i
ಉದ್ಘಾಟನೆ ಭಾಗ್ಯ ಕಾಣದ ಭೌತಶಾಸ್ತ್ರ ವಿಭಾಗ ಮತ್ತು ಸಭಾಂಗಣ ಕಟ್ಟಡ, 2 ಕೋಟಿ ರೂ.ಮಣ್ಣುಪಾಲು…
ಹೆಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೋಟೆ ನಾಡಿನ ಪ್ರತಿಷ್ಠಿತ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 2 ಕೋಟಿ ರೂ.ವೆಚ್ಚದ ಕಟ್ಟಡ ಉದ್ಘಾಟನೆ ಭಾಗ್ಯ ಕಾಣದೆ ಶಿಥಿಲಾವಸ್ಥೆಯತ್ತ ಸಾಗಿದೆ.
ನಗರದ ಸರ್ಕಾರಿ ವಿಜ್ಞಾನ ಕಾಲೇಜ್ ದೇಶ ಮತ್ತು ರಾಜ್ಯದಲ್ಲೇ ಅತ್ಯುತ್ತಮ ಕಾಲೇಜ್ ಎನ್ನುವ ಹೆಗ್ಗಳಿಕೆ ಹೊಂದಿದೆ. ದೇಶ ಸ್ವಾತಂತ್ರ್ಯ ಪಡೆದ ಮರು ವರ್ಷದಲ್ಲೇ ಬೃಹತ್ ಸರ್ಕಾರಿ ವಿಜ್ಞಾನ ಕಾಲೇಜ್ ಕಟ್ಟಡ ನಿರ್ಮಾಣಗೊಂಡಿತು. ಸತತ 74 ವರ್ಷಗಳಲ್ಲಿ ಯಾವೊಂದು ಸುಧಾರಣೆ ಕಂಡಿಲ್ಲದೆ ಸೊರಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೈಕ್ಷಣಿಕ ಕ್ಷೇತ್ರಕ್ಕೆ ಕೋಟಿ ಕೋಟಿ ಅನುದಾನ ನೀಡುತ್ತಿವೆಯಾದರೂ ಇಲ್ಲಿಗೆ ಪುಡಿಗಾಸು ಬಂದಿರುವುದು ಬಿಟ್ಟರೆ ಬೇರೇನು ಅನುದಾನ ನೀಡುತ್ತಿಲ್ಲ.
ನಗರದ ಸರ್ಕಾರಿ ವಿಜ್ಞಾನ ಕಾಲೇಜ್ ಹಲವು ಸಮಸ್ಯೆಗಳನ್ನು ಹೊದ್ದು ಮಲಗಿದೆ. ಎಲ್ಲವೂ ಬೇಕಾಬಿಟ್ಟಿಯಾಗಿ ನಡೆಯುತ್ತಿದೆ. ಕಾಲೇಜ್ ಪುನಶ್ಚೇತನ ಮಾಡಬೇಕೆನ್ನುವ ಮನಸ್ಥಿತಿ ಯಾರಲ್ಲೂ ಇಲ್ಲ.
ವಿಜ್ಞಾನ ಪದವಿ ಕಾಲೇಜ್ ಜೊತೆಯಲ್ಲೇ ಈಗ ಸ್ನಾತಕೋತ್ತರ ಕಾಲೇಜ್ ಸಹ ಇದೇ ಕಟ್ಟಡದಲ್ಲೇ ನಡೆಯುತ್ತಿದೆ. ಆದರೂ ಕಾಲೇಜ್ ವಾತಾವರಣ ಮಾತ್ರ ಇಲ್ಲಿಲ್ಲ.
ಸರ್ಕಾರಿ ಕಾಲೇಜ್ ಗಳಿಗೆ ವಿದ್ಯಾರ್ಥಿಗಳ ಸೇರುವುದಿಲ್ಲ ಎನ್ನುವ ಕೊರತೆ ಈ ಕಾಲೇಜಿಗಿಲ್ಲ. 1835ಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸ್ನಾತಕೋತ್ತರ ವಿಭಾಗದಲ್ಲಿ ಗಣಿತ, ಭೌತಶಾಸ್ತ್ರ, ರಾಸಾಯನಶಾಸ್ತ್ರ ಮತ್ತು ಸಸ್ಯಶಾಸ್ತ್ರ ವಿಭಾಗಗಳಿದ್ದು ಒಟ್ಟು 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಇದಲ್ಲದೆ ಪದವಿ ವಿಭಾಗದಲ್ಲಿ ಪಿಸಿಎಂ, ಬಿಸಿಎ, ಸಿಬಿಜ್ಡ್ ಸೇರಿದಂತೆ ವಿವಿಧ ರೀತಿಯ 12 ಕೋರ್ಸ್ಗಳಿವೆ. ವಿದ್ಯಾರ್ಥಿಗಳು ಕುಳಿತು ಪಾಠ ಕೇಳಲು ಇರುವ ಕೊಠಡಿಗಳ ಸಂಖ್ಯೆ ೨4.
1835ಕ್ಕೂ ಹೆಚ್ಚು ಪದವಿ ಹಾಗೂ 300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದಾರೆ. ಇಷ್ಟು ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಕಾಲೇಜಿನಲ್ಲಿರುವುದು ಕೇವಲ ೧೦ ಬೋಧನ ತರಗತಿಗಳು ಮಾತ್ರ. ಇದರ ಜೊತೆಗೆ ನೂತನ ಕಟ್ಟಡದಲ್ಲಿ 17 ರೂಂಗಳು ಇದೆ. ಇದಲ್ಲದೆ 17 ಪ್ರಯೋಗಾಲಯ ಕೊಠಡಿಗಳಿವೆ. ಕೊಠಡಿಗಳ ಸಂಖ್ಯೆ ಕಡಿಮೆ ಇರುವುದರಿಂದ ಎಲ್ಲ ತರಗತಿಗಳ ವಿದ್ಯಾರ್ಥಿಗಳು ಒಟ್ಟಿಗೆ ಕುಳಿತು ಪಾಠ ಕೇಳಲು ಸಾಧ್ಯವಾಗುತ್ತಿಲ್ಲ.
ಇಕ್ಕಟ್ಟಿನಲ್ಲಿ ಒಬ್ಬರ ಮೇಲೊಬ್ಬರು ಕುಳಿತು ಪಾಠ ಕೇಳುವ ಪರಿಸ್ಥಿತಿ ವಿದ್ಯಾರ್ಥಿಗಳದ್ದು. ಜಾಗ ದೊರೆಯುದಿಲ್ಲ ಎನ್ನುವ ಭಯದಿಂದ ವಿದ್ಯಾರ್ಥಿಗಳು ಕಾಲೇಜ್ ಆರಂಭಕ್ಕೆ ಅರ್ಧ ಗಂಟೆ ಮುಂಚೆ ಸೀಟು ಹಿಡಿಯಲು ಚಿಕ್ಕ ಮಕ್ಕಳಂತೆ ಓಡುತ್ತಿರುತ್ತಾರೆ. ಪರಿಸ್ಥಿತಿ ಈಗಿದ್ದರೂ ಕಳೆದ ಒಂದು ವರ್ಷದ ಹಿಂದೆ 2 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಸದ್ಬಳಕೆ ಮಾಡಿಕೊಳ್ಳಲು ಆಗದ ಸ್ಥಿತಿಯಲ್ಲಿ ಕಾಲೇಜ್ ಆಡಳಿತ ವ್ಯವಸ್ಥೆ ಇದೆ.
ನೂತನ ಕಟ್ಟಡಕ್ಕೆ ಗುತ್ತಿಗೆದಾರ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲದಿರುವುದರಿಂದ ಕಳೆದ ಒಂದು ವರ್ಷದಿಂದಲೂ ನೂತನ ಕಟ್ಟಡ ಉದ್ಘಾಟನೆ ಭಾಗ್ಯ ದೊರೆಯದೇ ಧೂಳುತಿನ್ನುತ್ತಿದೆ.
ಅರ್ಧ ಶತಮಾನದ ಕಾಲೇಜು:
1948ರಲ್ಲಿ ಕಾಲೇಜು ಆರಂಭ. ಅಲ್ಲಿಂದ 2002ರವರೆಗೂ ಪದವಿ ಪೂರ್ವ ಹಾಗೂ ಪದವಿ ವಿಷಯಗಳನ್ನು ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶವಿತ್ತು. ನಂತರ ಪದವಿ ಪೂರ್ವ ಶಿಕ್ಷಣವನ್ನು ಪ್ರತ್ಯೇಕಿಸಿ ಪದವಿ ತರಗತಿಗಳನ್ನು ಮುಂದುವರಿಸಿಕೊಂಡು ಬಂದಿದೆ. 2007 ರಿಂದ ಈಚೆಗೆ ಪದವಿ ಜತೆಗೆ ಸ್ನಾತಕೋತ್ತರ ಕೇಂದ್ರವಾಗಿ ಉನ್ನತೀಕರಿಸಲಾಯಿತು. ಈ ಮೂಲಕ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಕಾರಿಯಾಯಿತು.
ಉಪನ್ಯಾಸಕರ ಕೊರತೆ!
ಭೌತಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಸೂಕ್ಷ್ಮಾಣು ಜೀವಶಾಸ್ತ್ರ, ಜೀವ ತಂತ್ರಜ್ಞಾನ ಶಾಸ್ತ್ರ ಸೇರಿದಂತೆ ಒಟ್ಟು 12 ವಿಷಯಗಳ ಪದವಿ ಅಧ್ಯಯನ ವಿಭಾಗ ಹಾಗೂ ಭೌತಶಾಸ್ತ್ರ, ಗಣಿತ, ರಸಾಯನ ಶಾಸ್ತ್ರ, ಸಸ್ಯ ಶಾಸ್ತ್ರ ನಾಲ್ಕು ಸ್ನಾತಕೋತ್ತರ ವಿಭಾಗ ಸೇರಿ ಈ ಎಲ್ಲ ಐಚ್ಛಿಕ ವಿಷಯಗಳನ್ನು ಒಳಗೊಂಡಿರುವ ಕಾಲೇಜಿನಲ್ಲಿ ಕಾಯಂ ಬೋಧಕರ ಸಂಖ್ಯೆ ಕಡಿಮೆ ಇದೆ. ಕಾಯಂ ಉಪನ್ಯಾಸಕರ ನೇಮಕಾತಿ ಮಾಡುವ ಬಗ್ಗೆ ಸರ್ಕಾರ ಗಮನಹರಿಸಬೇಕಿದೆ ಎನ್ನುತ್ತಾರೆ ಉಪನ್ಯಾಸಕರು. ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿ ವರ್ಷ ರ್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತರುತ್ತಿದ್ದಾರೆ ಎಂಬುದು ವಿಶೇಷ. ಈ ಮೂಲಕ ವಿಜ್ಞಾನ ಕಾಲೇಜು ಪ್ರಥಮ ಸ್ಥಾನದಲ್ಲಿದೆ. ಕಾಲೇಜನಲ್ಲಿರುವ ಕೊರತೆಗಳನ್ನು ನೀಗಿಸಿದರೆ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡುತ್ತಾರೆ.
ವಿಜ್ಞಾನ ಕಾಲೇಜಿನಲ್ಲಿ ನಾಲ್ಕು ಸ್ನಾತಕೋತ್ತರ ವಿಭಾಗಗಳು ಇರುವುದರಿಂದ ಅವರಿಗೆ 8 ಕೊಠಡಿ ಅಧ್ಯಯನಕ್ಕೆ, 16 ಕೊಠಡಿಗಳು ಲ್ಯಾಬ್ ಗೆ ಬೇಕೆಬೇಕು. ಇದರ ಜೊತೆಯಲ್ಲಿ ಕನಿಷ್ಠ 20 ಕೊಠಡಿಗಳು ಎಲ್ಲ ಐಚ್ಚಿಕ ವಿಷಯಗಳ ಅಧ್ಯಯನಕ್ಕೆ ಬೇಕಾಗಿದೆ. ಭೌತಶಾಸ್ತ್ರ ವಿಭಾಗಕ್ಕೆಂದು ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಜೊತೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣ, ಉಪನ್ಯಾಸದಂತಹ ಕಾರ್ಯಕ್ರಮಗಳನ್ನು ನಡೆಸಲು ಉತ್ತಮವಾದ ಸಭಾಂಗಣ ನಿರ್ಮಾಣ ಮಾಡಲಾಗಿದೆ. ಆದರೂ ಉದ್ಘಾಟನಾ ಭಾಗ್ಯ ಕಂಡಿಲ್ಲ.
“ಭೌತಶಾಸ್ತ್ರ ವಿಭಾಗದ ಕಟ್ಟಡ ಮತ್ತು ಉತ್ತಮವಾದ ಸಭಾಂಗಣ ನಿರ್ಮಾಣ ಮಾಡಲಾಗಿದ್ದು ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ, ಹಾಗಾಗಿ ಗುತ್ತಿಗೆದಾರರಿಂದ ಕಟ್ಟಡವನ್ನು ಕಾಲೇಜ್ ಅಧೀನಕ್ಕೆ ಪಡೆದುಕೊಂಡಿಲ್ಲ, ವಿದ್ಯುತ್ ಸಂಪರ್ಕ ಕಲ್ಪಿಸಿದರೆ ನಾಳೆಯೇ ಕಟ್ಟಡವನ್ನು ಕಾಲೇಜ್ ಆಡಳಿತದ ವಶಕ್ಕೆ ಪಡೆಯಲಾಗುತ್ತದೆ”. ಸಿದ್ದರಾಮು, ಪ್ರಾಂಶುಪಾಲರು, ಸರ್ಕಾರಿ ವಿಜ್ಞಾನ ಕಾಲೇಜ್, ಚಿತ್ರದುರ್ಗ.