i
ಲೋಕಾಯುಕ್ತ ಬಲೆಗೆ ಬಿದ್ದ ಕೋಟೆ ನಾಡಿನ ಪಿಡಿಒ, ಕಂಪ್ಯೂಟರ್ ಆಪರೇಟರ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಕುಟುಂಬಕ್ಕೆ ಕೂಲಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಇಬ್ಬರು ಗ್ರಾಪಂ ಸಿಬ್ಬಂದಿಗಳು ಈಗ ಜೈಲು ಕಂಬಿ ಎಣಿಸುತ್ತಿರುವ ಪ್ರಕರಣ ಕೋಟೆ ನಾಡಿನಲ್ಲಿ ಜರುಗಿದೆ.
ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಕೆಲಸ ಮಾಡಿದ್ದ ಗ್ರಾಪಂ ಸದಸ್ಯನ ಕುಟುಂಬದ ಕೂಲಿ ಹಣ ಬ್ಯಾಂಕ್ ಖಾತೆಗೆ ಹಾಕಲು ಗ್ರಾಮ ಪಂಚಾ ಯಿತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಕಂಪ್ಯೂಟರ್ ಆಪರೇಟರ್ ಇಬ್ಬರು ಲೋಕಾಯುಕ್ತ ಬೀಸಿದ ಬಲೆಗೆ ಬಿದ್ದು ಜೈಲು ಕಂಬಿ ಎಣಿಸುತ್ತಿರುವ ಘಟನೆ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಜಾನಕಲ್ ಜರುಗಿದೆ.
ಜಾನಕಲ್ ಗ್ರಾಪಂ ಪಿಡಿಒ ಕೆ. ಶ್ರೀನಿವಾಸ್ ಹಾಗೂ ಕಂಪ್ಯೂಟರ್ ಆಪರೇಟರ್ ಟಿ. ಚನ್ನಬಸಪ್ಪ ಲಂಚ ಸ್ಪೀಕರಿಸುವಾಗ ಸಿಕ್ಕಿಬಿದ್ದಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯ ಜಾನಕಲ್ ಭೀಮಪ್ಪ ಅವರಿಂದ 4,000 ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಇಬ್ಬರನ್ನು ಬಂಧಿಸಿ ಲಂಚ ಹಣವನ್ನು ಜಪ್ತಿ ಮಾಡಿದ್ದಾರೆ.
ಗ್ರಾಪಂ ಸದಸ್ಯ ಭೀಮಪ್ಪ ಅವರ ಕುಟುಂಬದ ಸದಸ್ಯರು ನರೇಗಾ ಅಡಿ ನಡೆದ ಕಾಮಗಾರಿಯಲ್ಲಿ ಕೆಲಸ ಮಾಡಿದ್ದರು. ಕೂಲಿಯ ಹಣದಲ್ಲಿ ಅರ್ಧ ಬಿಡುಗಡೆ ಮಾಡಿದ್ದ ಪಿಡಿಒ ಶ್ರೀನಿವಾಸ್, ಉಳಿದ ಮೊತ್ತ ಬಿಡುಗಡೆ ಮಾಡಲು ಲಂಚ ನೀಡುವಂತೆ ಪೀಡಿಸುತ್ತಿದ್ದರು. ಮೂಡ್ಲಭೋವಿಹಟ್ಟಿಯ ಸರ್ಕಾರಿ ಶಾಲೆಯ ಕಾಂಪೌಂಡ್ ನಿರ್ಮಾಣದ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಭೀಮಪ್ಪ ಅವರು ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು ಲೋಕಾಯುಕ್ತ ಪೊಲೀಸರು ಲಂಚ ಪಡೆಯುವಾಗ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.