೊಗಳುವಷ್ಟೇ ತೀವ್ರವಾಗಿ ತೆಗಳುತ್ತಾನೆ. ಹಾಗೆಯೇ ಕರಸ್ಥಲ ಲಿಂಗವನ್ನು ಚಿತ್ಕಳೆಯನ್ನಾಗಿಯೂ ಅರಿವಿನ ಕುರುಹನ್ನಾಗಿಯೂ ಕಂಡ ಅಲ್ಲಮಪ್ರಭು ಲಿಂಗವನ್ನು ಕೂಡಾ ಒಂದು ಅಪ್ರಮಾಣವನ್ನಾಗಿ ನೋಡುತ್ತಾನೆ. ಅಂಗದ ಮೇಲಿನ ಲಿಂಗಸಾಹಿತ್ಯಕ್ಕೆ ಕುರುಹಾಗಿ ಗುಹೇಶ್ವರನನ್ನು ಕಾಣುತ್ತಲೇ “ಗುಹೇಶ್ವರನೆಂಬುದೊಂದು ಕಿಂಚಿತ್” ಎನ್ನುತ್ತಾನೆ ಅಲ್ಲಮಪ್ರಭು. ಹೀಗಾಗಿ ವ್ಯಕ್ತಿಯ ಹೊಗಳಿಕೆಯ ಮೋಹವೂ ಇರಬಾರದು. ನಮ್ಮನ್ನು ಅಗಲಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ.