i
ಜೆಡಿಎಸ್ ಗೆಲ್ಲಿಸಿ, ಎಕರೆಗೆ 10 ಸಾವಿರ, ವೃದ್ಧರಿಗೆ 5 ಸಾವಿರ ಪಿಂಚಿಣಿ ಸೇರಿ ಹಲವು ಸೌಲಭ್ಯ ನೀಡುವೆ- ಮಾಜಿ ಸಿಎಂ ಕುಮಾರಸ್ವಾಮಿ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬಡವರ, ರೈತರ ಪಕ್ಷವಾದ ಜೆಡಿಎಸ್ ಪಕ್ಷ ಗೆಲ್ಲಿಸಿದರೆ ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆ ಜಮೀನಿಗೆ 10 ಸಾವಿರ, ವಯೋವೃದ್ಧರಿಗೆ 5 ಸಾವಿರ ಪಿಂಚಿಣಿ, ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡುತ್ತೇನೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ನೆಹರು ಮೈದಾನದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪಂಚರತ್ನ ಸಮಾರಂಭದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪನವರ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಗೆ ಎಕರೆಗೆ ವರ್ಷಕ್ಕೆ ೧೦ ಸಾವಿರ, ಸ್ತ್ರೀಶಕ್ತಿ ಸಾಲ ಮನ್ನಾ ಮಾಡಲಾಗುವುದು, ಪಂಚಾಯಿತಿಗೊಂದು ಹೈಟೆಕ್ ಆಸ್ಪತ್ರೆ, ತಿಂಗಳಿಗೆ ೫ ಸಾವಿರ ವೃದ್ಧಾಪ್ಯ ವೇತನ, ಪಂಚಾಯಿತಿಗೆ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮಗಳ ಹೈಟೆಕ್ ಶಾಲೆ, ಕೃಷಿ ಭೂಮಿ ಇಲ್ಲದ ಕೃಷಿ ಕಾರ್ಮಿಕರಿಗೆ ತಿಂಗಳಿಗೆ ೨ ಸಾವಿರ ಗೌರವಧನ, ತಿಂಗಳಿಗೆ ೨೫೦೦ ವಿಧವಾ ವೇತನ, ರೈತನನ್ನು ಮದುವೆಯಾಗುವ ಹೆಣ್ಣಿಗೆ ೨ ಲಕ್ಷ ರೂಗಳ ಕೊಡುಗೆ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನೀರಾವರಿ ಇಂಜಿನಿಯರ್ ಆಗಿ ಹಲವಾರು ಚೆಕ್ ಡ್ಯಾಂ ಹಾಗೂ ಕಾಲುವೆಗಳ ನಿರ್ಮಾಣ ಮಾಡುತ್ತಾ ರೈತರ ಹಿತಕ್ಕಾಗಿ ಕೆಲಸ ಮಾಡಿದ ಸ್ಥಳೀಯರಾದ ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪನವರಿಗೆ ತಾಲ್ಲೂಕಿನ ಜನತೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ, ರಾಜ್ಯದಲ್ಲಿ ಜನಪರ, ರೈತಪರ ಸರ್ಕಾರ ರಚಿಸಲು ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸರ್ವಜನಾಂಗದ ಶಾಂತಿಯ ತೋಟವಾದ ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜಾತಿಯ ಹೆಸರಿನಲ್ಲಿ ಒಡೆದು ಆಳುವ ಮೂಲಕ ರಾಜ್ಯದ ಜನರ ಒಗ್ಗಟ್ಟನ್ನು ನಾಶ ಮಾಡಿ, ಅತ್ಯಂತ ಕೀಳುಮಟ್ಟದ ರಾಜಕಾರಣ ಮಾಡುತ್ತಿವೆ, ಇಂತಹ ಪಕ್ಷಗಳ ದುರಾಡಳಿತ ಕೊನೆಗೊಳ್ಳಬೇಕಾದರೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
೨೦೦೬ ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ದಿವಂಗತ ಕೆ.ಸಿ.ರೆಡ್ಡಿ ನೇತೃತ್ವದಲ್ಲಿ ಚಿತ್ರದುರ್ಗ ಹಾಗೂ ತುಮಕೂರು ಜನತೆಗೆ ನೀರು ಒದಗಿಸುವ ಉದ್ದೇಶದಿಂದ ಅಪ್ಪರ್ ಭದ್ರಾ ಯೋಜನೆ ಮಾಡಿದ್ದೇ ನಾನು, ೪ ವರ್ಷದೊಳಗೆ ಪೂರ್ಣಗೊಳ್ಳಬೇಕಾದ ಈ ಯೋಜನೆಗೆ ೧೨-೧೩ ವರ್ಷಗಳು ಹಾಗೂ ೨೧ ಸಾವಿರ ಕೋಟಿ ರೂ. ಹಣ ಬೇಕಿದೆ ಎನ್ನುವ ಕಾರಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ, ಒಪ್ಪಿಗೆಗಾಗಿ ಕಾಯುತ್ತಿದ್ದೆವು, ಆದರೆ ಬಿಜೆಪಿ ಸರ್ಕಾರದ ಯಡಿಯೂರಪ್ಪನವರು ಈ ಯೋಜನೆಯ ಲಾಭವನ್ನು ಪಡೆದುಕೊಂಡರು ಎಂದು ತಿಳಿಸಿದರು.
ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ಮಾತನಾಡಿ, ಈ ತಾಲ್ಲೂಕಿಗೆ ಬೇರೆ ಬೇರೆ ಸ್ಥಳಗಳಿಂದ ವಲಸೆ ಬಂದಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಮಾತುಗಳಿಗೆ ಮಾರುಹೋಗದೇ ಸ್ಥಳೀಯ ಅಭ್ಯರ್ಥಿಯಾದ ನನಗೆ ನಿಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮಾಡಲು ಸಹಕರಿಸುವ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಹತ್ತು ವರ್ಷಗಳ ಕಾಲ ಸುಧಾಕರ್, 5 ವರ್ಷಗಳ ಕಾಲ ಬಿಜೆಪಿ ಪೂರ್ಣಿಮಾ ಅವರು ಕೆಲಸ ಮಾಡಿದ್ದಾರೆ. ಒಮ್ಮೆ ಜೆಡಿಎಸ್ ಪಕ್ಷಕ್ಕೂ ಮತ ಹಾಕಿ ಗೆಲ್ಲಿಸಿದರೆ ಸಮಗ್ರ ಅಭಿವೃದ್ಧಿ ಮಾಡುವೆ ಎಂದು ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಟಿ.ಎ.ಶರವಣ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ ಜಯಣ್ಣ, ಜಿಲ್ಲಾ ಜೆಡಿಎಸ್ ಮುಖಂಡರುಗಳಾದ ಕಂದಿಕೆರೆ ಯಶೋಧರ, ಶಿವಪ್ರಸಾದ ಗೌಡ, ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಮಸ್ಕಲ್ ಹನುಮಂತರಾಯಪ್ಪ, ಎಂಎಲ್ ಸಿ ತಿಪ್ಪೇಸ್ವಾಮಿ ಸೇರಿದಂತೆ ಜೆಡಿಎಸ್ ಮುಖಂಡರು ಹಾಗೂ ಅಸಂಖ್ಯಾತ ಕಾರ್ಯಕರ್ತರು ಮತ್ತು ರವೀಂದ್ರಪ್ಪನವರ ಅಭಿಮಾನಿಗಳು ಉಪಸ್ಥಿತರಿದ್ದರು.