i
ಹಿರಿಯೂರು ಜೆಡಿಎಸ್ ಅಭ್ಯರ್ಥಿ ಘೋಷಣೆ ಮತ್ತೆ ಮುಂದೂಡಿಕೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ಮತ್ತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮತ್ತೆ ಜನವರಿ-21ರ ತನಕ ಸಮಯ ನೀಡಲಾಗಿದೆ ಎನ್ನಲಾಗಿದೆ.
ಪ್ರಬಲ ಟಿಕೆಟ್ ಆಕಾಂಕ್ಷಿಗಳಾದ ಜಿಪಂ ಮಾಜಿ ಅಧ್ಯಕ್ಷ ಎಂ.ಜಯಣ್ಣ, ಶ್ರಾವಣಗೆರೆ ಶಿವಪ್ರಸಾದ್ ಗೌಡ ಇಬ್ಬರು ಕೊನೆಯ ಅವಕಾಶವಾಗಿ ಜನವರಿ-21ರ ತನಕ ಸಮಯ ನೀಡಿ, ಆ ವೇಳೆಗೆ ನಿಮಗೆ ನಂಬಿಕೆ ಬರುವಷ್ಟು ನಾವು ಸಾಮರ್ಥ್ಯ ತೋರಿಸದಿದ್ದಲ್ಲಿ ನೀವು ಚಿತ್ರದುರ್ಗ ನಿರ್ಮಿತಿ ಕೇಂದ್ರದ ಜಿಲ್ಲಾ ಯೋಜನಾಧಿಕಾರಿ ಕೆ.ಜಿ.ಮೂಡಲಗಿರಿಯಪ್ಪ ಅಥವಾ ನಿವೃತ್ತ ಮುಖ್ಯ ಇಂಜಿನಿಯರ್ ಎಂ.ರವೀಂದ್ರಪ್ಪ ಇವರುಗಳ ಪೈಕಿ ಯಾರಿಗೆ ಟಿಕೆಟ್ ನೀಡಿದರೂ ಒಮ್ಮತದಿಂದ ಗೆಲ್ಲಿಸಿಕೊಂಡು ಬರುವ ಕಾರ್ಯ ಮಾಡುತ್ತೇವೆ ಎಂದು ಮನವಿ ಮಾಡಿದ್ದು ಇದಕ್ಕೆ ಕುಮಾರಸ್ವಾಮಿ ಅಸ್ತು ಎಂದಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಸ್ಥಳೀಯರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದರೆ ಖಂಡಿತ ಗೆದ್ದು ಬರುತ್ತೇವೆ, ಯಾವುದೇ ಕಾರಣಕ್ಕೂ ಅನುಮಾನ ಬೇಡ ಎಂದು ಒಮ್ಮತದಿಂದ ಜೆಡಿಎಸ್ ನಾಯಕರಿಗೆ ನಾಲ್ಕು ಮಂದಿ ಭರವಸೆ ಮೂಡಿಸಿದರು ಎನ್ನಲಾಗಿದೆ. ಹಾಗಾಗಿ ಕೊನೆಯ ಅವಕಾಶವಾಗಿ ಜನವರಿ-21ರ ತನಕ ಅಭ್ಯರ್ಥಿ ಘೋಷಣೆಗೆ ಕಾದು ನೋಡುವ ತಂತ್ರ ಬಳಸಿದ್ದಾರೆ ಎನ್ನಲಾಗುತ್ತಿದೆ.