i
ಮಾಧ್ಯಮ ವಾರ್ಷಿಕ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿಗಳಿಗೆ ಆಯ್ಕೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಕೆ. ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಪರಿಗಣಿಸಿ ನಾಲ್ಕು ವರ್ಷಗಳ (2019, 2020, 2021 ಮತ್ತು 2022) ನಾಡಿನ ವಿವಿಧ ಪತ್ರಕರ್ತರನ್ನು“ಮಾಧ್ಯಮ ವಾರ್ಷಿಕ ಪ್ರಶಸ್ತಿ” ಮತ್ತು “ದತ್ತಿ ಪ್ರಶಸ್ತಿ”ಗಳಿಗೆ ಆಯ್ಕೆ ಮಾಡಲಾಗಿದೆ.
ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಗೆ ರೂ.50,000 ಗಳು, ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ25 ಸಾವಿರ ರೂ. ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. ನಾಲ್ಕು ವರ್ಷಗಳು ಸೇರಿ 124 ಮಂದಿ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಾಗೆಯೇ ಒಟ್ಟು 21 ಮಂದಿ ಪತ್ರಕರ್ತರನ್ನು “ದತ್ತಿ ಪ್ರಶಸ್ತಿ” ಗೆ ಆಯ್ಕೆ ಮಾಡಲಾಗಿದೆ.
ನಾಲ್ಕು ವರ್ಷಗಳ ದತ್ತಿ ಪ್ರಶಸ್ತಿಗಳು: ಆಂದೋಲನ ಸಂಸ್ಥೆಯವರು ಸ್ಥಾಪನೆ ಮಾಡಿರುವಅತ್ಯುತ್ತಮಜಿಲ್ಲಾ ಪತ್ರಿಕೆಗೆ ನೀಡುವ “ಆಂದೋಲನ ಪ್ರಶಸ್ತಿ”, ಅಭಿಮಾನಿ ಸಂಸ್ಥೆಯವರು ಸ್ಥಾಪನೆ ಮಾಡಿರುವ “ಅಭಿಮಾನಿ” ಮತ್ತು “ಅರಗಿಣಿ” ಪ್ರಶಸ್ತಿಗಳು, ಮೈಸೂರು ದಿಗಂತ ಪತ್ರಿಕೆ ಸ್ಥಾಪಿಸಿರುವ “ಮೈಸೂರು ದಿಗಂತ” ಪ್ರಶಸ್ತಿ ಹಾಗೂ ಪತ್ರಕರ್ತ ಕೆ. ಶಿವಕುಮಾರ್ ಸ್ಥಾಪಿಸಿರುವ ಡಾ.ಬಿ.ಆರ್. ಅಂಬೇಡ್ಕರ್ “ಮೂಕನಾಯಕ ಪ್ರಶಸ್ತಿ” ಗೂ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳ ಮೊತ್ತ ತಲಾ 10 ಸಾವಿರ ರೂ.ನಗದು ಬಹುಮಾನ ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ನೆರವೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರೆ ಸಚಿವರು ಹಾಗೂ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸದಾಶಿವ ಶೆಣೈ ಕೆ. ಅವರು ತಿಳಿಸಿದ್ದಾರೆ.