i
ಬಡವರಿಗೆ ನಿವೇಶನ ಮತ್ತು ಮನೆಗಳ ಹಕ್ಕು ಪತ್ರ ವಿತರಣೆ ಮಾಡಿರುವುದು ಕ್ರಾಂತಿಕಾರ ತೀರ್ಮಾನ-ಶಾಸಕ ತಿಪ್ಪಾರೆಡ್ಡಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸರ್ಕಾರದಿಂದ ನೀಡುವ ಅನುದಾನ ಬಳಸಿ ನಿವೇಶನ ರಹಿತ ಕುಟುಂಬದವರಿಗೆ ಮನೆ ನಿರ್ಮಿಸಿ ಕೊಡಲಾಗಿದೆ, ಅಲ್ಲದೆ ನಿವೇಶನ ರಹಿತ ಬಡ ಕುಟುಂಬದವರಿಗೂ ನಿವೇಶನ ನೀಡಿದ್ದು ಸರ್ಕಾರದ ಅನುದಾನ ಸೇರಿ ಫಲಾನುಭವಿಗಳು ಸ್ವಲ್ಪ ಶ್ರಮ ವಹಿಸಿ ಉತ್ತಮ ಮನೆ ನಿರ್ಮಿಸಿಕೊಳ್ಳಬೇಕು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜೆ.ಎನ್.ಕೋಟೆ, ಪಲ್ಲವಗೆರೆ, ಟಗನಹಟ್ಟಿ ಮತ್ತು ಸುಡುಗಾಡ ಸಿದ್ದರು ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡ ಜನರಿಗೆ ವಸತಿ ಯೋಜನೆಯಡಿ ನಿವೇಶನ ಮತ್ತು ಮನೆಗಳ ಹಕ್ಕುಪತ್ರ ವಿತರಣೆ ಮಾಡಿ ಅವರು ಮಾತನಾಡಿದರು. ಗ್ರಾಮ ಪಂಚಾಯಿತಿಯಿಂದ ಬಡ ಜನರಿಗೆ ಮನೆ ನಿರ್ಮಿಸಿಕೊಳ್ಳಲು ಸರ್ಕಾರದಿಂದ ಅನುದಾನ ನೀಡಲಾಗುತ್ತದೆ. ಜೊತೆಗೆ ನಿಮ್ಮ ದುಡಿಮೆಯ ಸ್ವಲ್ಪ ಭಾಗ ಸೇರಿಸಿ ಉತ್ತಮವಾದ ಮನೆಗಳನ್ನು ನಿರ್ಮಿಸಿಕೊಳ್ಳಬೇಕೆಂದು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ಪಿಡಿಓಗಳು ಮಾನವಿಯತೆ ಹಾಗೂ ಮನುಷ್ಯತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕು ಬಡ ಜನರಿಗೆ ತೊಂದರೆ ನೀಡಬಾರದು ಎಂದು ಶಾಸಕ ತಿಪ್ಪಾರೆಡ್ಡಿ ಎಚ್ಚರಿಸಿದರು.
ಸರ್ಕಾರಿ ಜಾಗದಲ್ಲೇ ಹತ್ತಾರು ವರ್ಷಗಳಿಂದ ಮನೆ, ಗುಡಿಸಲು ನಿರ್ಮಿಸಿಕೊಂಡಿರುವಂತ ಬಡ ಜನರಿಗೆ ಹಕ್ಕು ಪತ್ರ ನೀಡಲಾಗಿದ್ದು ಇದರ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಶಾಸಕರು ಹೇಳಿದರು.
ಇಡೀ ಕ್ಷೇತ್ರದಲ್ಲಿ ಈಗಾಗಲೇ 4 ಸಾವಿರ ಮನೆಗಳನ್ನು ನೀಡಿದ್ದೇನೆ, ಇನ್ನೂ ಅಗತ್ಯ ಇರುವಷ್ಟು ಮನೆಗಳನ್ನು ನೀಡುತ್ತೇನೆ. ನಿವೇಶನ ಅಥವಾ ಮನೆಗಳಿದ್ದವರು ನನ್ನ ಬಳಿ ಬಂದರೆ ಅವರಿಗೆ ನಿವೇಶನ, ಮನೆ ಒದಗಿಸಲಾಗುತ್ತದೆ ಎಂದು ಶಾಸಕರು ಭರವಸೆ ನೀಡಿದರು.
ಸುಡುಗಾಡು ಸಿದ್ದರಿಗೆ ಮನೆ- ನಗರದ ಹೊರ ವಲಯದ ತಮಟಕಲ್ಲು ರಸ್ತೆಯಲ್ಲಿ ಹತ್ತಾರು ವರ್ಷಗಳಿಂದ ಸುಡುಗಾಡು ಸಿದ್ದರು ಟೆಂಟ್ ನಿರ್ಮಿಸಿಕೊಂಡು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರು. ಅಲ್ಲದೆ ತಮ್ಮ ವೃತ್ತಿಗಾಗಿ ಊರಿಂದ ಊರಿಗೆ ಅಲೆಯುತ್ತಿದ್ದರು. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ನೋಡಿ ಸುಡುಗಾಡು ಸಿದ್ದರಿಗೆ ಶಾಶ್ವತವಾದ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತದೆ. ಇದಕ್ಕಾಗಿ ಅವರಿಗೆ ಹಕ್ಕು ಪತ್ರಗಳನ್ನು ನೀಡುತ್ತಿರುವುದು ನನಗೆ ತುಂಬಾ ಸಂತಸ ಉಂಟು ಮಾಡಿದೆ ಎಂದು ಭಾವುಕರಾಗಿ ಹೇಳಿದರು.
ಸುಡುಗಾಡು ಸಿದ್ದರು ಸೇರಿದಂತೆ ಯಾವುದೇ ಬಡ ಕುಟುಂಬಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು, ಬಡ ಕುಟುಂಬಗಳ ಮಕ್ಕಳು ಕೆಎಎಸ್, ಐಎಎಸ್ ಸೇರಿದಂತೆ ಉನ್ನತ ಮಟ್ಟದ ಶಿಕ್ಷಣವನ್ನು ಪಡೆಯಬೇಕು ಎಂದು ತಿಪ್ಪಾರೆಡ್ಡಿ ಅವರು ಕಿವಿ ಮಾತು ಹೇಳಿದರು.
ಪಲ್ಲವಗೆರೆ 62, ಟಗರನಹಟ್ಟಿ 41 ಮತ್ತು ಸುಡುಗಾಡು ಸಿದ್ದರಿಗೆ 44 ಹಕ್ಕು ಪತ್ರಗಳನ್ನು ನೀಡಲಾಗಿದ್ದು ಇನ್ನೂ ಯಾರನ್ನಾದರೂ ಕೈ ಬಿಟ್ಟಿದ್ದರೆ ಆತಂಕ ಪಡುವ ಅಗತ್ಯವಿಲ್ಲ, ತಹಶೀಲ್ದಾರ್ ಮತ್ತು ನಾನು ಸೇರಿ ಉಳಿದರಿಗೆ ಹಕ್ಕು ಪತ್ರ ನೀಡುವ ಕೆಲಸ ಮಾಡುವುದಾಗಿ ಶಾಸಕ ತಿಪ್ಪಾರೆಡ್ಡಿ ಅವರು ಭರವಸೆ ನೀಡಿದರು.
ದೀನ ದಯಾಳ್ ಬೆಳಕು ಯೋಜನೆ ಅಡಿ ಎಲ್ಲ ಬಡವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ತಹಶೀಲ್ದಾರ್ ನಾಗವೇಣಿ, ತಾಪಂ ಇಒ ಹನುಮಂತಪ್ಪ ಸೇರಿದಂತೆ ವಿವಿಧ ಗ್ರಾಪಂಗಳ ಪಿಡಿಓ, ಅಧ್ಯಕ್ಷರು, ಸದಸ್ಯರುಗಳು, ಗ್ರಾಮಸ್ಥರು ಇದ್ದರು.