i
ಚಿತ್ರದುರ್ಗದಲ್ಲಿ ಪೊಲೀಸರ ಮುಂಚಿನ ಕಾರ್ಯಾಚರಣೆ, ನಾಲ್ಕು ಮಂದಿ ಸಾವಿನ ಆರೋಪಿ ಬಂಧನ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ/ಭಟ್ಕಳ:
ಇತ್ತೀಚೆಗೆ ನಡೆದಿದ್ದ ನಾಲ್ಕು ಮಂದಿ ಕೊಲೆಯ ಪ್ರಮುಖ ಆರೋಪಿಯನ್ನು ಚಿತ್ರದುರ್ಗದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಭಟ್ಕಳ ತಾಲೂಕಿನ ಹಾಡುವಳ್ಳಿಯಲ್ಲಿ ಕಳೆದ ಶುಕ್ರವಾರ ನಡೆದ ನಾಲ್ವರ ಹತ್ಯೆಯ ಪ್ರಮುಖ ಆರೋಪಿಯನ್ನು ಪೊಲೀಸರ ತಂಡ ಚಿತ್ರದುರ್ಗದಲ್ಲಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಚಿತ್ರದುರ್ಗದಲ್ಲಿ ಪೊಲೀಸರು ಬಂಧಿಸಿರುವ ಆರೋಪಿ ವಿನಯ್ ಭಟ್ಟ ಎನ್ನಲಾಗಿದೆ.
ಹಾಡುವಳ್ಳಿಯಲ್ಲಿ ನಾಲ್ವರನ್ನು ಕೊಲೆ ಮಾಡಿದ ನಂತರ ತನ್ನ ತಂದೆಯೊಂದಿಗೆ ಹಲ್ಯಾಣಿಯ ಮನೆಗೆ ಹೋಗಿದ್ದ ಈತ ಮನೆಯಲ್ಲಿ ಸ್ನಾನ ಮಾಡಿ ಬಟ್ಟೆಯನ್ನು ಬದಲಿಸಿ ದ್ವಿಚಕ್ರ ವಾಹನದಲ್ಲಿ ಕಾರ್ಗಲ್ ತಲುಪಿದ್ದ ಎನ್ನಲಾಗಿದೆ. ಅಲ್ಲಿ ತನ್ನ ದ್ವಿಚಕ್ರ ವಾಹನ ಬಿಟ್ಟು ಶಿವಮೊಗ್ಗಕ್ಕೆ ಬಸ್ಸಿನಲ್ಲಿ ಬಂದ ನಂತರ ಅಲ್ಲಿಂದ ಚಿತ್ರದುರ್ಗಕ್ಕೆ ಬಂದಿದ್ದನು ಎನ್ನಲಾಗುತ್ತಿದೆ.
ಆರೋಪಿಯ ಜಾಡು ಹಿಡಿದು ಪೊಲೀಸರು ಚಿತ್ರದುರ್ಗದಲ್ಲಿ ವಶಕ್ಕೆ ಪಡೆದಿರುವ ಕುರಿತು ತಿಳಿದು ಬಂದಿದೆ, ಈಗಾಗಲೇ ಪೊಲೀಸರ ವಶದಲ್ಲಿರುವ ಇನ್ನೋರ್ವ ಆರೋಪಿ ವಿದ್ಯಾಭಟ್ಟ ಎಂಬವರನ್ನು ಕಾರವಾರದ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ. ಮತ್ತೊರ್ವ ಆರೋಪಿ ಶ್ರೀಧರ ಭಟ್ಟ ಎಂಬವನನ್ನು ಈಗಾಗಲೇ ಬಂಧಿಸಲಾಗಿದೆ ಎನ್ನುವ ಮಾಹಿತಿಗಳು ಲಭ್ಯವಾಗುತ್ತಿದ್ದು ಪೊಲೀಸರು ಅಧಿಕೃತವಾಗಿ ಮಾಹಿತಿ ಹೊರ ಹಾಕಬೇಕಿದೆ.