i
ಲೋಕಾಯುಕ್ತ ದಾಳಿ, ಪಹಣಿ ತಿದ್ದುಪಡಿಗೆ 65 ಸಾವಿರ ಲಂಚ ಪಡೆದ ಅಧಿಕಾರಿ ಜೈಲಿಗೆ…
ಹೂವಿನಹಡಗಲಿ(ವಿಜಯನಗರ ಜಿಲ್ಲೆ):
ಪಹಣಿ ತಿದ್ದು ಪಡಿಯಂತಹ ಕಾರ್ಯಕ್ಕೆ 60-70 ಸಾವಿರ ಲಂಚ ಪಡೆಯುತ್ತಾರೆಂದರೆ ಆಡಳಿತ ವ್ಯವಸ್ಥೆ ಯಾವ ಪರಿ ಹದಗೆಟ್ಟಿದೆ ಎನ್ನುವುದಕ್ಕೆ ಹೂವಿನಹಡಗಲಿ ತಾಲೂಕು ಕಚೇರಿ ಸಾಕ್ಷಿಯಾಗಿದೆ.
ಹೂವಿನಹಡಗಲಿ ತಹಶೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಪಹಣಿ ತಿದ್ದುಪಡಿಗಾಗಿ ಲಂಚ ಪಡೆಯುವಾಗ ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದು ಈಗ ಜೈಲು ಕಂಬಿ ಹಿಂದಿದ್ದಾರೆ.
ತಾಲ್ಲೂಕು ಕಚೇರಿಯ ಡಿಸಿಬಿ ವಿಭಾಗದ ಪ್ರಥಮ ದರ್ಜೆ ಸಹಾಯಕ ವೆಂಕಟಸ್ವಾಮಿ ಹಿರೇಕೊಳಚಿ ಗ್ರಾಮದ ನಿವೃತ್ತ ಶಿಕ್ಷಕ ಲಕ್ಕಪ್ಪ ಅಂಗಡಿ ವಡ್ಡರ ಅವರಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತಾಲ್ಲೂಕಿನ ಹಿರೇಕೊಳಚಿ ಗ್ರಾಮದ ವಡ್ಡರ ಚೌಡಮ್ಮ ಎಂಬುವವರಿಗೆ ಸೇರಿದ ಹಗರನೂರು ಕಂದಾಯ ಗ್ರಾಮದ ಸ.ನಂ. 330/ಎ. ಜಮೀನಿನ ಪಹಣಿ ತಿದ್ದುಪಡಿ ಮಾಡಲು ನ್ಯಾಯಾಲಯ ಆದೇಶಿಸಿತ್ತು. ನ್ಯಾಯಾಲಯ ನಿರ್ದೇಶನದ ಮೇರೆಗೆ ಪಹಣಿ ತಿದ್ದಪಡಿ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಆದರೂ ಕೆಲದಿನಗಳಿಂದ ಪಹಣಿ ತಿದ್ದುಪಡಿಗೆ ಸತಾಯಿಸಿದ ವೆಂಕಟಸ್ವಾಮಿ 70 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು ಹೂವಿನಹಡಗಲಿ ಪಟ್ಟಣದ ಬಸ್ ನಿಲ್ದಾಣ ಹತ್ತಿರದ ಶ್ರೀದೇವಿ ಹೋಟೆಲ್ ನಲ್ಲಿ 65 ಸಾವಿರ ರೂ. ಲಂಚ ಪಡೆಯುವಾಗ ಲೋಕಾಯುಕ್ತರು ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಲೋಕಾಯುಕ್ತ ಇನ್ ಸ್ಪೆಕ್ಟರ್ ಗಳಾದ ಸಂಗಮೇಶ, ಸುರೇಶಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.