i
ರಸ್ತೆ, ನೀರು ಇತರೆ ಸೌಲಭ್ಯಗಳನ್ನು ಗೊಲ್ಲರೇ ಬಳಸುತ್ತಿಲ್ಲ, 10 ವರ್ಷ ಅಧಿಕಾರ ಮಾಡಿದವರೇನು ಮಾಡಿದರು?-ಪೂರ್ಣಿಮಾ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಓಡಾಡುವ ರಸ್ತೆ, ಕುಡಿಯುವ ನೀರು ಸೇರಿದಂತೆ ಇತರೆ ಸೌಲಭ್ಯಗಳನ್ನು ಗೊಲ್ಲರೊಬ್ಬರೇ ಬಳಸುತ್ತಿಲ್ಲ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದಲ್ಲಿ ಆಯೋಜಿಸಿದ್ದ ಹರಿಯಬ್ಬೆ ಶ್ರೀ ಕರಿಯಮ್ಮ ದೇವಿ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೊಲ್ಲ ಸಮುದಾಯಕ್ಕೆ ಹೆಚ್ಚಿನ ಸೌಲಭ್ಯಗಳನ್ನು ಪೂರ್ಣಿಮಾ ಮಾಡಿದ್ದಾರೆ ಎನ್ನುವ ಆರೋಪ ನನ್ನ ಮೇಲಿದೆ. ರಸ್ತೆ ಮಾಡಿದ್ದೇನೆ ಅಲ್ಲಿ ಗೊಲ್ಲರೊಬ್ಬರೇ ಓಡಾಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು ಧರ್ಮಪುರ ಕೆರೆ ಸೇರಿದಂತೆ ಈಶ್ವರಗೆರೆ, ಮುಂಗಸವಳ್ಳಿ, ಗೂಳ್ಯ, ಶ್ರಾವಣಗೆರೆ ಮತ್ತಿತರ 7 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಿದ್ದೇನೆ. ಈ ಎಲ್ಲ ಕೆರೆಗಳಿಗೆ ನೀರು ತುಂಬಿದರೆ ಅಷ್ಟು ನೀರನ್ನ ಗೊಲ್ಲರೇ ಬಳಸುತ್ತಾರೆಯೇ ಇತರೆ ಸಮುದಾಯದವರು ಬಳಸುವುದಿಲ್ಲವೇ ಎಂದು ಶಾಸಕಿ ಪ್ರಶ್ನಿಸಿದರು.
2018ರ ಚುನಾವಣೆ ಸಂದರ್ಭದಲ್ಲಿ ಧರ್ಮಪುರ ಕೆರೆಗೆ ನೀರು ನೀಡುತ್ತೇನೆಂದು ನಾನು ಎಲ್ಲೂ ಭರವಸೆ ನೀಡಿರಲಿಲ್ಲ, ಆದರೆ ಈ ಭಾಗದ ಜನರ ಬವಣೆ ಅರಿತು ಎಲ್ಲಿಂದ ನೀರು ನೀಡಲು ಸಾಧ್ಯ ಎನ್ನುವುದನ್ನ ವೈಜ್ಞಾನಿಕವಾಗಿ ಅಧ್ಯಯನ ಮಾಡಿಸಿ ಹೊಸಳ್ಳಿ ಬ್ಯಾರೇಜ್ ನಿಂದ 7 ಕೆರೆಗಳಿಗೆ ನೀರು ಭರ್ತಿ ಮಾಡುವ ಕಾರ್ಯ ಮಾಡಿದ್ದೇನೆ. ಅದೇ ರೀತಿ ಸಾರಿಗೆ ಬಸ್ ಡಿಪೋ ಮಾಡಿದ್ದೇನೆ. ಹತ್ತು ವರ್ಷ ಆಡಳಿತ ಮಾಡಿದವರು ಏಕೆ ಈ ಎಲ್ಲ ಸೌಲಭ್ಯ ಮಾಡಲಿಲ್ಲ, ಮತದಾರರಿಗೆ ಬರೀ ಪೊಳ್ಳು ಭರವಸೆ ನೀಡಿಕೊಂಡು ಹೋದರಲ್ಲ ಅವರನ್ನೇಕೆ ನೀವು ಪ್ರಶ್ನೆ ಮಾಡುತ್ತಿಲ್ಲ ಎಂದು ಮಾಜಿ ಸಚಿವ ಡಿ.ಸುಧಾಕರ್ ಅವರ ಹೇಸರೇಳದೆ ವಾಗ್ದಾಳಿ ಮಾಡಿದರು.
ಧರ್ಮಪುರದ ಹೆಸರಿನಲ್ಲೇ ಧರ್ಮ ಇದೆ. ನಾನು ಧರ್ಮಪುರ ಕೆರೆಗೆ ನೀರು ಹರಿಸುವ ಮೂಲಕ ಧರ್ಮದ ಹಾದಿ ಹಿಡಿದಿದ್ದೇನೆ, ನೀವು ಸಹ ಧರ್ಮ ಮಾಡುವುದನ್ನು ಮರೆಯಬೇಡಿ, ಮುಂಬರುವ ಚುನಾವಣೆಯಲ್ಲಿ ಧರ್ಮ ನೆನೆದು ಮತ ಹಾಕಬೇಕು ಎಂದು ಶಾಸಕರು ಮನವಿ ಮಾಡಿದರು.
ಹರಿಯಬ್ಬೆ ಗ್ರಾಮದ ಹಿರಿಯರು ಒಂದಿಷ್ಟು ಕೆಲಸ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಇದು ಚುನಾವಣೆಯ ಕೊನೆ ವರ್ಷ ನಾನು ಭರವಸೆ ನೀಡಿ ಹಿಂದೆ ಸರಿಯುವುದಿಲ್ಲ, ಆದರೂ ನನ್ನ ಇತಿಮಿತಿಯಲ್ಲಿ ಇರುವ ಎರಡು ಮೂರು ತಿಂಗಳ ಅವದಿಯಲ್ಲಿ ಸಾಧ್ಯ ಇರುವಷ್ಟು ಕೆಲಸ ಮಾಡಿ ಕೊಡುತ್ತೇನೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಘುನಾಥ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶಪ್ಪ, ಬಸವಾನಂದ, ಶಿವಣ್ಣ, ಲೋಕೇಶಪ್ಪ, ಮಾರುತಿ, ಜೈರಾಜ್, ಹನುಮಂತರಾಯ, ರಾಮಕೃಷ್ಣಪ್ಪ, ಸಿ.ನಾಗರಾಜ್, ಚಿಕ್ಕಣ್ಣ ಮುಂತಾದವರು ಉಪಸ್ಥಿತರಿದ್ದರು.