i
ಕೋಟೆ ನಾಡಿನಲ್ಲಿ ಗಂಧಗುಡಿ-ಕಾಂತಾರ ಫಲ-ಪುಷ್ಪ ಪ್ರದರ್ಶನ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ತೋಟಗಾರಿಕೆ ಸಂಘವನ್ನು ಚಿತ್ರದುರ್ಗದಲ್ಲಿ ೧೯೮೧ನೇ ಇಸವಿಯಲ್ಲಿ ನಗರದ ಪ್ರಮುಖರು, ತೋಟಗಾರಿಕೆ ಪರಿಣಿತರು ಹಾಗೂ ಉತ್ಸಾಹಿಶಾಲಿಗಳು ಸ್ಥಾಪಿಸಿದರು. ಅಂದಿನಿಂದ ಇಂದಿನವರೆಗೆ ಪ್ರತಿವರ್ಷವೂ ಫಲ-ಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ವತಿಯಿಂದ ಜಂಟಿಯಾಗಿ ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ೩೦ನೇ ಫಲ-ಪುಷ್ಪ ಪ್ರದರ್ಶನವನ್ನು ದಿನಾಂಕ:೧೦.೦೨.೨೦೨೩ ರಿಂದ ದಿನಾಂಕ:೧೨.೦೨.೨೦೨೩ ರವರೆಗೆ ಜಿಲ್ಲಾ ತೋಟಗಾರಿಕೆ ಕಛೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಚಿತ್ರದುರ್ಗ ಜಿಲ್ಲಾ ಫಲ-ಪುಷ್ಪ ಪ್ರದರ್ಶನವನ್ನು ಪ್ರತಿ ವರ್ಷವೂ ಆಚರಿಸುತ್ತಿದ್ದು , ವಿವಿಧ ಜಾತಿಯ ಹೂಗಳು, ಹಣ್ಣುಗಳು, ತರಕಾರಿಗಳು, ಮತ್ತು ಹಲವು ವಿಶೇಷ ಬಗೆಯ ಅಲಂಕಾರಿಕಾ ಗಿಡಗಳನ್ನು ಬೆಳೆಸಿ ಪ್ರದರ್ಶಿಸಲಾಗುತ್ತಿದೆ. ಫಲ-ಪುಷ್ಪ ಪ್ರದರ್ಶನದಲ್ಲಿ ಹೂವಿನ ಗಿಡಗಳ ಬೃಹತ್ ಪ್ರದರ್ಶನ, ಇಕೆಬಾನ, ಕುಬ್ಜ ಮರ ಗಿಡಗಳು, ತರಕಾರಿ ಕೆತ್ತನೆ, ಅಲಂಕಾರಿಕಾ ಗಿಡಗಳ ಜೋಡಣೆ ಹಾಗೂ ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಏರ್ಪಡಿಸಿ, ವಿವಿಧ ಸ್ಪರ್ಧೆಗಳನ್ನು ಸಹ ಹಮ್ಮಿಕೊಳ್ಳಲಾಗುವುದು.
೩೦ನೇ ಫಲ-ಪುಷ್ಪ ಪ್ರದರ್ಶನದ ವಿಶೇಷ ಆಕರ್ಷಣೆಗಳು:
೧) ಗಂಧದ ಗುಡಿ ಮತ್ತು ಕಾಂತಾರ:: ಫಲ ಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿ ಗಿಡ ಮರಗಳ, ಪ್ರಾಣಿ ಪಕ್ಷಿಗಳನ್ನು ಉಳಿಸಿ ರಕ್ಷಣೆ ಮಾಡುವ ಪರಿಕಲ್ಪನೆಯೊಂದಿಗೆ ಗಂಧದ ಗುಡಿ ಹಾಗೂ ಕಾಂತಾರದ ವಿವಿಧ ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು.
೨) ಗಾಳಿ ಗೋಪುರ ಉಯ್ಯಾಲೆ ಕಂಬ :: ಚಿತ್ರದುರ್ಗದ ಐತಿಹಾಸಿಕ ಗಾಳಿ ಗೋಪುರ ಮತ್ತು ಉಯ್ಯಾಲೆ ಕಂಬದ ಕಲಾಕೃತಿಗಳನ್ನು ನಿರ್ಮಾಣ ಮಾಡಿ ಪ್ರದರ್ಶಿಸಲಾಗುವುದು.
೩) ಸಿದ್ದೇಶ್ವರ ಸ್ವಾಮಿಜಿಯವರು :: ಸಿದ್ದೇಶ್ವರ ಸ್ವಾಮಿಜಿಯವರು ೦೫ ಸೆಪ್ಟೆಂಬರ್ ೧೯೪೦ ರಲ್ಲಿ ಜನಿಸಿದರು. ಭರತಭೂಮಿ ಕಂಡ ಶ್ರೇಷ್ಠ ತತ್ವಜ್ಞಾನಿ ಜ್ಞಾನ ಯೋಗಾಶ್ರಮದ ಅಧ್ಯಕ್ಷರಾಗಿ ನಿಸ್ವಾಥ ಸೇವೆ, ರಾಗ ದ್ವೇಷ ಮುಕ್ತ ವ್ಯಕ್ತಿತ್ವ ಹೊಂದಿದವರು. ಯಾವುದೇ ಗಾಯನ, ಲೇಖನ, ಪ್ರವಚನಗಳು ಬರಿ ಗೀಳಲ್ಲ ಕಾಣಿರೋ, ಹರಿವ ಜಲದಂತೆ ಸುಡುವ ಅಗ್ನಿಯಂತೆ, ಪಾಲ್ಮೊಸರ ಕಡೆದ ಬೆಣ್ಣೆಯಂತೆ, ಸರಳ ಬದುಕಿನ ಮಾನವ ಮಹಾಮಾನವನಾಗಿ ಆದರ್ಶದ ಮಾದರಿಯೇ ತಾನಾಗಿ ಮಾನವೀಯತೆಯ ಸಿದ್ದಿಯನ್ನು ಸಾಧಿಸಿದ ಸಂತ ಸಿದ್ದೇಶ್ವರ ಸ್ವಾಮಿಗಳ (೦೨ ಜನವರಿ ೨೦೨೩ ರಂದು ನಿಧನರಾದರು) ಕಲಾಕೃತಿಯನ್ನು ಪ್ರದರ್ಶಿಸಲಾಗುವುದು.
೪) ತರಕಾರಿ ಮನೆ ಹಾಗೂ ಹಳ್ಳಿಯ ಸೊಗಡು :: ಗ್ರಾಮೀಣ ಪ್ರದೇಶದಲ್ಲಿ/ಹಿಂದಿನ ಕಾಲದಲ್ಲಿ ದಿನನಿತ್ಯ ಬಳಸುವಂತಹ ಸಲಕರಣೆಗಳನ್ನು ಪರಿಚಯ ಮಾಡುವ ಉದ್ದೇಶದಿಂದ ತರಕಾರಿ ಮತ್ತು ಹಣ್ಣುಗಳ ಮನೆ ನಿರ್ಮಿಸಿ ಮನೆಯ ಒಳಗೆ ಸಲಕರಣೆಗಳಾದಂತಹ ಬೀಸುವ ಕಲ್ಲು, ವಡೇವು, ಒನಕೆ, ರುಬ್ಬುವ ಕಲ್ಲು, ಸೋರೆಗಳು ಇತರೆ ವಸ್ತುಗಳನ್ನು ಪ್ರದರ್ಶಿಸಲಾಗುವುದು ಹಾಗೂ ವಿವಿಧ ಜಾತಿಯ ಬಹು ಉಪಯೋಗವಾಗುವಂತಹ ಔಷಧಿ ಗಿಡಗಳನ್ನು ಪ್ರದರ್ಶಿಸಲಾಗುವುದು.
೫) ಮತದಾನ ಜಾಗೃತಿ ಕುರಿತು ಕಲಾಕೃತಿ :: ಮತದಾನ ಸಂಭ್ರಮ ಆದಾಗ ಮಾತ್ರ ದೇಶ ಬದಲಾಗುತ್ತದೆ. ಮತದಾನ ಪ್ರತಿಯೊಬ್ಬರ ಹಕ್ಕು, ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೇ ಕಢ್ಢಾಯವಾಗಿ ಮತದಾನ ಚಲಾಯಿಸಬೇಕೆಂಬ ದೃಷ್ಟಿಯಿಂದ ಸಾರ್ವತ್ರಿಕ ಚುನಾವಣೆ ೨೦೨೩ ರಲ್ಲಿ ಬಳಸುವಂತಹ ವಿದ್ಯುನ್ಮಾನ ಯಂತ್ರಗಳ (ಇ.ವಿ.ಎಂ ) ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು.
೬) ಮಕ್ಕಳಿಗೆ ವಿಶೇಷ ಪ್ರದರ್ಶನ :: ಈ ಬಾರಿಯ ಪ್ರದರ್ಶನದಲ್ಲಿ ಮಕ್ಕಳ ವಿಭಾಗ ವಿಶೇಷ ಆಕರ್ಷಣೆಯಾಗುತ್ತಿದೆ. ಇದರಲ್ಲಿ ಮಕ್ಕಳ ನೀತಿ ಕತೆ ಬಿಂಬಿಸುವ ಕಲಾಕೃತಿಗಳು, ಮಕ್ಕಳಿಗೆ ತರಕಾರಿ ಹಣ್ಣುಗಳ ಬಗ್ಗೆ ಮಾಹಿತಿ ನೀಡಲಾಗುವುದು, ಟ್ರಾಫಿಕ್ ಸಿಗ್ನಲ್ಸ್ ಬಗ್ಗೆ, ಶ್ರೀಕೃಷ್ಣನ ಕಾಳಿಂಗ ಮರ್ದನ, ಬುದ್ದ ಮತ್ತು ಅಂಗುಲಿಮಾಲ, ಹಿಂದಿನ ಕಾಲದ ರೈಲುಬಂಡಿ, ಭೀಮನು ಆಂಜನೇಯ ಬಾಲ ಎತ್ತುವ ಕಥೆ, ಮೊಲ ಮತ್ತು ಸಿಂಹ ಮಕ್ಕಳಿಗೆ ಅಚ್ಚುಮೆಚ್ಚಿನ ಅಚಿಡಿಣooಟಿ ಪಾತ್ರಗಳ ಕಲಾಕೃತಿ ಪ್ರದರ್ಶನಗೊಳಿಸುವುದು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರುತ್ತದೆ.
೭) ಮಾದರಿ ಕ್ಷೇತ್ರ ನಿರ್ಮಾಣ :: ರೈತರು ಅಳವಡಿಕೆ ಮಾಡಿಕೊಳ್ಳಬೇಕಾದ ತೋಟಗಾರಿಕೆ ಕ್ಷೇತ್ರದ ಒಂದು ಮಾದರಿ ನಿರ್ಮಿಸಿ ವಿವಿಧ ಬಹು ಬೆಳೆ ಪದ್ಧತಿ ಬಗ್ಗೆ ನೀರನ್ನು ಮಿತಗೊಳಿಸಿ ನೀರಾವರಿ ಒದಗಿಸುವ ಬಗ್ಗೆ, ಕೈತೋಟ ಮತ್ತು ತಾರಸಿ ತೋಟದ
ಬಗ್ಗೆ, Processing Unit ಹಾಗೂ ರಫ್ತು ಮಾಡುವ ಬಗ್ಗೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಉದ್ದೇಶಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲು ಮಾದರಿ ಕ್ಷೇತ್ರದ ಪ್ರದರ್ಶನ ಏರ್ಪಡಿಸಲಾಗುವುದು.
೮) ಬಿಸಿಲು ನಾಡಿನಲ್ಲಿ ಪುಷ್ಪಗಳ ಕಾರುಬಾರು :: ವಿವಿಧ ಪುಷ್ಪ ಜೋಡಣೆಗಳಿಗೆ ಹಲವು ಬಗೆಯ ವಿಶೇಷ ಹೂಗಳನ್ನು ಬಳಸುತ್ತಿರುವುದರ ಜೊತೆಗೆ ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ ಸುಮಾರು ೫೦ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಆರ್ಕಿಡ್ಸ್, ಕಾರ್ನೇಶನ್, ಕಾಕ್ಸ್ ಕೂಂಬ್, ಸೆಲೋಶಿಯಾ, ಪ್ಲಾಕ್ಸ್, ಗಾಕ್ಸೀನಿಯ, ಕಲಂಚಾ, ಲಿಲ್ಲಿಸ್, ಇಂಪೇಷನ್ಸ್ (ಮಿಕ್ಸ್ಡ್), ಡೇಲಿಯಾ (ಡ್ವಾರ್ಫ್), ಸಾಲ್ವಿಯಾ (ಕೆಂಪು, ನೀಲಿ ಕೇಸರಿ, ಬಿಳಿ) ಚೆಂಡು ಹೂ, ಚಿಂತಾಮಣಿ ಚೆಂಡು ಹೂ, ಜಿನಿಯಾ, ಪೆಟೂನಿಯಾ, ಕಾಸ್ಮಾಸ್, ಬಾಲ್ಸಂ, ಜಿರೇನಿಯಂ, ಹಾಲಿಹಾಕ್, ಆಂಟಿರಿನಮ್, ಡಯಾಂತಸ್, ಕ್ಯಾಲೊಂಡೋಲಾ, ಸೇವಂತಿಗೆ, ಪೆಂಟಾಸ್, ಫ್ಯಾನ್ಸಿ, ಇಪೋರ್ಬಿಯ ಮಿಲ್ಲಿ, ಫಾಯಿನ್ಸಿಟಿಯಾ, ಬಿಗೋನಿಯಾ, ವಿಂಕಾ, ಆಂತೋರಿಯಂ ಇತ್ಯಾದಿ ವಿವಿಧ ಪುಷ್ಪ ಸಸಿಗಳು, ನೂರಕ್ಕೂ ಹೆಚ್ಚು ಬಗೆಯ ತಳಿಗಳು, ಪ್ರದರ್ಶಿಸುವುದರೊಂದಿಗೆ ಪುಷ್ಪ ರಸಿಕರಿಗೆ ಪ್ರದರ್ಶನ ಮುದ ನೀಡಲಿದೆ.
೯) ಜಿಲ್ಲೆಯ ರೈತರು ಬೆಳೆದಿರುವ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ :: ಜಿಲ್ಲೆಯ ರೈತರು ಬೆಳೆದಿರುವ ಹೂ, ತರಕಾರಿ, ಹಣ್ಣು, ಹಾಗೂ ಇತರೆ ವಿಶೇಷವಾದ ತೋಟಗಾರಿಕೆ ಉತ್ಪನ್ನಗಳನ್ನು ಫಲ-ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು. ಸುಮಾರು ೫೦೦ ಕ್ಕೂ ಹೆಚ್ಚು ವಿವಿಧ ಜಾತಿಯ ಉತ್ಪನ್ನಗಳನ್ನು ಪ್ರದರ್ಶಿಸಲು ತೀರ್ಮಾನಿಸಲಾಗಿರುತ್ತದೆ. ಉತ್ತಮವಾಗಿ ಬೆಳೆದ ರೈತರಿಗೆ ಬಹುಮಾನಗಳನ್ನು ಕೊಡುವುದರಿಂದ ತೋಟಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ.
೧೦) ಹಣ್ಣು ಮತ್ತು ತರಕಾರಿ ಕೆತ್ತನೆಯಲ್ಲಿ :: ನಮ್ಮ ದೇಶದ ಹೆಮ್ಮೆಯ ಗಡಿ ಕಾಯುವ ಸೈನಿಕರ ಪರಿಶ್ರಮದ ಪರಿಕಲ್ಪನೆಯ ತರಕಾರಿ ಕೆತ್ತನೆ ಕಲಾಕೃತಿಯನ್ನು ಪ್ರದರ್ಶಿಸಲಾಗುವುದು.
೧೧) ತೆಂಗಿನ ಚಿಪ್ಪಿನಲ್ಲಿ ಕಲಾಕೃತಿ :: ತೆಂಗಿನ ಚಿಪ್ಪಿನಲ್ಲಿ ವಿವಿಧ ರೀತಿಯ ಕಲಾಕೃತಿಗಳನ್ನು ಕೆತ್ತೆನೆ ಮಾಡಿದ ಪ್ರದರ್ಶಿಕೆಗಳನ್ನು ಪ್ರದರ್ಶಿಸಿಲಾಗುವುದು.
೧೨) ನೀರು ಹರಿಯುವಂತೆ ಇರುವ ಜಲಪಾತಗಳು :: ನೀರು ಹರಿಯುವಂತೆ ಇರುವ ಜಲಪಾತಗಳನ್ನು ಫಲ-ಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು.
೧೩) ವಿವಿಧ ಇಲಾಖೆಗಳಿಂದ ವಸ್ತು ಪ್ರದರ್ಶನ ಮಳಿಗೆಗಳು :: ಪ್ರದರ್ಶನದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಿಂದ ತಮ್ಮ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದರಿಂದ ಒಂದೇ ಸೂರಿನಡಿ ಎಲ್ಲಾ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ ರೈತರಿಗೆ ಹಾಗೂ ಆಸಕ್ತ ಸಾರ್ವಜನಿಕರಿಗೆ ದೊರೆಯುತ್ತದೆ.
೧೪) ಸಾಂಸೃತಿಕ ಕಾರ್ಯಕ್ರಮಗಳು :: ಪ್ರದರ್ಶನದ ಅಂಗವಾಗಿ ನಗರದ ಶಾಲಾ ಮಕ್ಕಳಿಗೆ ಜಾನಪದ ಹಾಗೂ ಭಾವಗೀತೆ ಸ್ಪರ್ಧೆ, ಚಿತ್ರಕಲಾ ಸ್ಟರ್ಧೆ, ಪ್ರಬಂಧ ಸ್ಪರ್ದೆ, ಹಣ್ಣು ಮತ್ತು ಹೂ ತರಕಾರಿಗಳನ್ನು ಬಳಸಿ ಪ್ಯಾನ್ಸಿ ಡ್ರಸ್ಸ್ ಸ್ಪರ್ದೆ, ರಂಗೋಲಿ ಸ್ಪರ್ದೆ, ಚಿಕ್ಕ ಮಕ್ಕಳಿಗೆ ಹಣ್ಣು ಮತ್ತು ತರಕಾರಿಗಳ ಗುರುತಿಸುವ ಸ್ಪರ್ದೆ, ತರಕಾರಿ ಕೆತ್ತನೆ, ಹೂ ಜೋಡಣೆ ಸ್ಪರ್ದೆ, ಬೋನ್ಸಯ್ ಸ್ಪರ್ದೆಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಈ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಹಾಗೂ ಹಾಲಿ ವರ್ಷದಲ್ಲಿ ನಗದು ಬಹುಮಾನ ವನ್ನು ಸಹ ನೀಡಲಾಗುವುದು ಎಂದು
ಜಿಪಂ ಸಿಇಒ ಎಂ.ಎಸ್. ದಿವಾಕರ್, ತೋಟಗಾರಿಕೆ ಉಪ ನಿರ್ದೇಶಕಿ ಡಾ.ಜಿ.ಸವಿತಾ, ಉಪಾಧ್ಯಕ್ಷೆ ಸುಜಯ್ ಶಿವಪ್ರಕಾಶ್, ಪದನಿಮಿತ್ತ ಕಾರ್ಯದರ್ಶಿ ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ.ದೇವರಾಜು ತಿಳಿಸಿದ್ದಾರೆ.