i
ಮಳೆ ಸಿಡಿಲಿಗೆ ಕುರಿಗಾಯಿ ಸೇರಿ ಮೂರು ಮಂದಿ ಬಲಿ, ಮೇಕೆ ಕುರಿಗಳು ಸಾವು…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿದ ಅಕಾಲಿಕ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದಲ್ಲದೆ, ಮರು ಬಿದ್ದು ಓರ್ವ ಬಲಿಯಾಗಿದ್ದರೆ ಸಿಡಿಲಿಗೆ ಇಬ್ಬರು ಸಾವನ್ನಪ್ಪಿರುವ ಘಟನೆ ಮತ್ತು ಮೇಕೆ ಕುರಿಗಳು ಸಾವು ಕಂಡಿರುವ ಘಟನೆ ನಡೆದಿದೆ.
ಗುಡುಗು ಸಹಿತ ಭಾರೀ ಮಳೆಯಿಂದ ಕುರಿಗಾಹಿ ಮೇಲೆ ಮರ ಉರುಳಿ ಬಿದ್ದು ಶಿವಲಿಂಗೇಗೌಡ(48) ಮೃತಪಟ್ಟರೆ, ಹಸು, 15ಕ್ಕೂ ಹೆಚ್ಚು ಕುರಿ, 5 ಮೇಕೆ ಸಾವು ಕಂಡಿವೆ. ಈ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದಲ್ಲಿ ನಡೆದಿದೆ.
ಕೋನನಪುರ ಗ್ರಾಮದ ನಿವಾಸಿ ಪುಟ್ಟೇಗೌಡರ ಮಗ ಶಿವಲಿಂಗೇಗೌಡ ಅವರು ಮೇಕೆ ಮೇಯಿಸುತ್ತಿದ್ದಾಗ ಭಾರಿ ಗಾಳಿ ಮಳೆಯಿಂದ ಮರ ಬಿದ್ದು ಸಾವು ಕಂಡಿದ್ದಾರೆ. ಹಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದಲ್ಲದೆ ರಾಜ್ಯದ ರಾಮನಗರ, ರಾಯಚೂರು, ವಿಜಯಪುರ, ಕಲಬುರಗಿ, ಬೀದರ್, ಮಂಡ್ಯ, ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಸಿಡಿಲಿಗೆ ಇಬ್ಬರು ಬಲಿಯಾಗಿರುವ ಘಟನೆ ಜರುಗಿದೆ.
ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಸೋನಾಳ ಗ್ರಾಮದಲ್ಲಿ ಸಿಡಿಲಿಗೆ ಲಹು ಮಾಧವರಾವ ಬೀರ್ಗೆ(36) ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮೆದಕಿನಾಳ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ಬಿದ್ದು ಭೀರಪ್ಪ ಶಿವರಾಜ(2) ಸಾವನ್ನಪ್ಪಿರುವ ಘಟನೆ ಜರುಗಿದೆ. ರಾಜ್ಯದ ಹಲವು ಜಿಲ್ಲೆಯಲ್ಲಿ ಸುರಿದಿರುವ ಅಕಾಲಿಕ ಮಳೆಯಿಂದಾಗಿ ಅಪಾರ ಪ್ರಮಾಣ ಬೆಳೆ ಹಾನಿಯಾಗಿದೆ.