i
ಆಲಿಕಲ್ಲು ಮಳೆಯಗೆ ನೆಲಕ್ಕುರುಳಿದ ಮರಗಳು, ವಿದ್ಯುತ್ ಕಂಬಗಳು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದಾದ್ಯಂತ ಸುರಿದ ಆಲಿಕಲ್ಲು ಮಳೆಯಗೆ ನೂರಾರು ಮರಗಳು ನೆಲಕ್ಕುರುಳಿವೆ. ನೆರಳಿಗಾಗಿ ಅಲ್ಲಲ್ಲಿ ನಿಲ್ಲಿಸಿದ ವಾಹನಗಳ ಮೇಲೆ ಮರಗಳು ಉರುಳಿ ಬಿದ್ದಿದ್ದರಿಂದಾಗಿ ವಾಹನಗಳಿಗೆ ಹಾನಿಯಾಗಿ ಜಖಂಗೊಂಡಿವೆ.
ನಗರದ ಒನಕೆ ಓಬವ್ವ ಕ್ರೀಡಾಂಗಣದ ರಸ್ತೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಸಾಧಿಕ್ ನಗರ, ಬುದ್ಧ ನಗರ, ಬಾಬು ಜಗಜೀವನರಾಮ್ ನಗರ ಸೇರಿದಂತೆ ತಗ್ಗು ಪ್ರದೇಶದ ವಿವಿಧ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಹಾನಿ ಮಾಡಿದೆ.
ಚಿತ್ರದುರ್ಗ ನಗರದ ಚಳ್ಳಕೆರೆ ಟೋಲ್ ಗೇಟ್ ಬಳಿಯ ಸರಸ್ಪತಿಪುರಂ ಮುಖ್ಯ ರಸ್ತೆಯಲ್ಲಿ ಐದಾರು ಮರಳು ಉರುಳಿ ಬಿದ್ದಿವೆ. ಅಲ್ಲದೆ ನ್ಯಾಷಿನಲ್ ಹೋಟೆಲ್ ಸಮೀಪದಲ್ಲೂ ದೊಡ್ಡ ಮರ ನೆಲಕ್ಕುರುಳಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಟೇಡಿಯಂ ರಸ್ತೆಯಲ್ಲಿ ದೊಡ್ಡ ದೊಡ್ಡ ಮರಗಳು ನೆಲಕ್ಕುರುಳಿವೆ. ವಿಜ್ಞಾನ ಕಾಲೇಜ್ ಹಿಂಭಾಗದ ಹಾಸ್ಟೆಲ್ ಕಟ್ಟಡದ ಮೇಲೆ ಮರವೊಂದು ಉರುಳಿ ಬಿದ್ದು ಹಾನಿ ಮಾಡಿದೆ.
ಕೆಲವು ಭಾಗಗಳಲ್ಲಿ ಮರಗಳು ಬುಡಸಮೇತ ಉರುಳಿ ಬಿದ್ದಿದ್ದರೆ ಇನ್ನೂ ಕೆಲ ಕಡೆಗಳಲ್ಲಿ ಮರಗಳ ಕೊಂಬೆಗಳು ಏಕಾಏಕಿ ಗಾಳಿ ಮಳೆಗೆ ಬಿದ್ದಿದ್ದು ಹಾನಿ ಮಾಡಿವೆ.
ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳ ಪರದಾಟ ಹೇಳ ತೀರದಾಗಿತ್ತು. ಹೆಚ್ಚು ಪ್ರಮಾಣದಲ್ಲಿ ಆಲಿಕಲ್ಲು ಮಳೆ ಸುರಿದಿದ್ದರಿಂದ ಚರಂಡಿ ಮೇಲ್ಭಾಗದಲ್ಲಿ ನೀರು ಹರಿದು ರಸ್ತೆ ಮತ್ತು ಮನೆಗಳಿಗೆ ನುಗ್ಗಿದೆ. ಚರಂಡಿಯೊಳಗೆ ಕಲ್ಲು ಮಣ್ಣು ಸೇರಿದಂತೆ ಇತರೆ ಘನ ತ್ಯಾಜ್ಯ ಬಿದ್ದಿದ್ದರಿಂದ ಚರಂಡಿ ಮುಚ್ಚಿಹೋಗಿದೆ.
ನೀರು ನುಗ್ಗಿ ಪಡಿತರ ಮತ್ತಿತರ ವಸ್ತುಗಳು ನೀರಿನಲ್ಲಿ ಮುಳುಗಿದ್ದು ಸರಕುಗಳಿಗೆ ಹಾನಿಯಾಗಿದೆ. ಪದೇ ಪದೇ ಮಳೆ ನೀರು ಮನೆಗಳಿಗೆ ನುಗ್ಗುತ್ತಿರುವುದರಿಂದ ನಮ್ಮ ಜೀವನ ಮುಂದೆ ಹೆಂಗೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ನೆಲೆಕ್ಕುರುಳಿದ ವಿದ್ಯುತ್ ಕಂಬಗಳು- ನಗರದ ಹಲವು ಭಾಗಗಳಲ್ಲಿ 15ಕ್ಕೂ ಹೆಚ್ಚಿನ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಬಿದ್ದಿವೆ. ಸರ್ಕಾರಿ ಡಿಪ್ಲೋಮಾ ಕಾಲೇಜ್ ಸಮೀಪದ ಲೈಬ್ರರಿ ಬಳಿ ವಿದ್ಯುತ್ ತಂತಿ ಹರಿದು ನೆಲಕ್ಕೆ ಬಿದ್ದಿದ್ದು ಯಾವುದೇ ಪ್ರಾಣ ಹಾನಿಯಾಗಿಲ್ಲ.
ವಿದ್ಯುತ್ ವ್ಯತ್ಯಯ- ವಿದ್ಯುತ್ ಕಂಬ ಮತ್ತು ವೈಯರ್ ಮೇಲೆ ಮರಗಳು ಉರುಳಿ ಬಿದ್ದಿದ್ದರಿಂದಾಗಿ ನಗರದ ಐಯುಡಿಪಿ ಲೇಔಟ್, ಕೆಹೆಚ್ ಬಿ ಕಾಲೋನಿ, ಸರಸ್ಪತಿ ಪುರಂ, ನಗರಸಭೆ ಬಡಾವಣೆ, ಕಣುಮಪ್ಪ ಲೇಔಟ್, ಸಹ್ಯಾದ್ರಿ ಬಡಾವಣೆ ಸೇರಿದಂತೆ ಮತ್ತಿತರ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಗ್ರಾಹಕರು ಪರದಾಡುವಂತಾಯಿತು.