i
ಬಿಜೆಪಿ ಭಾವನೆಗಳ ಮೇಲೆ ದೇಶ ಕಟ್ಟಲು ಹೊರಟರೆ ಕಾಂಗ್ರೆಸ್ ಬದುಕಿನ ಮೇಲೆ ದೇಶ ಕಟ್ಟಲು ಹೊರಟಿದೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಿಜೆಪಿ ಭಾವನೆಗಳ ಮೇಲೆ ದೇಶ ಕಟ್ಟಲು ಹೊರಟರೆ ಕಾಂಗ್ರೆಸ್ ಬದುಕಿನ ಮೇಲೆ ದೇಶ ಕಟ್ಟಲು ಹೊರಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜ್ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಐಕ್ಯತಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಐತಿಹಾಸಿಕ ಐಕ್ಯತಾ ಸಮಾವೇಶ ಜವಬ್ದಾರಿ ವಹಿಸಿದ ಎಲ್ಲಾ ನಾಯಕರಿಗೆ ಧನ್ಯವಾದ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಈ ಐತಿಹಾಸಿಕ ಸಮಾವೇಶ ರಾಷ್ಟ್ರದ ಎಲ್ಲಾ ಪಕ್ಷಗಳಿಗೆ ಸಂದೇಶ ನೀಡುತ್ತಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ವೇಳೆ ತೋರಿಸಿದ ಪ್ರೀತಿ ದೇಶಕ್ಕೆ ಶಕ್ತಿ ತುಂಬಿದೆ. ಈ ಐಕ್ಯತಾ ಸಮಾವೇಶ ಭಾರತ್ ಜೋಡೋ ಯಾತ್ರೆ ಜೊತೆ ಹೆಜ್ಜೆ ಹಾಕುತ್ತಿದೆ ಎಂದು ಡಿಕೆಶಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಕಾಂಗ್ರೆಸ್ ಗೆ ದಲಿತ ಶಕ್ತಿ ಇದೆ. ಕಾಂಗ್ರೆಸ್ ಪಕ್ಷ ಬೃಹತ್ ಆಲದ ಮರದ ರೀತಿ ನಿಂತಿದೆ. ಕಾಂಗ್ರೆಸ್ ಪಕ್ಷದ ಬುನಾದಿ ತಾವುಗಳಾಗಿದ್ದೀರಾ. ಅಂಬೇಡ್ಕರ್ ನಾಯಕತ್ವದಲ್ಲಿ ದೇಶದ ರಕ್ಷಣೆಗೆ ಸಂವಿಧಾನ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಮ್ಮ ಪಕ್ಷ ಮುನ್ನಡೆಯುತ್ತಿದೆ. ಮಹಾತ್ಮ ಗಾಂಧಿ , ಸುಭಾಷ್ ಚಂದ್ರ ಬೋಸ್, ಬಾಬು ಜಗಜೀವನ್ ರಾವ್ ಅಲಂಕರಿಸಿದ ಸ್ಥಾನ ಖರ್ಗೆ ಅವರು ಅಲಂಕರಿಸಿದ್ದಾರೆ.
ಈ ಸ್ಥಾನ ಯಾರೋ ಕೊಟ್ಟೋ ಸ್ಥಾನವಲ್ಲ 50 ವರ್ಷಗಳ ಕಾಲ ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿದು ಪಡೆದಿದ್ದು. ಖರ್ಗೆ ಅವರ ನಾಯಕತ್ವದಲ್ಲಿ ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡುವ ಪ್ರತಿಜ್ಞೆ ಮಾಡಬೇಕು ಎಂದು ಕರೆ ನೀಡಿದರು.
ದಲಿತರ ಶಕ್ತಿ ಈ ದೇಶದ ಶಕ್ತಿ, ನಾವೆಲ್ಲ ಒಗ್ಗೂಡಿ ಕೆಲಸ ಮಾಡಬೇಕು.
ರಾಜ್ಯದಲ್ಲಿ 136 ಸ್ಥಾನ ಗಳಿಸಿ ಅಧಿಕಾರಕ್ಕೆ ಬರುವ ಭರವಸೆ ಇದೆ.
ಬೂತ್ ಮಟ್ಟದಿಂದ ನಮ್ಮ ಪಕ್ಷ ದೊಡ್ಡ ಶಕ್ತಿಯಾಗಿ ಉಳಿದಿದೆ. ಸಂವಿಧಾನ ಉಳಿಸಿ, ದೇಶ ಒಗ್ಗೂಡಿಸಬೇಕಿದೆ. ಬಿಜೆಪಿ ನಾಯಕರು ಭಾವನೆಗಳ ಮೇಲೆ ದೇಶ ಕಟ್ಟಲು ಹೊರಟಿದೆ. ಕಾಂಗ್ರೆಸ್ ಪಕ್ಷ ಜನರ ಬದುಕಿನ ಮೇಲೆ ದೇಶ ಕಟ್ಟಲು ಹೊರಟಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಸುಳ್ಳಿನ ಕಂತೆಗಳಿಗೆ ಯಾರೂ ಕೂಡಾ ಬಲಿಯಾಗಬೇಡಿ. ಬಿಜೆಪಿಗೆ ಸುಳ್ಳು ಮನೆ ದೇವರಾಗಿದೆ, ಸುಳ್ಳಿಲ್ಲದೆ ಬಿಜೆಪಿಯವರು ಬದುಕಲು ಸಾಧ್ಯವಿಲ್ಲ. ಕೊಟ್ಟ ಮಾತು, ಭರವಸೆ ಉಳಿಸಿಕೊಳ್ಳಲು ಬಿಜೆಪಿಯಿಂದ ಆಗಿಲ್ಲ. ಬಿಜೆಪಿಯದು ಜನಾದೇಶದ ಸರ್ಕಾರ ಅಲ್ಲ, ಆಪರೇಷನ್ ಕಮಲದ ಸರ್ಕಾರ. ಒಂದು ವರ್ಷದ ಹಿಂದೆ ಮೇಕೆದಾಟು ಕಾರ್ಯಕ್ರಮ ಮಾಡಿದ್ದೇವು. ಎಲ್ಲಾ ಸಭೆಗಳನ್ನ ನೋಡಿದ್ರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಅನುಮಾನ ಬೇಡ. ಪರಿಶಿಷ್ಟ ಸಮುದಾಯಗಳಿಗೆ ಕಾಂಗ್ರೆಸ್ ಪಕ್ಷ ಆದಾರ ಸ್ತಂಭವಾಗಿದೆ. ನಿಮ್ಮ ಪ್ರೀತಿ ಅಭಿಮಾನ ನಮಗೆ ಶಕ್ತಿ ನೀಡಿದೆ ಎಂದು ಶಿವಕುಮಾರ್ ಹೇಳಿದರು.