i
ಮನೆ, ಮನೆಗೆ ತೆರಳಿ ಮತಯಾಚಿಸಿದ ಶಾಸಕ ಟಿ.ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ವಿಧಾನಸಭಾ ಚುನಾವಣೆಯ ಕಾವು ನಿಧಾನಗತಿಯಲ್ಲಿ ಏರುತ್ತಿದ್ದು, ಅಭ್ಯರ್ಥಿಯಾಗಿ ಸ್ಪರ್ಧಿಸಿದವರು ಮತದಾರರ ಬಳಿ ತೆರಳಿ ಮತಯಾಚಿಸುವರಲ್ಲದೆ, ದೇವರಿಗೂ ಸಹ ಮೊರೆ ಹೋಗುತ್ತಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂಬ ಛಲ ಮತ್ತು ಬಲ ಅಭ್ಯರ್ಥಿಗಳಲ್ಲಿದ್ದು, ಅವುಗಳನ್ನು ಸಮಯೋಚಿತವಾಗಿ ಉಪಯೋಗಿಸುವಲ್ಲಿ ಅವರು ಹೆಚ್ಚು ಜಾಗ್ರತೆ ವಹಿಸಿದ್ದಾರೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ರಘುಮೂರ್ತಿ ಈಗಾಗಲೇ ೨೦೧೩ ಹಾಗೂ ೨೦೧೮ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ೨೦೨೩ರ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಇದಕ್ಕೆ ಪೂರಕವಾಗುವಂತೆ ಟಿ.ರಘುಮೂರ್ತಿಯವರು ಗೆಲುವು ಸಾಧಿಸಬೇಕೆಂದು ದೇವರಲ್ಲಿ ಪಾದಯಾತ್ರೆ ಮೂಲಕ ಗ್ರಾಮಸ್ಥರು ಮೊರೆ ಹೋದ ಘಟನೆ ನಡೆದಿದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತುರುವನೂರು ಹೋಬಳಿಯ ಬೊಮ್ಮಕ್ಕನಹಳ್ಳಿ ಗ್ರಾಮದ ಯುವಕರು, ಮಹಿಳೆಯರು, ಗ್ರಾಮಸ್ಥರು ಹಾಗೂ ರಘುಮೂರ್ತಿಯವರ ಅಭಿಮಾನಿಗಳು ಗ್ರಾಮದಿಂದ ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಸೋಮವಾರ ಬೆಳಗ್ಗೆ ಗ್ರಾಮದಿಂದ ಹೊರಟು ಪಾದಯಾತ್ರೆ ನಡೆಸಿ ಮಧ್ಯಾಹ್ನ ದೇವಸ್ಥಾನಕ್ಕೆ ಆಗಮಿಸಿ ಶಾಸಕ ಟಿ.ರಘುಮೂರ್ತಿಯವರ ಗೆಲುವಿಗಾಗಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಶಾಸಕ ಟಿ.ರಘುಮೂರ್ತಿ ತಮ್ಮ ಗೆಲುವಿಗೆ ದೇವರ ಮೊರೆ ಹೋದ ಗ್ರಾಮಸ್ಥರ ಹೃದಯ ವೈಶ್ಯಾಲತೆಯನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬೋರಯ್ಯ, ಮೈಲಾರಪ್ಪ, ಮಹಂತೇಶ್, ಮೂರ್ತಿ, ವೆಂಕಟೇಶ್, ಉಮೇಶ್, ರವಿ, ಜಯಕುಮಾರ್, ಚಂದ್ರಶೇಖರ್, ಬೀರಲಿಂಗಪ್ಪ, ಮಂಜುನಾಥ, ವೀರೇಶ್, ನಾಗೇಶ್, ಶಿವಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ರಂಗಸ್ವಾಮಿ, ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಮುಂತಾದವರು ಉಪಸ್ಥಿತರಿದ್ದರು.
ನಗರದಲ್ಲಿ ಶಾಸಕರ ಬಿರುಸಿನ ಪ್ರಚಾರ: ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ರಘುಮೂರ್ತಿ, ೧೩,೧೪,೧೫,೧೬,೧೭ ಮತ್ತು ೧೮ ವಾರ್ಡ್ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ೧೩ನೇ ವಾರ್ಡ್ನಿಂದ ಆರಂಭವಾದ ಪ್ರಚಾರ ಕಾರ್ಯ ಸಂಜೆವರೆಗೂ ನಡೆಯಿತು. ಮನೆ, ಮನೆಗೂ ತೆರಳಿ ಮತಯಾಚಿಸಿದ ಶಾಸಕ ಟಿ.ರಘುಮೂರ್ತಿ, ೧೦ ವರ್ಷಗಳ ಸೇವೆಯ ಬಗ್ಗೆ ತಮಗೆ ಮಾಹಿತಿ ಇದ್ದು ಕ್ಷೇತ್ರದ ಅಭಿವೃದ್ದಿ ದೃಷ್ಠಿಯಿಂದ ಮತ್ತೊಮ್ಮೆ ಮತದಾನದ ಮೂಲಕ ನನ್ನನ್ನು ಬೆಂಲಿ ಎಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷೆ ಸುಮಕ್ಕ, ಸದಸ್ಯರಾದ ಕೆ.ವೀರಭದ್ರಪ್ಪ, ಸುಮಭರಮಣ್ಣ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾನಂದಿನಿ ಗೌಡ, ಎಂ.ಚೇತನ್ಕುಮಾರ್, ಭದ್ರಿ, ಎನ್.ಮಂಜುನಾಥ, ಸರಸ್ವತಿ, ಗೀತಾಬಾಯಿ, ಜೈತುಂಬಿ, ಎಸ್.ಎಚ್.ಸೈಯದ್, ಸೈಪುಲ್ಲಾ, ಶೇಖರಪ್ಪ, ಹಾಯ್ಕಲ್ ಪ್ರಕಾಶ್, ಟಿ.ರವಿಕುಮಾರ್, ಲಕ್ಷ್ಮಿದೇವಿ, ಅನ್ವರ್ ಮಾಸ್ಟರ್ ಮುಂತಾದವರು ಪಾಲ್ಗೊಂಡಿದ್ದರು.