i
ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಸಾವಿರ ನೀಡುವ ಗೃಹಲಕ್ಷ್ಮಿ ಯೋಜನೆ ಜಾರಿ-ಪ್ರಿಯಾಂಕ ಗಾಂಧಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ನಾ ನಾಯಕಿ” ಸಮಾವೇಶದಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ ಪ್ರಿಯಾಂಕ ಗಾಂಧಿ ಅವರಿಗೆ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ ಮಹಿಳೆಯರು, ಪಕ್ಷದ ಕಾರ್ಯಕರ್ತರು ಹಣ್ಣಿನ ಹಾರ ಹಾಕಿ, ಹೂಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತ ಕೋರಿದರು.
ಪ್ರತಿ ಕುಟುಂಬದ ಓರ್ವ ಗೃಹಿಣಿಗೆ ಪ್ರತಿ ತಿಂಗಳಿಗೆ 2000 ರೂಪಾಯಿ ಸಹಾಯಧನ ನೀಡುವ ‘ಗೃಹಲಕ್ಷ್ಮಿ‘ ಯೋಜನೆ ಮಾಡಲಾಗುತ್ತದೆ. ರಾಜ್ಯದ ಮಹಿಳೆಯರೇ, ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ಖಾಲಿಯಾಗಿದೆ ಎಂಬ ಚಿಂತೆ ಬಿಡಿ. ನಿಮ್ಮ ಮನೆಯ ಸಿಲಿಂಡರ್ ತುಂಬಿಸುವುದು ಇನ್ಮುಂದೆ ಕಾಂಗ್ರೆಸ್ ಹೊಣೆ ಎನ್ನುವ ವಿಚಾರಗಳು ಟ್ವೀಟರ್ ನಲ್ಲಿ ರಾರಾಜಿಸುತ್ತಿವೆ.!
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮಾತನಾಡಿ ರಾಜ್ಯ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ದಂಧೆ ಮಾಡುತ್ತಿದೆ, ಪಿಎಸ್ಐ ಹಗರಣದಂತಹ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ 2000 ರೂಪಾಯಿ ಹಣ ವಿತರಣೆ ಮಾಡಲಾಗುವುದು ಅಂತ ಘೋಷಣೆ ಮಾಡಿದ್ದಾರೆ.
ನಾವೆಲ್ಲರೂ ಮಹಿಳೆಯರು ನಮ್ಮ ಶಕ್ತಿ ತೋರಿಸುವ ಕಾಲ ಬಂದಿದೆ. ಈ ಚುನಾವಣೆಯನ್ನು ನಿಮ್ಮ ಚುನಾವಣೆ, ನಿಮ್ಮ ಭವಿಷ್ಯಕ್ಕಾಗಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ನನಗಾಗಿ ಇಷ್ಟು ಅಭಿಮಾನದಿಂದ ಇಲ್ಲಿಗೆ ಬಂದಿರುವ ಎಲ್ಲರಿಗೂ ನಮಸ್ಕಾರ. ನಾನು ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದ ಅಭಿಮಾನವನ್ನು ಕಂಡಿದ್ದೇನೆ.
ನಾನು ಇಲ್ಲಿಗೆ ಆಗಮಿಸಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ. ನೀವು ಬುದ್ಧಿವಂತರು, ಶಕ್ತಿವಂತರು, ಶ್ರಮಜೀವಿಗಳು. ಈ ದೇಶವೇ ಹೆಮ್ಮೆಪಡುವಂತೆ ರಾಜ್ಯವನ್ನು ಕಟ್ಟಿದ್ದೀರಿ. ವಿಶ್ವದ ಎಲ್ಲೆಡೆ ನಿಮ್ಮ ಪರಿಶ್ರಮ ಗುರುತಿಸಲಾಗುತ್ತಿದೆ. ಐಟಿ ಬಿಬಿ ಕ್ಷೇತ್ರ, ಕೈಗಾರಿಕಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದೀರಿ ಎಂದು ಮಹಿಳೆಯರನ್ನು ಆಡಿ ಹೊಗಳಿದರು.
ನೀವು ಕರ್ನಾಟಕ ಭುವನೇಶ್ವರಿ ಹಾಗೂ ತಾಯಿ ಚಾಮುಂಡೇಶ್ವರಿಯ ಮಕ್ಕಳು. ಈ ನಾಡು ಅತ್ಯಂತ ಪ್ರಬಲಶಾಲಿ ಮಹಿಳೆಯರಾದ ಕಿತ್ತೂರು ರಾಣಿ ಚೆನ್ನಮ್ಮನ ಮಕ್ಕಳು. ನಿಮ್ಮಲ್ಲಿ ಅಹಿಂಸೆಯ ಗುಣ ನಿಮ್ಮ ಇತಿಹಾಸದಲ್ಲಿ ಅಡಗಿದೆ. ಬಸವಣ್ಣ ಅವರು ಪ್ರತಿಯೊಬ್ಬ ಮನುಷ್ಯನ ಪ್ರಾಮುಖ್ಯತೆ ಸಾರಿದ್ದಾರೆ. ಬಸವಣ್ಣನವರಿಗೆ ಎಲ್ಲರೂ ಸಮಾನರು. ಅವರಿಗೆ ಜಾತಿ, ಧರ್ಮ, ಲಿಂಗದ ಭೇದವಿರಲಿಲ್ಲ. ಮಹಿಳೆಯರು ನಾಡಿನ ಸಂಸ್ಕೃತಿ ಕಾಪಾಡಿ, ನಮ್ಮ ಸಮಾಜ ಕಟ್ಟುವಲ್ಲಿ ಮಹಿಳೆಯರು ಸದಾ ಶ್ರಮಿಸಿದ್ದಾರೆ ಎಂದು ಪ್ರಿಯಾಂಕ ಗಾಂಧಿ ಹೇಳಿದರು.
ನನ್ನನ್ನು ಇಬ್ಬರು ಪ್ರಬಲ ಮಹಿಳೆಯರು ಬೆಳೆಸಿದ್ದಾರೆ. ನಾನು ಆಕೆಯನ್ನು ಎಂಟನೇ ವಯಸ್ಸಿನಲ್ಲಿ ನೋಡಿದೆ. ಆಕೆ ತನ್ನ 33 ವರ್ಷದ ಮಗನನ್ನು ಕಳೆದುಕೊಂಡಾಗ ಕುಗ್ಗದೇ ಮರು ದಿನವೇ ತನ್ನ ಕೆಲಸಕ್ಕೆ ಹಾಜರಾಗಿ ದೇಶ ಸೇವೆಗೆ ಮುಂದಾಗಿದ್ದರು. ಅದು ಆಕೆಯ ವೃತ್ತಿಧರ್ಮವಾಗಿತ್ತು. ತನ್ನ ಪುತ್ರಸೋಕದ ನಡುವೆಯೂ ಆಕೆ ದೇಶಕ್ಕಾಗಿ ತನ್ನ ಕರ್ತವ್ಯ ಮಾಡಲು ಮುಂದಾಗಿದ್ದು, ಆಕೆಯ ಮಾನಸಿಕ ಸ್ಥೈರ್ಯಕ್ಕೆ ಸಾಕ್ಷಿ. ಆಕೆ ತನ್ನ ಕೊನೆ ಉಸಿರಿರುವವರೆಗೂ ದೇಶಕ್ಕಾಗಿ ಸೇವೆ ಮುಂದುವರಿಸಿದರು ಎಂದು ತನ್ನ ಅಜ್ಜಿ ಇಂದಿರಾ ಗಾಂಧಿ ಕುರಿತು ಮೆಚ್ಚುಗೆ ಮಾತುಗಳನ್ನು ಹೇಳಿದರು.
ನಾನು ಬೆಳೆದಿದ್ದು ತಾಯಿ ಸೋನಿಯಾಗಾಂಧಿ ಅವರನ್ನು ನೋಡಿಕೊಂಡು. ತನ್ನ 21ನೇ ವಯಸ್ಸಿನಲ್ಲಿ ತಂದೆ ರಾಜೀವ್ ಗಾಂಧಿ ಅವರನ್ನು ಪ್ರೀತಿಸಿ, ತಾನು ಹುಟ್ಟಿದ ಇಟಲಿ ಬಿಟ್ಟು ಭಾರತಕ್ಕೆ ಆಗಮಿಸುತ್ತಾರೆ. ಆಕೆ ಇಲ್ಲಿನ ಸಂಸ್ಕೃತಿ, ಆಚಾರ ವಿಚಾರ, ಭಾಷೆಗಳನ್ನು ಇಂದಿರಾ ಗಾಂಧಿ ಅವರಿಂದ ಕಲಿತರು. ಆಕೆ ತನ್ನ 44ನೇ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡರು. ಆಕೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲದಿದ್ದರೂ ದೇಶದ ಸೇವೆ ಮಾಡಲು ರಾಜಕೀಯದಲ್ಲಿ ಇದ್ದಾರೆ.
ಈ ಇಬ್ಬರು ಮಹಿಳೆಯರ ಜತೆಗೆ ನಾನು ನೂರಾರೂ ಮಹಿಳೆಯರನ್ನು ನನ್ನ ಜೀವನದಲ್ಲಿ ಕಂಡಿದ್ದೇನೆ. ಇವರೆಲ್ಲರಿಂದ ನಾನು ಒಂದು ವಿಚಾರ ಕಲಿತಿದ್ದೇನೆ. ನಿಮ್ಮ ಜೀವನದಲ್ಲಿ ಏನೇ ಆಗಲಿ, ಎಷ್ಟೇ ಕಷ್ಟ ಬರಲಿ, ಅದು ಮನೆಯಲ್ಲಾಗಲಿ, ಕೆಲದ ವಿಚಾರದಲ್ಲಾಗಲಿ, ನೀವು ಅವುಗಳನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ. ಇಲ್ಲಿರುವ ಪ್ರತಿ ಸಹೋದರಿಯರು ದೊಡ್ಡ ಸವಾಲು ಎದುರಿಸಿದ್ದೀರಿ ಎಂದು ನನಗೆ ಗೊತ್ತಿದೆ. ನಿಮ್ಮ ಮನೆಯನ್ನು ಒಟ್ಟಾಗಿಟ್ಟು, ನಿಮ್ಮ ಜೀವನದ ಸಮಸ್ಯೆಗಳನ್ನು ಬಹಳ ಧೈರ್ಯವಾಗಿ ಎದುರಿಸುತ್ತಿದ್ದೀರಿ. ಇಷ್ಟಾದರೂ ನಿಮ್ಮ ಜೀವನದಲ್ಲಿ ಬದಲಾವಣೆ ತರುವ ಸಾಮರ್ಥ್ಯ ನಿಮ್ಮಲ್ಲಿದೆ ಎಂದು ಪ್ರಿಯಾಂಕ ಗಾಂಧಿ ತಿಳಿಸಿದರು.