i
ಕೋಟೆ ನಾಡು ಕಾಂಗ್ರೆಸ್ ವಶ, 6ರಲ್ಲಿ 5 ಕಾಂಗ್ರೆಸ್, 1 ಬಿಜೆಪಿ ಮುನ್ನಡೆ, ದಳ ಧೂಳೀಪಟ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಅಂತಿಮ ಹಂತಕ್ಕೆ ಬಂದಿದ್ದು ಬಹುತೇಕ ಕಾಂಗ್ರೆಸ್ ಪಕ್ಷ 5 ರಲ್ಲಿ ಬಿಜೆಪಿ 1ರಲ್ಲಿ ಮುನ್ನಡೆ ಸಾಧಿಸಿದೆ. ಕೋಟೆ ನಾಡಿನಲ್ಲಿ ಕನಿಷ್ಠ 2 ಕ್ಷೇತ್ರದಲ್ಲಾದರೂ ಗೆಲ್ಲುವ ವಿಶ್ವಾಸ ಹೊಂದಿದ್ದ ಜೆಡಿಎಸ್ ಪಕ್ಷ ಧೂಳೀಪಟವಾಗಿದೆ.
ಈಗಾಗಲೇ 17ನೇ ಸುತ್ತಿನ ತನಕ ಮತ ಎಣಿಕೆ ಪೂರ್ಣಗೊಂಡಿದ್ದು ಇನ್ನೇನು ಫಲಿತಾಂಶ ಪ್ರಕಟ ಮಾತ್ರ ಬಾಕಿ ಇದೆ.
ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ಹೊಸದುರ್ಗ ಹಾಗೂ ಹಿರಿಯೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವಿನತ್ತ ಮುಖ ಮಾಡಿದ್ದು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹೆಚ್.ಆಂಜನೇಯ ಹಿನ್ನಡೆಯಾಗಿದೆ. ಅಲ್ಲಿ ಭಾರತೀಯ ಜನತಾ ಪಕ್ಷದ ಎಂ.ಚಂದ್ರಪ್ಪ ಮುನ್ನಡೆ ಕಾಯ್ದು ಕೊಂಡಿದ್ದಾರೆ.
ಅಚ್ಚರಿ ಬೆಳವಣಿಗೆಯಲ್ಲಿ ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ತೀವ್ರ ಹಿನ್ನಡೆಯಾಗಿದ್ದು ಕಾಂಗ್ರೆಸ್ ಪಕ್ಷದ ವೀರೇಂದ್ರ ಪಪ್ಪಿ ಗೆಲುವಿನತ್ತ ದಾವುಗಾಲು ಹಾಕಿದ್ದಾರೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪೂರ್ಣಗೊಂಡಿದ್ದು ಕಾಂಗ್ರೆಸ್ ಹಾಲಿ ಶಾಸಕ ಟಿ.ರಘುಮೂರ್ತಿ ಗೆಲುವು ಪಡೆಯುವುದರೊಂದಿಗೆ ಹ್ಯಾಟ್ರಿಕ್ ಭಾರಿಸಿದ್ದಾರೆ. ಇನ್ನೂ ಹೊಳಲ್ಕೆರೆ ಕ್ಷೇತ್ರದ ಹಾಲಿ ಶಾಸಕ ಎಂ.ಚಂದ್ರಪ್ಪ ಗೆಲುವುದರೊಂದಿಗೆ ಬಿಜೆಪಿಯ ಮಾನ ಕಾಪಾಡಿದ್ದಾರೆ.
ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ಜಯ ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಬಿಗಿ ಹಿಡಿತ ಸಾಧಿಸಿದ್ದಾರೆ.
ಹೊಸದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಜಿ.ಗೋವಿಂದಪ್ಪ ಭಾರೀ ಅಂತರದಿಂದ ಗೆಲ್ಲಲಿದ್ದಾರೆ. ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ಭಾರೀ ಅಂತರದಲ್ಲಿ ಗೆಲ್ಲಲ್ಲಿದ್ದಾರೆ.