i
ಸಿನಿಮಾಕ್ಕಿಂತ ಶಕ್ತಿಶಾಲಿ ಆಯುಧ ಬೇರೆ ಯಾವುದೂ ಇಲ್ಲ–ರಘು ಆಚಾರ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಿನಿಮಾಕ್ಕಿಂತ ಶಕ್ತಿಶಾಲಿ ಆಯುಧ ಬೇರೆ ಯಾವುದೂ ಇಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ರಘುಆಚಾರ್ ಹೇಳಿದರು.
ನಿರ್ಮಾಪಕ ಹಾಗೂ ನಟ ಕೆ.ಮಂಜುನಾಥ ನಾಯ್ಕರವರ ಕಾದಂಬರಿ ಆಧಾರಿತ ಅರಳಿದ ಹೂಗಳು ಚಲನಚಿತ್ರದ ಹಾಡುಗಳ ವೀಡಿಯೋವನ್ನು ಸೋಮವಾರ ಬಂಜಾರ ಭವನದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ಹಿಂದಿನ ಕಾಲದ ಸಿನಿಮಾಗಳು ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ನೀಡುತ್ತಿದ್ದವು. ಈಗಿನ ಚಿತ್ರಗಳು ವ್ಯಾಪಾರಿಕರಣವಾಗಿರುವುದು ನೋವಿನ ಸಂಗತಿ. ಪದ್ಮಭೂಷಣ ಡಾ.ರಾಜ್ಕುಮಾರ್ರವರ ಚಿತ್ರಗಳಲ್ಲಿ ಅತ್ಯುತ್ತಮವಾದ ಸಂದೇಶಗಳಿರುತ್ತಿದ್ದವು. ಮನೆಯಲ್ಲಿ ಅಪ್ಪ ಅಮ್ಮ ಮೊದಲು ಮಕ್ಕಳಿಗೆ ಸಂಸ್ಕಾರ ಹೇಳಿಕೊಡಬೇಕು. ನಂತರ ಮಕ್ಕಳನ್ನು ಸತ್ಪಪ್ರಜೆಗಳನ್ನಾಗಿ ಮಾಡುವ ಹೊಣೆಗಾರಿಕೆ ಶಿಕ್ಷಕರುಗಳ ಮೇಲಿದೆ. ಬಜೆಟ್ ಕಡಿಮೆಯಾಗಲಿ, ಜಾಸ್ತಿಯಾಗಿರಲಿ ಸಿನಿಮಾ ತೆಗೆಯುವುದು ತುಂಬಾ ಕಷ್ಟದ ಕೆಲಸ ಎಂದರು.
ಚಿತ್ರದ ನಿರ್ದೇಶಕ ಪುರುಷೋತ್ತಮ್ ಓಂಕಾರ್ ಮಾತನಾಡಿ ಅರಳಿದ ಹೂಗಳು ಚಿತ್ರದಲ್ಲಿ ಸಮಾಜಕ್ಕೆ ಉತ್ತಮವಾದ ಸಂದೇಶವಿದೆ. ಯಾವುದೇ ಒಂದು ಚಿತ್ರ ಯಶಸ್ವಿಯಾಗಬೇಕಾದರೆ ಪ್ರೇಕ್ಷಕರು, ಅಭಿಮಾನಿಗಳು ಮುಖ್ಯ. ಚಿತ್ರದಲ್ಲಿನ ಪ್ರತಿಯೊಂದು ದೃಶ್ಯಗಳಲ್ಲೂ ಒಂದೊಂದು ಸಂದೇಶವಿದೆ. ಮಕ್ಕಳಿಂದ ಹಿಡಿದು ವೃದ್ದರವರೆಗೂ ಎಲ್ಲರೂ ಜೊತೆಯಲ್ಲಿ ಕುಳಿತು ಯಾವುದೇ ಮುಜುಗರವಿಲ್ಲದೆ ವೀಕ್ಷಿಸಬಹುದಾದ ಚಿತ್ರವನ್ನು ಕೆ.ಮಂಜುನಾಥ ನಾಯ್ಕ ಸಮರ್ಪಿಸಿದ್ದಾರೆಂದು ಗುಣಗಾನ ಮಾಡಿದರು.
ನಿರ್ಮಾಪಕ ಹಾಗೂ ನಟ ಕೆ.ಮಂಜುನಾಥನಾಯ್ಕ ಮಾತನಾಡಿ ನಾನು ಸಿನಿಮಾ ರಂಗಕ್ಕೆ ಬರುತ್ತೇನೆಂದು ಊಹಿಸಿರಲಿಲ್ಲ. ವೃತ್ತಿಯಲ್ಲಿ ಶಿಕ್ಷಕನಾಗಿ ನಿವೃತ್ತಿಯಾದ ಮೇಲೆ ಬಂದ ಹಣದಲ್ಲಿ ಸಿನಿಮಾ ಮಾಡಿದ್ದೇನೆ. ಸೀತಮ್ಮನ ಮಗ ಮೊದಲು ಚಿತ್ರ ಯಶಸ್ವಿಯಾಯಿತು. ಹಣ ಗಳಿಸುವ ಆಸೆಯಿಂದ ಚಿತ್ರವನ್ನು ಮಾಡಿಲ್ಲ. ಹೆಣ್ಣು ಅಬಲೆಯಲ್ಲ. ಸಬಲೆ, ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕೆಂಬ ಸಂದೇಶವನ್ನು ಸಮಾಜಕ್ಕೆ ನೀಡುವುದು ನನ್ನ ಉದ್ದೇಶ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.
ಎಸ್.ಆರ್.ಎಸ್.ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ, ಟೌನ್ ಕ್ಲಬ್ ಕಾರ್ಯದರ್ಶಿ ಚಿತ್ರಲಿಂಗಪ್ಪ, ಖಜಾಂಚಿ ಅಮಿತ್ಜೈನ್, ಗೊಡಬನಹಾಳ್ನಲ್ಲಿರುವ ಕಾನ್ವೆಂಟ್ನ ಕಾರ್ಯದರ್ಶಿ ಪಿ.ಟಿ.ಪರಮೇಶ್ವರಪ್ಪ, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಶಿವಕುಮಾರ್, ರಾಜೇಂದ್ರಾಚಾರ್, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಮಂಜಪ್ಪ, ಚಿತ್ರದ ನಟಿ ಧನಲಕ್ಷ್ಮಿ ಸಹ ನಿರ್ದೇಶಕ ಎಂ.ಸುನಿತ್ಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದು, ಅರಳಿದ ಹೂಗಳು ಚಿತ್ರ ಯಶಸ್ವಿಯಾಗಿ ತೆರೆಕಾಣಲಿ ಎಂದು ಶುಭ ಹಾರೈಸಿದರು.