i
ಕೋಟೆನಾಡಲ್ಲಿ 4 ಮಂದಿ ಶಾಸಕರ ನಡುವೆ ಮಂತ್ರಿಗಿರಿಗೆ ಬಿಗ್ ಪೈಟ್…
ವರದಿ-ಹೆಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನ ಪಡೆಯುವ ಮೂಲಕ ಭರ್ಜರಿ ಬಹುಮತದೊಂದಿಗೆ ಮೇ-20 ರಂದು ಶನಿವಾರ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರುವುದು ಒಂದು ಕಡೆಯಾದರೆ ಸಚಿವ ಸ್ಥಾನಕ್ಕಾಗಿ ಭಾರೀ ಲಾಬಿ ಆರಂಭವಾಗಿದೆ.
ಚಿತ್ರದುರ್ಗ ಜಿಲ್ಲೆಯ 6 ವಿಧಾನಸಭಾ ಸ್ಥಾನಗಳಲ್ಲಿ 5 ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಕ್ಷ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಗೆ ಬಹುದೊಡ್ಡ ಕೊಡುಗೆ ನೀಡುವ ಮೂಲಕ ಕೋಟೆ ನಾಡು ಚಿತ್ರದುರ್ಗ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ ಎಂದು ಮತ್ತೊಮ್ಮೆ ಸಾಬೀತು ಆಗಿದೆ.
ಕೋಟೆನಾಡ ಚಿತ್ರದುರ್ಗ ಜಿಲ್ಲೆಯಿಂದ ಪರಿಶಿಷ್ಟ ಪಂಗಡದ ಕೋಟಾದಡಿ ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಮತ್ತು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಧ್ಯ ಮಂತ್ರಿ ಪದವಿಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ.
ಮೊಳಕಾಲ್ಮೂರು ಕ್ಷೇತ್ರ- ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್.ವೈ.ಗೋಪಾಲಕೃಷ್ಣ 7 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಸಹಜವಾಗಿ ಮಂತ್ರಿ ಸ್ಥಾನವನ್ನು ಗಟ್ಟಿಯಾಗಿ ಕೇಳುತ್ತಿದ್ದಾರೆ. ಆದರೆ ಇವರಿಗೆ ಒಂದು ಹಿನ್ನಡೆ ಎಂದರೆ 2018 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಒಂದು ವಿಚಾರದಲ್ಲಿ ಎನ್.ವೈ.ಗೋಪಾಲಕೃಷ್ಣ ಅವರಿಗೆ ಹಿನ್ನಡೆಯಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಅಲ್ಲದೆ ವಿಧಾನಸಭಾ ಅಧ್ಯಕ್ಷರಾಗಿ ಎನ್.ವೈ.ಗೋಪಾಲಕೃಷ್ಣ ಇವರನ್ನು ಆಯ್ಕೆ ಮಾಡಲಾಗುತ್ತದೆ ಎನ್ನುವ ಸುದ್ದಿ ಬಲವಾಗಿ ಹರಿದಾಡುತ್ತಿದ್ದು ಇದೇ ಅಂಶ ಅಂತಿಮ ಎನ್ನುವುದಾದರೆ ಇವರ ಪ್ರತಿ ಸ್ಪರ್ಧಿ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರಿಗೆ ಸುಲಭವಾಗಿ ಸಚಿವ ಸ್ಥಾನ ದೊರೆಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಚಳ್ಳಕೆರೆ ಕ್ಷೇತ್ರ- ಚಳ್ಳಕೆರೆ ಎಸ್ಟಿ ಮೀಸಲು ಕ್ಷೇತ್ರದಿಂದ ಸತತ ಮೂರು ಬಾರಿ ಆಯ್ಕೆ ಆಗುವ ಮೂಲಕ ಹ್ಯಾಟ್ರಿಕ್ ಶಾಸಕರು ಎನ್ನುವ ಬಿರಿದು ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ನಿಷ್ಠರಾಗಿರುವ ರಘುಮೂರ್ತಿ ಅವರು ಎಸ್ಟಿ ಕೋಟಾದಡಿ ಸಚಿವ ಸ್ಥಾನ ಕೇಳುತ್ತಿದ್ದಾರೆ. ಬೆಳಗಾವಿ ಮತ್ತು ಬಳ್ಳಾರಿ ಜಿಲ್ಲೆಯ ಎಸ್ಟಿ ಶಾಸಕರಿಗೆ ಎರಡು ಮಂತ್ರಿ ಸ್ಥಾನ ನೀಡಿದರೆ ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಗೆ ಒಂದು ಎಸ್ಟಿ ಕೋಟಾದಡಿ ಸಚಿವ ಸ್ಥಾನ ನೀಡಿದರೆ ಅದು ಗ್ಯಾರಂಟಿ ಟಿ.ರಘುಮೂರ್ತಿ ಅವರಿಗೆ ನೀಡಬೇಕಾಗುತ್ತದೆ.
ಸತತ 3 ಬಾರಿ ಶಾಸಕರಾಗಿರುವ ಆಯ್ಕೆಯಾಗಿರುವ ಟಿ.ರಘುಮೂರ್ತಿ ಅವರು ಪಕ್ಷ ನಿಷ್ಠೆಗೆ ಮತ್ತೊಂದು ಹೆಸರು. ಅಲ್ಲದೆ 2018ರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯ ಮಧ್ಯ 5 ಶಾಸಕರ ಪೈಕಿ ಗೆದ್ದದ್ದು ರಘುಮೂರ್ತಿ ಒಬ್ಬರೇ ಎನ್ನುವುದು ಮುಖ್ಯ. ಹಾಗಾಗಿ ಪಕ್ಷ ಸಂಘಟನೆಗೆ ಒತ್ತು ಕೊಟ್ಟು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ರಾಜ್ಯದ ಗಮನ ಸೆಳೆದಿರುವ ರಘುಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಬಹುತೇಕ ಜಿಲ್ಲೆಯ ಜನರ ಆಶಯವಾಗಿದೆ. ರಘುಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಿದರೆ ನೆನೆಗುದಿಗೆ ಬಿದ್ದಿರುವ ಸರ್ಕಾರಿ ಮೆಡಿಕಲ್ ಆಸ್ಪತ್ರೆ ಸೇರಿದಂತೆ ಭದ್ರಾ ಮೇಲ್ದಂಡೆ ಕಾಮಗಾರಿಗೆ ಚುರುಕು ಸಿಗಲಿದೆ. ಅಲ್ಲದೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಅವರಿಂದ ಸಾಧ್ಯವಾಗಲಿದೆ.
ಹೊಸದುರ್ಗ ಕ್ಷೇತ್ರ- ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿ.ಜಿ.ಗೋವಿಂದಪ್ಪ ಕುರುಬ ಸಮುದಾಯದ ಕೋಟಾದಡಿ ಸಚಿವ ಸ್ಥಾನಕ್ಕಾಗಿ ಪೈಟ್ ಮಾಡುತ್ತಿರುವ ಹಿಂದುಳಿದ ವರ್ಗದ ಶಾಸಕರಾಗಿದ್ದಾರೆ.
ಹೊಸದುರ್ಗ ಶಾಸಕ ಬಿಜಿ ಗೋವಿಂದಪ್ಪ ಮಂತ್ರಿ ಸ್ಥಾನಕ್ಕೆ ತೀವ್ರ ಯತ್ನ ಮಾಡುತ್ತಿದ್ದು ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದು ಸಿದ್ದರಾಮಯ್ಯ ಸಿಎಂ ಆಗುತ್ತಿರುವುದರಿಂದ ಗೋವಿಂದಪ್ಪನವರಿಗೆ ಸಚಿವ ಸ್ಥಾನ ಎಲ್ಲಿ ಕೈ ತಪ್ಪಿ ಹೋಗಲಿದೆ ಎನ್ನುವ ಚಿಂತನೆ ಅವರಲ್ಲಿ ಇದ್ದಂತೆ ಕಾಣುತ್ತಿದೆ. ಒಂದು ವೇಳೆ ಮುಖ್ಯಮಂತ್ರಿ ಹೊರತಾಗಿ ಕುರುಬ ಸಮಾಜವರಿಗೆ ಸಚಿವ ಸ್ಥಾನ ನೀಡಿದ್ದೇ ಆದರೆ ಬಿ.ಜಿ.ಗೋವಿಂದಪ್ಪನವರ ಅದೃಷ್ಟ ಕುಲಾಯಿಸಲಿದೆ.
ಹಿರಿಯೂರು ಕ್ಷೇತ್ರ-ಇನ್ನೂ ಇಡೀ ರಾಜ್ಯದಲ್ಲಿ ಜೈನ ಸಮುದಾಯಕ್ಕೆ ಸೇರಿರುವ ಡಿ.ಸುಧಾಕರ್ ವಿಧಾನಸಭೆಗೆ ಆಯ್ಕೆಯಾಗಿರುವ ಏಕೈಕ ವ್ಯಕ್ತಿಯಾಗಿದ್ದಾರೆ. ಅಲ್ಪ ಸಂಖ್ಯಾತ ಕೋಟಾದಡಿ ಹಿರಿಯೂರು ಶಾಸಕ ಡಿ.ಸುಧಾಕರ್ ಮಂತ್ರಿಗಿರಿಗಾಗಿ ತೀವ್ರ ಯತ್ನ ಮಾಡುತ್ತಿದ್ದಾರೆ. ಇವರು ಡಿಕೆಶಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದು ಸಚಿವ ಸ್ಥಾನ ಸಿಗುತ್ತೋ ಅಥವಾ ಎರಡು ವರ್ಷಗಳ ನಂತರ ಇವರ ಗುರು ಡಿ.ಕೆ ಶಿವಕುಮಾರ್ ಸಿಎಂ ಆಗಲಿದ್ದು ಆಗ ಸಚಿವ ಸ್ಥಾನ ಸಿಗಲಿದೆಯೋ ಎನ್ನುವುದು ಈಗಲೇ ಹೇಳಲು ಸಾಧ್ಯವಿಲ್ಲ. ಈಗಾಗಲೇ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸುಧಾಕರ್ ಅವರು ಈಗಾಗಲೇ 2008ರಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಪಕ್ಷ ನಿಷ್ಠೆಗೆ ಒತ್ತು ನೀಡಿದರೆ ಈ ವಿಚಾರದಲ್ಲಿ ಸುಧಾಕರ್ ಅವರಿಗೆ ಒಂದಿಷ್ಟು ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಟ್ಟಾರೆ ಕೋಟೆ ನಾಡು ಜಿಲ್ಲೆಯ ನಾಲ್ಕು ಮಂದಿ ಹಿರಿಯ ಶಾಸಕರಿಂದ ಮಂತ್ರಿ ಸ್ಥಾನಕ್ಕೆ ಸಾಕಷ್ಟು ಲಾಬಿ ನಡೆಯುತ್ತಿದ್ದು ಯಾರಿಗೆ ಅದೃಷ್ಠ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಬೆಂಗಳೂರಿನಲ್ಲೇ ಕುಳಿತಿರುವ ನಾಲ್ಕು ಮಂದಿ ಶಾಸಕರು ಆಪ್ತ ನಾಯಕರ ಮೂಲಕ ಹೈಕಮಾಂಡ್ ಗಮನ ಸೆಳೆಯುತ್ತಿದ್ದಾರೆ.