i
ಐಟಿ ರೈಡ್, ಬಿಜೆಪಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡಿದ ಪಿಟ್ಲಾಲಿ ಗ್ರಾಮಸ್ಥರು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪನವರ ಮನೆ ಮೇಲೆ ಪದೇ ಪದೇ ಐಟಿ ರೈಡ್ ಮಾಡಿಸುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿ ವಿರುದ್ಧ ಹಿರಿಯೂರು ತಾಲೂಕಿನ ಪಿಟ್ಲಾಲಿ ಗ್ರಾಮಸ್ಥರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತ ಪಡಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡು ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷ ಜೆಡಿಎಸ್ ಸೋಲಿಸಲು ಷಡ್ಯಂತ್ರ ಮಾಡಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳಿಬ್ಬರು ಸತ್ಯಹರಿಶ್ಚಂದ್ರರೇ, ಇವರ ಬಳಿ ಅಕ್ರಮ ಆಸ್ತಿ ಇಲ್ಲವೇ, ಇವರಿಬ್ಬರಿಗೂ ಸೋಲಿನ ಭೀತಿ ಕಾಡುತ್ತಿದ್ದು ಹಾಗಾಗಿ ಮಾವ ಮಾರ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪನವರ ಗೆಲುವು ತಡೆಯಲು ಕುತಂತ್ರ ಮಾಡಿದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಒಂದು ರೂ.ಕಮಿಷನ್ ಅಥವಾ ಲಂಚ ಪಡೆದಿಲ್ಲ, ನಾವು ಪರಿಶುದ್ಧರು, ನಮ್ಮಲ್ಲಿ ಯಾವುದೇ ಅಕ್ರಮ ಆಸ್ತಿ ಇಲ್ಲ, ನಾವು ಭ್ರಷ್ಟರಲ್ಲ ಎಂದು ಧರ್ಮಸ್ಥಳ ಮಂಜುನಾಥ ಸ್ವಾಮಿ ಬಳಿ ಪ್ರಮಾಣ ಮಾಡಲಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಿಜೆಪಿ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿದೆ. ಮುಖ್ಯಮಂತ್ರಿ, ಪ್ರಧಾನಮಂತ್ರಿಗಳ ಮೇಲೆ ಒತ್ತಡ ಹೇರಿ ಸ್ಥಳೀಯ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಅವರು ಐಟಿ ರೈಡ್ ಮಾಡಿಸಿರುವುದು ಎಷ್ಟು ಸರಿ, ಮತದಾರರೇ ಇದಕ್ಕೆ ಉತ್ತರ ನೀಡಲಿದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪಿಟ್ಲಾಲಿ ಗ್ರಾಮದ ಹೆಚ್.ಶಿವರಾಂ, ದಲಿತ ಮುಖಂಡ ಕರಿಯಪ್ಪ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.