i
ಭದ್ರಾ ರಾಷ್ಟ್ರೀಯ ಯೋಜನೆ ಘೋಷಣೆ ಮಾಡಿಲ್ಲ, ರೈತ, ಜನ ವಿರೋಧಿ ಬಜೆಟ್-ಚಂದ್ರಪ್ಪ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಸಗೊಬ್ಬರ ಬೆಲೆ ಏರಿಕೆ ಆಗುತ್ತಿದ್ದರೂ ಅದಕ್ಕೆ ಕಡಿವಾಣ ಹಾಕಲು ಕ್ರಮಕೈಗೊಂಡಿಲ್ಲ. ಸಬ್ಸಿಡಿ ಕಡಿತ ಮಾಡಿರುವುದು, ಗೊಬ್ಬರದ ಬೆಲೆ ಏರಿಕೆಗೆ ಕಾರಣವಸಗಲಿದೆ. ಅಲ್ಲದೆ ರೈತ, ಜನ ವಿರೋಧಿ ಬಜೆಟ್ ಆಗಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಬಿ.ಎನ್.ಚಂದ್ರಪ್ಪ ಟೀಕಿಸಿದ್ದಾರೆ.
ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಒದಗಿಸುವ, ಕೃಷಿ ಕ್ಷೇತ್ರದ ಬಲವರ್ಧನೆಗೆ ಯಾವುದೇ ರೀತಿ ಯೋಜನೆ ರೂಪಿಸಿಲ್ಲ. ಕೃಷಿಯನ್ನು ಕೈಗಾರಿಕಾ ಕ್ಷೇತ್ರವೆಂದು ಪರಿಗಣಿಸಬೇಕಿತ್ತು. ಆದರೆ, ಆ ಕೆಲಸವನ್ನೇ ಕೇಂದ್ರ ಮರೆತುಬಿಟ್ಟಿದೆ. ಈ ಹಿಂದೆ ಘೋಷಿಸಿದಂತೆ ಉದ್ಯೋಗ ಸೃಷ್ಟಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಕೇಂದ್ರ ಸರ್ಕಾರ, ಈಗ ಮತ್ತೊಮ್ಮೆ ಸುಳ್ಳು ಹೇಳಲು ಬಜೆಟ್ ನ್ನು ಬಳಸಿಕೊಂಡಿದೆ. ರಾಜಕೀಯ ಸಮಾವೇಶಗಳಲ್ಲಿ ಸುಳ್ಳು ಹೇಳುವಂತೆ ಬಜೆಟ್ನಲ್ಲಿ ಹೇಳಿದೆ. ಕೆಟ್ಟ ಸಂಪ್ರದಾಯಕ್ಕೆ ಈಗಿನ ಕೇಂದ್ರ ನಾಂದಿ ಹಾಡಿದೆ. ಚಿನ್ನದ ಬೆಲೆ ಈಗಲೇ ಗಗನಕ್ಕೆ ಏರಿದೆ. ಈಗ ಮತ್ತೊಮ್ಮೆ ಬೆಲೆ ಹೆಚ್ಚಳ ಮಾಡಿರುವುದು ಬಡ, ಮಧ್ಯಮ ವರ್ಗದ ಮಹಿಳೆಯರ ಚಿನ್ನದ ಆಸೆಗೆ ತಣ್ಣೀರು ಎರಚಿಸಿದೆ. ಚಿನ್ನದ ಬೆಲೆ ಏರಿಕೆ ವಿವಿಧ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರಲಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಡಿವಾಣ ಹಾಕುವ ಸಣ್ಣ ಪ್ರಯತ್ನ ಮಾಡಿಲ್ಲ. ಇದೊಂದು ನಿರಾಶದಾಯಕ, ಜನರನ್ನು ಭ್ರಮನಿರಸಗೊಳಿಸಿದ ಬಜೆಟ್ ಆಗಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡಿರುವುದು ಸ್ವಾಗತ ಆಗಿದ್ದರೂ, ಅದಕ್ಕಿಂತಲೂ ಮುಖ್ಯವಾಗಿ ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕಿತ್ತು. ನಾನು ಸಂಸದನಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಶಾಸಕರ ಒತ್ತಾಸೆಗೆ ರಾಷ್ಟ್ರೀಯ ಯೋಜನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಆದರೆ, ಅ ಕೆಲಸ ಆಗಿಲ್ಲ. ಜೊತೆಗೆ ಅನುದಾನ ಬಿಡುಗಡೆಗೆ ಷರತ್ತು ವಿಧಿಸಿದರೆ ಘೋಷಣೆ ಮಾಡಿದ್ದು ಕೂಡ ಯೋಜನೆಗೆ ಉಪಯೋಗ ಆಗುವುದಿಲ್ಲ. ಈ ಕುರಿತು ಸ್ಷಪ್ಟನೆ ಇಲ್ಲ ಎಂದು ಅವರು ಟೀಕಿಸಿದ್ದಾರೆ.