i
DT ಶ್ರೀನಿವಾಸ್ ಗೆ ಜೆಡಿಎಸ್ ಟಿಕೆಟ್ ಫೈನಲ್…
ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಡು ಇಲ್ಲವೇ ಮಡಿ ಎನ್ನುವ ಲೆಕ್ಕಾಚಾರದಲ್ಲಿ ಮುನ್ನುಗ್ಗುತ್ತಿರುವ ಜೆಡಿಎಸ್ ಪಕ್ಷದ ವರಿಷ್ಠರು ಅಧಿಕಾರ ಹಿಡಿಯಲೇಬೇಕು ಎಂದು ಪಣತೊಟ್ಟು ಪಂಚರತ್ನ ರಥಯಾತ್ರೆ ಸೇರಿದಂತೆ ವಿವಿಧ ಸಮಾವೇಶಗಳನ್ನು ಮಾಡುತ್ತಿರುವುದು ಒಂದು ಕಡೆಯಾದರೆ ಬಿಜೆಪಿ, ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತರಾಗುವಂತ ಬಲಿಷ್ಠ ಅಭ್ಯರ್ಥಿಗಳಿಗೆ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಬಲಿಷ್ಠ ವೀರಶೈವ ಲಿಂಗಾಯಿತ ಕೋಮಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವ ಚಿಂತನೆಯಲ್ಲಿರುವ ಜೆಡಿಎಸ್ ವರಿಷ್ಠರು ಪಂಚರತ್ನ ರಥ ಯಾತ್ರೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಈಗಾಗಲೇ ಧಾರವಾಡ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಪಂಚರತ್ನ ರಥಯಾತ್ರೆ ದೊಡ್ಡ ಮಟ್ಟದ ಸದ್ದು ಮಾಡಿದೆ. ಹಾಗೆಯೇ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಬಹಿರಂಗವಾಗಿಯೇ ಜೆಡಿಎಸ್ ನಾಯಕ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಇವರುಗಳನ್ನು ಭೇಟಿ ಮಾಡಿ
ಟಿಕೆಟ್ ನೀಡುವಂತೆ ಕೋರುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಇದರ ಮಧ್ಯ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲೂ ಪಂಚರತ್ನ ರಥ ಯಾತ್ರೆ ಮುಂದಕ್ಕೆ ಹೋಗುತ್ತಿದೆ.
ಸದಾ ಮುಂದೂಡುತ್ತಿರುವ ಗುಟ್ಟು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗತೊಡಗಿದೆ.
ಹಿರಿಯೂರು ವಿಧಾನಸಭಾ ಕ್ಷೇತ್ರದ ಸ್ಥಳೀಯ ಅಭ್ಯರ್ಥಿಗೆ ಅದರಲ್ಲೂ ಕುಂಚಿಟಿಗ ಅಲಿಯಾಸ್ ಒಕ್ಕಲಿಗ ಜನಾಂಗದವರಿಗೆ ಟಿಕೆಟ್ ನೀಡುವುದಾಗಿ ಕುಮಾರಸ್ವಾಮಿ ಘೋಷಣೆ ಮಾಡಿದ್ದರು. ಮೊದಲ ಆದ್ಯತೆಯಾಗಿ ಮಾಜಿ ಜಿಪಂ ಅಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ ಇವರಿಗೆ ಟಿಕೆಟ್ ನೀಡಲು ಸಿದ್ಧತೆ ಮಾಡಿಕೊಂಡು ನೀವು ಆರ್ಥಿಕ ಸಂಪನ್ಮೂಲದ ಶಕ್ತಿ ತೋರಿಸಲು ಇಂದಿನ ತನಕ ಕಾಲಾವಕಾಶ ನೀಡಿದ್ದರು. ಆದರೂ ಅವರು ಆರ್ಥಿಕ ಸಂಪನ್ಮೂಲದ ಶಕ್ತಿ ತೋರಿಸುವಲ್ಲಿ ಇನ್ನೂ ಮೀನಾಮೇಷ ಏಣಿಸುತ್ತಿರುವುದು ಒಂದು ಕಡೆಯಾದರೆ ಉಳಿದ ಟಿಕೆಟ್ ಆಕಾಂಕ್ಷಿಗಳಾದ ಶ್ರಾವಣಗೆರೆ ಶಿವಪ್ರಸಾದ್ ಗೌಡ, ಕುಂದಲಗುರ ಕೆ.ಜಿ.ಮೂಡಲಗಿರಿಯಪ್ಪ ಮತ್ತು ಎಂ.ರವೀಂದ್ರಪ್ಪ ಈ ಮೂರು ಮಂದಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೊನೆ ಕ್ಷಣದವರೆಗೂ ಜೆಡಿಎಸ್ ಟಿಕೆಟ್ ಅಂತಿಮ ಮಾಡದಿದ್ದರೆ ಮತದಾರರ ಬಳಿ ಹೇಗೆ ಹೋಗಬೇಕು, ಪಕ್ಷ ಸಂಘಟನೆ ಹೇಗೆ ಮಾಡಬೇಕು, ಕೊನೆ ಕ್ಷಣದಲ್ಲಿ ಟಿಕೆಟ್ ಫೈನಲ್ ಮಾಡುವ ಉದ್ದೇಶ ಜೆಡಿಎಸ್ ವರಿಷ್ಠರಿಗಿದ್ದರೆ ಸ್ಪರ್ಧಿಸುವ ಬಗ್ಗೆ ನೂರೊಂದು ಸಲ ಈ ಮೂರು ಮಂದಿ ಟಿಕೆಟ್ ಆಕಾಂಕ್ಷಿಗಳು ಯೋಚಿಸಿ ಹಿಂದೆ ಸರಿಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಇದರ ಮಧ್ಯ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ದೇವೇಗೌಡರೊಂದಿಗೆ ಸಂಪರ್ಕದಲ್ಲಿರುವ ಹಾಲಿ ಶಾಸಕಿ ಕೆ.ಪೂರ್ಣಿಮಾ ಅವರ ಪತಿ ಡಿ.ಟಿ.ಶ್ರೀನಿವಾಸ್ ತೆರೆ ಮರೆಯಲ್ಲಿ ಜೆಡಿಎಸ್ ಟಿಕೆಟ್ ಪ್ರಯತ್ನಿಸಿ ಓಕೆ ಎನಿಸಿಕೊಂಡಿದ್ದಾರೆ, ಅವರು ಜೆಡಿಎಸ್ ಪಕ್ಷದಿಂದಲೇ ಹಿರಿಯೂರಿನಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಮಾತು ಜೋರಾಗಿ ಕೇಳಿ ಬರುತ್ತಿದೆ. ಆದರೆ ಈ ಕುರಿತು ಶ್ರೀನಿವಾಸ್ ಎಲ್ಲೂ ಬಾಯಿ ಬಿಟ್ಟಿಲ್ಲ, ಆಪ್ತರ ಬಳಿ ಮಾತ್ರ ಸಂಪರ್ಕದಲ್ಲಿರುವ ಬಗ್ಗೆ ಮಾಹಿತಿ ನೀಡಿದ್ದು ಜೆಡಿಎಸ್ ಟಿಕೆಟ್ ನನ್ನದೇ ಎನ್ನುತ್ತಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಜೆಡಿಎಸ್ ಟಿಕೆಟ್ ಡಿ.ಟಿ.ಶ್ರೀನಿವಾಸ್ ಅವರಿಗೆ ನೀಡಿದ್ದೇ ಆದರೆ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 40 ಸಾವಿರದಷ್ಠಿರುವ ಗೊಲ್ಲರ ಮತಗಳೊಂದಿಗೆ ಅಷ್ಟೇ ಪ್ರಮಾಣದಲ್ಲಿರುವ ಒಕ್ಕಲಿಗರ ಮತಗಳನ್ನು ಸೆಳೆದು ಗೆದ್ದು ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹಾಗೆ ಐದಾರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗೊಲ್ಲರನ್ನು ಸಂಘಟಿಸಿ ಜೆಡಿಎಸ್ ಗೆಲುವಿಗೆ ಶ್ರಮಿಸುವುದಾಗಿ ಶ್ರೀನಿವಾಸ್ ಹೇಳಿಕೊಂಡಿದ್ದಾರೆ ಎನ್ನುವ ಮಾತುಗಳು ಸಹ ಗುಟ್ಟಾಗಿ ಉಳಿದಿಲ್ಲ.
ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳಾದ ನಾಲ್ಕು ಮಂದಿ ಕುಂಚಿಟಿಗರು ಅಲಿಯಾಸ್ ಒಕ್ಕಲಿಗರಿಗೆ ಟಿಕೆಟ್ ತಪ್ಪಿದರೆ ಅವರು ಜೆಡಿಎಸ್ ವಿರುದ್ಧ ನಿಲ್ಲುವ ಸಾಧ್ಯತೆ ತೀರಾ ವಿರಳ. ಏಕೆಂದರೆ ಆರ್ಥಿಕ ಸಂಪನ್ಮೂಲದ ಶಕ್ತಿ ತೋರಿಸಲು ಸಾಕಷ್ಟು ಸಮಯ ನೀಡಿದ್ದೇ, ಆದರೆ ನೀವೇ ಆ ಶಕ್ತಿ ತೋರಿಸಲಿಲ್ಲ, ಪಕ್ಷವನ್ನು ಹೊಣೆ ಮಾಡಬೇಡಿ ಎಂದು ಕುಮಾರಸ್ವಾಮಿ ಸುಲಭವಾಗಿ ಜಾರಿಕೊಳ್ಳುವ ಸಾಧ್ಯತೆ ಇದೆ. ಮುಂದೆ ಸರ್ಕಾರ ನಾವೇ ರಚನೆ ಮಾಡುತ್ತೇನೆ, ನೀವು ಶ್ರೀನಿವಾಸ್ ಅವರನ್ನ ಗೆಲ್ಲಿಸಿಕೊಂಡು ಬನ್ನಿ, ಸರ್ಕಾರದಲ್ಲಿ ನಿಮಗೂ ಅವಕಾಶ ಕಲ್ಪಿಸುತ್ತೇನೆಂದರೆ ಯಾರೊಬ್ಬರೂ ಬಂಡಾಯ ಏಳುವ ಸಾಧ್ಯತೆ ತೀರಾ ಕಮ್ಮಿ.
ಆದರೆ ಇಲ್ಲಿ ಪ್ರಶ್ನೆ ಇರುವುದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರದು, ಜೆಡಿಎಸ್ ಟಿಕೆಟ್ ಪತಿ ಶ್ರೀನಿವಾಸ್ ಗೆ ಸಿಕ್ಕರೆ ಅವರ ಪರಿಸ್ಥಿತಿ ಏನು ಎನ್ನುವ ಪ್ರಶ್ನೆ ಮತದಾರರಲ್ಲಿ ಕಾಡತೊಡಗಿದೆ. ಗಂಡ ಒಂದು ಪಕ್ಷ ಹೆಂಡತಿ ಒಂದು ಪಕ್ಷದಲ್ಲಿ ನಿಲ್ಲಲು ಸಾಧ್ಯವಿಲ್ಲ. ಆಗ ಅನಿವಾರ್ಯವಾಗಿ ಪೂರ್ಣಿಮಾ ಶ್ರೀನಿವಾಸ್ ಸ್ಪರ್ಧೆಯಿಂದ ಹಿಂದೆ ಸರಿಯುವ ಸಾಧ್ಯತೆಯೇ ಹೆಚ್ಚಾಗಿದೆ.
ಜೊತೆಯಲ್ಲಿ ಶಾಸಕರು ಐದು ವರ್ಗಗಳ ಕಾಲ ಮಾಡಿರುವ ಅಭಿವೃದ್ಧಿ ಬಗ್ಗೆ ಮತದಾರರಿಗೆ ತಿಳಿಸಿ ಗಂಡನನ್ನು ಗೆಲ್ಲಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಅಥವಾ ಬಿಜೆಪಿ ಪಕ್ಷಕ್ಕೆ ನಿಷ್ಠರಾಗಿದ್ದು ಚುನಾವಣೆಗೆ ಸ್ಪರ್ಧಿಸದೆ ತಟಸ್ಥರಾಗಿ ಉಳಿಯುವ ಸಾಧ್ಯತೆ ಕೂಡಾ ಇರುತ್ತದೆ. ಇಲ್ಲ ಕೆ.ಆರ್.ಪುರಂ ಕ್ಷೇತ್ರದಿಂದ ಪೂರ್ಣಿಮಾ ಶ್ರೀನಿವಾಸ್ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ತಳ್ಳಿ ಹಾಕುವಂತಿರುವುದಿಲ್ಲ.
ಒಟ್ಟಾರೆ ಫೆಬ್ರವರಿ ಅಂತ್ಯದೊಳಗೆ ಕೋಟೆ ನಾಡಿನಲ್ಲಿ ರಾಜಕೀಯ ಸ್ಥಿತ್ಯಂತರಗಳು ಸಂಭವಿಸಲಿದ್ದು ಯಾರು ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎನ್ನುವುದನ್ನ ಈಗಲೇ ಹೇಳುವಂತಿಲ್ಲ. ಇದರ ಮಧ್ಯೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಬಿಜೆಪಿ ಟಿಕೆಟ್ ನೀಡದಿದ್ದಲ್ಲಿ ಜೆಡಿಎಸ್ ಪಕ್ಷದಿಂದಲೇ ಸ್ಪರ್ಧಿಸುವಂತೆ ಶಾಸಕ ತಿಪ್ಪಾರೆಡ್ಡಿ ಅವರಲ್ಲಿ ಜೆಡಿಎಸ್ ವರಿಷ್ಠರು ಮನವೊಲಿಸುವ ಸಾಧ್ಯತೆ ಕೂಡಾ ತಳ್ಳಿ ಹಾಕುವಂತಿಲ್ಲ ಎನ್ನಲಾಗುತ್ತಿದೆ.