i
ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ್ದೇನೆ, ನಮ್ಮ ನಿಮ್ಮ ಸಂಬಂಧ ರಾಜಕೀಯ ಮೀರಿದ್ದು–ಸಿಎಂ…
ಚಂದ್ರವಳ್ಳಿ ನ್ಯೂಸ್, ಶಿಗ್ಗಾಂವಿ:
ನನಗೆ ಶಿಗ್ಗಾಂವಿ ಜನತೆ ಮೂರು ಬಾರಿ ಸತತವಾಗಿ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಆಶೀರ್ವಾದದಿಂದ ಶಾಸಕನಾಗಿ, ಮಂತ್ರಿಯಾಗಿ, ಸಿಎಂ ಆಗಿದ್ದೇನೆ. ನನ್ನ ಅಧಿಕಾರವನ್ನು ಗುಲಗುಂಜಿಯಷ್ಟೂ ಸ್ವಂತಕ್ಕೆ ಬಳಸಿಕೊಂಡಿಲ್ಲ. ಈ ಕ್ಷೇತ್ರದ, ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಮುಂದೆಯೂ ಅದನ್ನು ಮುಂದುವರೆಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಅವರು ತಮ್ಮ ಸ್ವಕ್ಷೇತ್ರ ಶಿಗ್ಗಾಂವಿಯ ಕುನ್ನೂರು, ಧುಂಡಸಿ, ಹೊಸೂರ, ಎತ್ತಿನಹಳ್ಳಿ, ಕೋಣನಕೇರಿ, ಅಂದಲಗಿ, ಬೊಮ್ಮನಹಳ್ಳಿ, ಹೋತನಹಳ್ಳಿ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿ ಮಾತನಾಡಿದರು.
ಇಡೀ ಕ್ಷೇತ್ರದಲ್ಲಿ ಎಲ್ಲ ಸಮುದಾಯಗಳು ಅತ್ಯಂತ ಪ್ರೀತಿ ವಿಶ್ವಾಸದಿಂದ ಇದ್ದಾರೆ. ಈ ಸಾಮರಸ್ಯ ನಿರಂತರವಾಗಿ ಮುಂದುವರೆಸಿಕೊಂಡು ಹೋಗಬೇಕು. ಈ ಚುನಾವಣೆಗೆ ನಿಮ್ಮೆಲ್ಲರ ಅಭೂತಪೂರ್ವ ಬೆಂಬಲ ಸಿಕ್ಕಿರುವುದಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಚುನಾವಣೆಯಲ್ಲಿ ಅಭಿವೃದ್ಧಿಗೆ ಮತ ಹಾಕಿ. ನಮ್ಮ ನಿಮ್ಮ ಸಂಬಂಧ ರಾಜಕೀಯವನ್ನೂ ಮೀರಿದ ಸಂಬಂಧ. ನಿಮ್ಮ ಪ್ರೀತಿ ವಿಶ್ವಾಸದಲ್ಲಿ ಕೆಲಸ ಮಾಡಿ ಎಲ್ಲರೂ ಮತ ಹಾಕಿದರೆ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಿ ನಿಮ್ಮ ಸೇವೆಯನ್ನು ನಿರಂತರವಾಗಿ ಮಾಡುತ್ತೇನೆ. ನಾನು ರಾಜ್ಯಕ್ಕೆ ಸಿಎಂ ಆಗಿದ್ದರೂ, ಇಲ್ಲಿ ಮಾತ್ರ ನಿಮ್ಮ ಬಸವರಾಜ ಬೊಮ್ಮಾಯಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಗುಲಗಂಜಿಯಷ್ಟೂ ದಕ್ಕೆಯೂ ಆಗದಂತೆ ನಡೆದುಕೊಳ್ತೀನಿ-ನಿಮ್ಮ ವಿಶ್ವಾಸಕ್ಕೆ ನಾನು ಧಕ್ಕೆ ಆಗದಂತೆ ನೀವು ಅಭಿಮಾನ ಪಡುವಂತೆ, ಒಂದು ಸಣ್ಣ ಕಪ್ಪು ಚುಕ್ಕೆ ಇಲ್ಲದಂತೆ ನಾನು ರಾಜ್ಯದಲ್ಲಿ ನ್ಯಾಯ ಸಮ್ಮತ ಆಡಳಿತ ಮಾಡಿದ್ದೇನೆ. ಈ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ರಾಜ್ಯದಲ್ಲಿ ಬಿಜೆಪಿ ಅಲೆ ಇದೆ. ಪ್ರಧಾನಿಯವರು ರಾಜ್ಯಕ್ಕೆ ಬಂದ ಮೇಲೆ ಇನ್ನಷ್ಟು ಹೆಚ್ಚಿನ ಬೆಂಬಲ ದೊರೆಯಲಿದೆ. ನೀವು ನನ್ನನ್ನು ದೊಡ್ಡ ಪ್ರಮಾಣದಲ್ಲಿ ಆಯ್ಕೆ ಮಾಡಿದರೆ ನನ್ನನ್ನು ಪಕ್ಷ ಸಿಎಂ ಮಾಡಿದ್ದಕ್ಕೂ ಸಾರ್ಥಕ ಆಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಿಮ್ಮ ಸೇವೆ ಮಾಡಲು ಅವಕಾಶ ಕೊಟ್ಟಿದ್ದೀರಿ-ನೀವು ನಾಡಿನ ಸೇವೆ ಮಾಡುವ ಅವಕಾಶ ಕೊಟ್ಟಿದ್ದೀರಿ. ನಾನು ಸಿಎಂ ಆಗಿ ರೈತರ ಮಕ್ಕಳು ಶಿಕ್ಷಿತರಾಗಲು ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದೇನೆ. ಕೂಲಿ ಕಾರ್ಮಿಕರ ಮಕ್ಕಳಿಗೂ ಈ ಯೋಜನೆ ಜಾರಿಗೆ ತಂದಿದ್ಧೇವೆ. ರೈತರಿಗೆ ಯಶಸ್ವಿನಿ ಯೋಜನೆ ಮರು ಜಾರಿಗೆ ತಂದಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆ ರಾಜ್ಯದ 54 ಲಕ್ಷ ರೈತರಿಗೆ ನೇರವಾಗಿ ಡಿಬಿಟಿ ಮೂಲಕ ಸಹಾಯಧನ ನೀಡಲಾಗಿದೆ. ಪ್ರವಾಹದಿಂದ ಮನೆ ಕಳೆದುಕೊಂಡವರ ತಾಲ್ಲೂಕಿನ 6000 ಮನೆಗಳಿಗೆ ಪರಿಹಾರ ನೀಡಲಾಗಿದೆ. ದಾಖಲೆ ಪ್ರಮಾಣದಲ್ಲಿ ಬೆಳೆ ವಿಮಾ ಪರಿಹಾರ ಬಂದಿದೆ. ನನ್ನ ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದೇವೆ. ನನ್ನ ಕ್ಷೇತ್ರದ 15 ಪಿಯುಸಿ ಕಾಲೇಜು ಮಂಜೂರಾಗಿದೆ. ಎಲ್ಲ ಸಮುದಾಯಗಳಿಗೆ ಸಮುದಾಯ ಭವನ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದ್ದೇವೆ ಇನ್ನು ಏಳೆಂಟು ತಿಂಗಳಲ್ಲಿ ಧುಂಡಸಿಯಲ್ಲಿ ಮನೆ ಮನೆಗೆ ಗಂಗೆ ಯೋಜನೆ ಜಾರಿಗೊಳಿಸಲಾಗುವುದು. ನಾನು ಯಾರಿಗೂ ಬೇಧ-ಭಾವ ಮಾಡಿಲ್ಲ-ನೀವು ಪ್ರತಿಯೊಬ್ಬರೂ ಬಸವರಾಜ ಬೊಮ್ಮಾಯಿ ಎಂದು ತಿಳಿದುಕೊಂಡು ನನ್ನ ಪರವಾಗಿ ಮನೆಮನೆಗೆ ತೆರಳಿ ಪ್ರಚಾರ ಮಾಡಿ. ಎಲ್ಲ ಸಮುದಾಯಗಳಿಗೆ ಯಾವುದೇ ಬೇಧ ಭಾವ ಮಾಡದೇ ಅಮಗ್ರ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಕಾಂಗ್ರೆಸ್ ಸರ್ಕಾರ ಬಂದಿದ್ದರೆ ಇಷ್ಟೊಂದು ಅಭಿವೃದ್ಧಿ ಆಗುತ್ತಿರಲಿಲ್ಲ. ಅವರು ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚಿ ಹೊಟ್ಟೆ ಬೇಯಿಸಿಕೊಂಡು ಹೋಗ್ತಿದ್ರು. ಅವರು ಚುನಾವಣೆಗಾಗಿ ಮಾತ್ರ ಗ್ಯಾರೆಂಟಿ ಕಾರ್ಡ್ ಕೊಡುತ್ತಾರೆ. ಆಮೇಲೆ ಅದು ಗಳಗಂಟಿಯಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಅಭಿವೃದ್ಧಿ ನಿರಂತರವಾಗಿರುತ್ತದೆ-ನಾನು ಶಾಸಕನಾಗಿ, ಸಚಿವನಾಗಿ, ಮುಖ್ಯಮಂತ್ರಿಯಾಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಇನ್ನೂ ಅಭಿವೃದ್ಧಿ ಮಾಡುತ್ತೇನೆ. ನಾನು ವಿರೋಧ ಪಕ್ಷದ ಅಭ್ಯರ್ಥಿಗಳ ಬಗ್ಗೆ ಮಾತನಾಡುವುದಿಲ್ಲ. ನಾನು ಮಾಡಿರುವ ಕೆಲಸವನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇವೆ. ಕಾಂಗ್ರೆಸ್ ನವರು ಸುಳ್ಳು ಗ್ಯಾರಂಟಿ ಕೊಡುತ್ತಿದ್ದಾರೆ. ಮೋದಿ ಕೊಡುವ ಅಕ್ಕಿಗೆ ತಮ್ಮ ಫೋಟೊ ಹಾಕೊಂಡು ಪ್ರಚಾರ ತೆಗೆದುಕೊಂಡರು. 30 ವರ್ಷಗಳ ಬೇಡಿಕೆಯಿದ್ದ ಮಿಸಲಾತಿ ಹೆಚ್ಚಳ ನಾನು ಮಾಡಿದೆ. ಕಾಂಗ್ರೆಸ್ ನವರು ಅಧಿಕಾರದಲ್ಲಿ ಇದ್ದಾಗ ಏನೂ ಮಾಡದೇ ಈಗ ಶೇ 75% ಮೀಸಲಾತಿ ಹೆಚ್ಚಳ ಮಾಡುವ ಭರವಸೆ ನೀಡುತ್ತಿದ್ದಾರೆ. ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ದು ಒಡೆದು ಆಳುವ ನೀತಿ-ವಿರೋಧ ಪಕ್ಷದ ಅಭ್ಯರ್ಥಿಗಳು ನನ್ನ ಬಗ್ಗೆ ಕೆಟ್ಟ ಭಾಷೆ ಬಳಸುತ್ತಿದ್ದಾರೆ. ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಅವರಿಗೆ ಜನರೇ ಉತ್ತರ ಕೊಡುತ್ತಾರೆ. ಕಾಂಗ್ರೆಸ್ ನವರು ಈಗಾಗಲೇ ಅವನತಿ ಹೊಂದುತ್ತಿದ್ದಾರೆ. ಈಗಲೂ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಜಾತಿ ಸಮೀಕ್ಷೆ ಮಾಡಿ ಮೀಸಲಾತಿ 75% ಹೆಚ್ಚಲ ಮಾಡುತ್ತೇವೆ ಅಂತಿದ್ದಾರೆ ಸಿದ್ದರಾಮಯ್ಯ. ಅವರ ಕಾಲದಲ್ಲೇ 150 ಕೋಟಿ ವೆಚ್ಚ ಮಾಡಿ ಜಾತಿ ಸಮೀಕ್ಷೆ ಮಾಡಿದ್ದರು. ಎಲ್ಲ ಜಾತಿಯಲ್ಲೂ 50-60 ಉಪ ಜಾತಿಗಳಿವೆ ಅಂತ ವರದಿ ಕೊಟ್ಡಿದ್ದಾರೆ. ಮುಸ್ಲಿಮರಲ್ಲಿ 54 ಉಪ ಜಾತಿಗಳಿವೆ ಅಂತ ಹೇಳಿದ್ದಾರೆ. ಎಲ್ಲ ಸಮುದಾಯವನ್ನೂ ಒಡೆದು ಹಾಳುಮಾಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ನವರು ಹತಾಶರಾಗಿದ್ದಾರೆ-ಅವರ ಕಾಲ ಕೆಳಗಿದ್ದ ಎಸ್ಸಿಎಸ್ಟಿ ಮತಬ್ಯಾಂಕ್ ಸರಿದು ಹೋಗಿದೆ. ದಲಿತರು ಈ ಬಾರಿ ಕಾಂಗ್ರೆಸ್ ಗೆ ಕೈಕೊಡುತ್ತಾರೆ ಅನ್ನುವ ಆತಂಕ ಅವರಿಗೆ ಶುರುವಾಗಿದೆ. ಸಿದ್ದರಾಮಯ್ಯ ಅವರು ಈಗ ಲಿಂಗಾಯತರೆಲ್ಲ ಭ್ರಷ್ಟರು ಅಂತ ಹೇಳುತ್ತಿದ್ದಾರೆ. ಆ ಮೇಲೆ ನನ್ನ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದರು. ಅದಕ್ಕೆ ದಾಖಲೆ ಕೊಡಿ ಎಂದು ಕೇಳಿದೆ. ಈಗ ಖರ್ಗೆ ಪ್ರಧಾನಿ ಮೋದಿ ವಿಷದ ಸರ್ಪ ಅಂತ ಹೇಳಿದ್ದಾರೆ. ಕಾಂಗ್ರೆಸ್ ನವರು ಹತಾಶರಾಗಿ ಮಾತನಾಡುತ್ತಿದ್ದಾರೆ. ಅವರು ಅಧಿಕಾರದ ಅಮಲಿನಲ್ಲಿ ಏನೇನೋ ಮಾತನಾಡುತ್ತಾರೆ ಅವರಿಗೆ ಜನರೇ ಪಾಠ ಕಲಿಸುತ್ತಾರೆ. ಆದರೆ ನಮಗೇ ಅಭಿವೃದ್ಧಿಯೇ ಮುಖ್ಯ ಎಂದು ಸಿಎಂ ಬೊಮ್ಮಾಯಿ ಹೇಳಿದರು.