i
4.38 ಕೋಟಿ ರೂ. ವೆಚ್ಚದ ವಿವಿಐಪಿ ಪ್ರವಾಸಿ ಮಂದಿರ ಉದ್ಘಾಟಿಸಿದ ಶಾಸಕ ತಿಪ್ಪಾರೆಡ್ಡಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ಕೇಂದ್ರದಲ್ಲಿ ಹೈಟೆಕ್ ಮಾದರಿಯ ಪ್ರವಾಸಿ ಮಂದಿರ ಉದ್ಘಾಟನೆ ಮಾಡಿದ್ದು ಸಾಕಷ್ಟು ಅನುಕೂಲವಾಗಲಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಿರುವ ವಿವಿಐಪಿ(ಹೈಟೆಕ್) ಪ್ರವಾಸಿ ಮಂದಿರ ಉದ್ಘಾಟಿಸಿ ಶಾಸಕರು ಮಾತನಾಡಿದರು. ಇಲ್ಲಿ ನಿರ್ಮಿಸಿದ ನೂತನ ಪ್ರವಾಸಿ ಮಂದಿರವು ಅಗತ್ಯ ಸೌಲಭ್ಯಗಳನ್ನೊಳಗೊಂಡಿದೆ. ಕರ್ನಾಟಕದ ಮಧ್ಯ ಭಾಗದಲ್ಲಿರುವ ಚಿತ್ರದುರ್ಗಕ್ಕೆ ಬಂದು ಹೋಗುವವರ ಸಂಖ್ಯೆ ಜಾಸ್ತಿ ಇದ್ದು ಈಗ ಇದ್ದ ಪ್ರವಾಸಿ ಮಂದಿರದ ಜಾಗ ಕಿರಿದಾಗಿದ್ದು ಕಡಿಮೆ ಕೊಠಡಿಗಳಿದ್ದವು. ಇದನ್ನ ಮನಗಂಡು ಹೆಚ್ಚುವರಿ ಅದರಲ್ಲೂ ವಿವಿಐಪಿ ಪ್ರವಾಸಿ ಮಂದಿರ ನಿರ್ಮಾಣಕ್ಕಾಗಿ 4.38 ಕೋಟಿ ರೂ.ಗಳಲ್ಲಿ ಅತ್ಯಂತ ಅಚ್ಚುಕಟ್ಟಾಗಿ, ಗುಣಮಟ್ಟದಿಂದ ನಿರ್ಮಾಣ ಮಾಡಲಾಗಿದೆ. 80.62 ಚದುರ ಇರುವ ಈ ಪ್ರವಾಸಿ ಮಂದಿರದ ನೆಲ ಮಹಡಿಗೆ 2.16 ಕೋಟಿಯಲ್ಲಿ ನಿರ್ಮಿಸಲಾಗಿದೆ. ಒಳಾಂಗಣ ಡಿಸೈನ್ ಮತ್ತು ಪಿಠೋಪಕರಣಗಳಿಗಾಗಿ 49.95 ಲಕ್ಷ ರೂ, ಕುಡಿಯುವ ನೀರು ಪೂರೈಕೆಗಾಗಿ ಮತ್ತು ಮೋಟರ್ ಹಾಗೂ ಪಂಪ್ ಸೇರಿದಂತೆ ಇತರೆ ಅಗತ್ಯ ಸೌಲಭ್ಯಕ್ಕಾಗಿ 16.90 ಲಕ್ಷ, ಪ್ರವಾಸಿ ಮಂದರಕ್ಕೆ ಬಂದು ಹೋಗಲು ರಸ್ತೆ ನಿರ್ಮಾಣಕ್ಕಾಗಿ 57.85 ಲಕ್ಷ, ವಿದ್ಯುತ್ ಸಂಪರ್ಕಕ್ಕಾಗಿ 38.61 ಲಕ್ಷ, ಲ್ಯಾಂಡ್ ಸ್ಕೇಪ್ ಮಾಡಲು 7.7 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಈ ಪ್ರವಾಸಿ ಮಂದಿರ ನಿರ್ಮಾಣ ಮಾಡಿರುವ ಶ್ರೀನಿವಾಸ್ ಅವರು ನಿಗದಿತ ಸಮಯಕ್ಕೆ ಗುಣಮಟ್ಟದಿಂದ ಕಟ್ಟಡ ನಿರ್ಮಿಸಿಕೊಟ್ಟಿದ್ದು ಇದರಿಂದ ಪ್ರವಾಸಿಗರಿಗೆ ತುಂಬಾ ಅನುಕೂಲವಾಗಲಿದೆ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.
ಶಿವಮೊಗ್ಗ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಕೆ.ಜಿ.ಜಗದೀಶ್, ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ, ಸಹಾಯಕ ಕಾರ್ಯಪಾಲಕ ಅಭಿಯಂತರ ಜಿ.ಕೃಷ್ಣಪ್ಪ, ಎಇ ಗೋಪಾಲ್, ಪ್ರವಾಸಿ ಮಂದಿರ ನಿರ್ಮಾಣ ಮಾಡಿದ ಪ್ರಥಮ ದರ್ಜೆ ಗುತ್ತಿಗೆದಾರ ಪಿ.ಶ್ರೀನಿವಾಸ್ ಸೇರಿದಂತೆ ಮತ್ತಿತರ ಅಧಿಕಾರಿಗಳು, ಸಿಬ್ಬಂದಿಗಳು ಮುಖ್ಯ ಅತಿಥಿಗಳಾಗಿದ್ದಾರೆ.