i
ಇಂಜಿನಿಯರ್ ಎಇಇ ಮನೆ ಮೇಲೆ ಲೋಕಾಯುಕ್ತರು ದಾಳಿ, 30 ಲಕ್ಷ ಹಣ ಅಪಾರ ಪ್ರಮಾಣದ ದಾಖಲೆ ವಶ…
ಚಂದ್ರವಳ್ಳಿ ನ್ಯೂಸ್, ಮುದ್ದೇಬಿಹಾಳ: lokayukta raid
ಲಂಚ ನೀಡಲು ಇಷ್ಟವಿಲ್ಲದ ವ್ಯಕ್ತಿಯೊಬ್ಬರು ನೀಡಿದ ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ಇಂಜಿನಿಯರ್ ಮನೆ ಮೇಲೆ ದಾಳಿ ಮಾಡಿದಾಗ ಅವರ ಮನೆಯಲ್ಲಿ ₹30 ಲಕ್ಷ ನಗದು ಮತ್ತು ಅಪಾರ ಪ್ರಮಾಣದ ಚಿನ್ನಾಭರಣ ಲಭಿಸಿದ್ದು ಇನ್ನೂ ಹೆಚ್ಚಿನ ಪರಿಶೀಲನೆ ಮಾಡಲಾಗುತ್ತಿದೆ.
ಈ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಬಡಾವಣೆಯಲ್ಲಿ ಜರುಗಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಎಇಇ ಜೆ. ಪಿ. ಶೆಟ್ಟಿ ಅವರ ಮನೆ ಹಾಗೂ ಕಚೇರಿ ಮೇಲೆ ವಿಜಯಪುರ ಜಿಲ್ಲಾ ಲೋಕಾಯುಕ್ತ ಎಸ್.ಪಿ ಅನಿತಾ ಹದ್ದಣ್ಣನವರ, ಸಿಪಿಐ ಆನಂದ ಠಕ್ಕಣ್ಣನವರ ಹಾಗೂ ಇತರೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.
ತಾಲ್ಲೂಕಿನ ಕ್ಯಾತನಢೋಣಿ ಹಾಗೂ ಬೂದಿಹಾಳ ಗ್ರಾಮದ ಕುಡಿಯುವ ನೀರು ಸರಬರಾಜು ಗುತ್ತಿಗೆ ಕಾಮಗಾರಿಯಲ್ಲಿ ಗುತ್ತಿಗೆದಾರಗೆ 60 ಸಾವಿರ ಬೇಡಿಕೆ ಇಟ್ಟಿದ್ದರು. ಈ ಪೈಕಿ ಮುಂಗಡವಾಗಿ ಗುತ್ತಿಗೆದಾರರಿಂದ 30 ಸಾವಿರ ತೆಗೆದುಕೊಂಡು, ಬಾಕಿ 30 ಸಾವಿರ ಹಣ ಕೊಟ್ಟರೆ ಮಾತ್ರ ಬಿಲ್ ಮಾಡುವುದಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ ಉಳಿದ 30 ಸಾವಿರಕ್ಕೆ ಬೇಸತ್ತಿದ್ದ ಗುತ್ತಿಗೆದಾರ ಲೋಕಾಯುಕ್ತ ದೂರು ನೀಡಿದ್ದರು.