i
24 ನೂತನ ಸಚಿವರುಗಳ ಸಂಪೂರ್ಣ ಮಾಹಿತಿ, ಪ್ರಮಾಣ ವಚನ ಸ್ವೀಕಾರ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಭವನದ ಗಾಜಿನ ಮನೆಯಲ್ಲಿ ಜರುಗಿದ ಅಧಿಕಾರ ಪದ ಮತ್ತು ಗೋಪ್ಯತಾ ಪ್ರಮಾಣವಚನ ಕಾರ್ಯಕ್ರಮದಲ್ಲಿ ಶಾಸಕರಲ್ಲದ ಎನ್.ಎಸ್. ಬೋಸರಾಜು ಅವರು ಮತ್ತು 23 ಶಾಸಕರು ಸಂಪುಟ ದರ್ಜೆಯ ಸಚಿವರುಗಳಾಗಿ ಪ್ರಮಾಣವಚನ ಪಡೆಯುವ ಮೂಲಕ ಸಿದ್ದರಾಮಯ್ಯ ಅವರ ಸಂಪುಟವನ್ನು ಸೇರಿದರು.
ನೂತನ ಮಂತ್ರಿಮಂಡಲದ ಸದಸ್ಯರಾಗಿ ಆಯ್ಕೆಯಾದ ಇವರಿಗೆ ರಾಜ್ಯಪಾಲರಾದ ಥಾವರ್ಚಂದ್ ಗೆಹ್ಲೋಟ್ ಅಧಿಕಾರ ಪದ ಮತ್ತು ಗೋಪ್ಯತಾ ಪ್ರಮಾಣ ವಚನವನ್ನು ಬೋಧಿಸಿದರು. ರಾಜ್ಯಪಾಲರ ಅನುಮತಿ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮ ಅವರು ಪ್ರಮಾಣವಚನ ಪಡೆದುಕೊಳ್ಳಲು ಸಚಿವರುಗಳನ್ನು ಆಹ್ವಾನಿಸಿ, ಕಾರ್ಯಕ್ರಮ ನಿರೂಪಿಸಿದರು.
24 ಮಂದಿ ಸಚಿವರುಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಒಟ್ಟು 34 ಮಂದಿ ಸೇರ್ಪಡೆಗೊಂಡಂತ್ತಾದ್ದರಿಂದ ನೂತನ ಸರ್ಕಾರವು ಪೂರ್ಣ ಪ್ರಮಾಣದಲ್ಲಿ ರಚನೆಯಾಯಿತು. ಹಾಗೆಯೇ ಎಲ್ಲಾ ಸಚಿವರುಗಳಿಗೂ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ.
ನೂತನ ಸಚಿವರುಗಳಾಗಿ ಪ್ರಮಾಣವಚನ ಸ್ವೀಕರಿಸಿದ ಶಾಸಕರುಗಳ ಕುಟುಂಬದವರು, ಬಂಧುಗಳು, ಕಾರ್ಯಕರ್ತರು ಸೇರಿದಂತೆ ಸಾವಿರಾರು ಮಂದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ರಾಜಭವನದ ಗಾಜಿನ ಮನೆ ಆವರಣ ತುಂಬಿ ತುಳುಕುತಿತ್ತು. ಪ್ರಮಾಣವಚನ ತೆಗೆದುಕೊಳ್ಳುವಾಗ ಅವರ ಬೆಂಬಲಿಗರು ಜೋರಾಗಿ ಜೈಕಾರ ಹಾಕಿ ಸಂಭ್ರಮಿಸಿದರು. ಇಡೀ ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಎಲ್ಲರಿಗಿಂತ ಹೆಚ್ಚಿನ ಜೈಕಾರ ಕೇಳಿ ಬಂದಿದ್ದು ವಿಶೇಷವಾಗಿತ್ತು.
ಇಂದು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಎಚ್.ಕೆ.ಪಾಟೀಲ್ ಅವರು ದೇವರ ಹೆಸರಿನಲ್ಲಿ, ಕೃಷ್ಣಭೈರೇಗೌಡ ಅವರು ಯಾವುದೇ ಹೆಸರನ್ನು ತೆಗೆದುಕೊಳ್ಳದೆ, ಎನ್.ಚೆಲುವರಾಯಸ್ವಾಮಿ ಮತ್ತು ಕೆ.ವೆಂಕಟೇಶ್ ಅವರು ದೇವರ ಹೆಸರಿನಲ್ಲಿ, ಡಾ.ಎಚ್.ಸಿ.ಮಹದೇವಪ್ಪ ಅವರು ಸತ್ಯ ಮತ್ತು ನಿಷ್ಠೆ ಹೆಸರಿನಲ್ಲಿ, ಈಶ್ವರ ಖಂಡ್ರೆ ಅವರು ದೇವರ ಹೆಸರಿನಲ್ಲಿ, ಕೆ.ಎಸ್.ರಾಜಣ್ಣ ಅವರು ಬುದ್ಧ, ಬಸವ, ವಾಲ್ಮೀಕಿ ಮತ್ತು ಅಂಬೇಡ್ಕರ್ ಹೆಸರಿನಲ್ಲಿ, ದಿನೇಶ್ ಗುಂಡೂರಾವ್ ಅವರು ಯಾವುದೇ ಹೆಸರನ್ನು ತೆಗೆದುಕೊಳ್ಳದೆ, ಶರಣಬಸಪ್ಪ ದರ್ಶನಾಪುರ ಅವರು ದೇವರ ಹೆಸರಿನಲ್ಲಿ ಶಿವಾನಂದ ಪಾಟೀಲ ಬಸವಣ್ಣ ಅವರ ಹೆಸರಿನಲ್ಲಿ, ಆರ್.ಬಿ.ತಿಮ್ಮಾಪುರ ಅವರು ದೇವರ ಹೆಸರಿನಲ್ಲಿ, ಎಸ್.ಎಸ್. ಮಲ್ಲಿಕಾರ್ಜುನ ಕಲ್ಲೇಶ್ವರ ದೇವರ ಹೆಸರಿನಲ್ಲಿ, ಶಿವರಾಜ ತಂಗಡಗಿ, ಡಾ. ಶರಣಪ್ರಕಾಶ್ ಪಾಟೀಲ, ಮಂಕಾಳ ಸುಬ್ಬ ವೈದ್ಯ ಅವರುಗಳು ದೇವರ ಹೆಸರಿನಲ್ಲಿ, ಲಕ್ಷ್ಮೀಹೆಬ್ಬಾಳ್ಕರ್ ಅವರು ಜಗಜ್ಯೋತಿ ಬಸವೇಶ್ವರ, ಛತ್ರಪತಿ ಶಿವಾಜಿ, ಅಂಬೇಡ್ಕರ್, ಕ್ಷೇತ್ರದ ಮತದಾರರು ಮತ್ತು ತಮ್ಮ ತಾಯಿ ಗಿರಿಜಾ ಬಾಯಿ ಅವರ ಹೆಸರಿನಲ್ಲಿ, ರಹೀಂ ಖಾನ್ ಅವರು ಅಲ್ಲಾ ಹೆಸರಿನಲ್ಲಿ, ಡಿ.ಸುಧಾಕರ್ ಅವರು ತೇರುಮಲ್ಲೇಶ್ವರ ಸ್ವಾಮಿ ಹೆಸರಿನಲ್ಲಿ, ಸಂತೋಷ್ ಎಸ್. ಲಾಡ್, ಎನ್.ಎಸ್.ಬೋಸರಾಜು, ಭೈರತಿ ಸುರೇಶ್, ಮಧು ಬಂಗಾರಪ್ಪ, ಡಾ. ಎಂ.ಸಿ.ಸುಧಾಕರ್ ಅವರುಗಳು ದೇವರ ಹೆಸರಿನಲ್ಲಿ ಹಾಗೂ ಬಿ.ನಾಗೇಂದ್ರ ಅವರು ವಾಲ್ಮೀಕಿ ಮತ್ತು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ರಹೀಂ ಖಾನ್ ಅವರು ಇಂಗ್ಲೀಷ್ ಭಾಷೆಯಲ್ಲಿ ಹಾಗೂ ಉಳಿದವರೆಲ್ಲರೂ ಕನ್ನಡ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲರಿಗೂ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಅವರು ಹೂಗುಚ್ಛವನ್ನು ನೀಡುವ ಮೂಲಕ ಅಭಿನಂದನೆ ಸಲ್ಲಿಸಿದರು. ಪ್ರಮಾಣವಚನ ಸಂದರ್ಭದಲ್ಲಿ ವೇದಿಕೆ ಮೇಲೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಉಪಸ್ಥಿತರಿದ್ದರು.
ಮೊದಲ ಬಾರಿಗೆ ಸಚಿವರಾದವರು:
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಕೆ. ವೆಂಕಟೇಶ್, ಮಧುಗಿರಿ ವಿಧಾನಸಭಾ ಕ್ಷೇತ್ರದ ಕ್ಯಾತಸಂದ್ರ ನಂಜಪ್ಪ ರಾಜಣ್ಣ, ಭಟ್ಕಳ ವಿಧಾನಸಭಾ ಕ್ಷೇತ್ರದ ಮಾಂಕಾಳ ವೈದ್ಯ, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಲಕ್ಷ್ಮೀ ಹೆಬ್ಬಾಳ್ಕರ್, ರಾಯಚೂರು ಜಿಲ್ಲೆಯ ಕಾಂಗ್ರೆಸ್ ಮುಖಂಡ ಎನ್.ಎಸ್. ಬೋಸರಾಜು, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬೈರತಿ ಸುರೇಶ್, ಸೊರಬ ವಿಧಾನಸಭಾ ಕ್ಷೇತ್ರದ ಮಧು ಬಂಗಾರಪ್ಪ, ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಎಂ.ಸಿ. ಸುಧಾಕರ್ ಹಾಗೂ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿ. ನಾಗೇಂದ್ರ ಅವರು ಮೊದಲ ಬಾರಿಗೆ ಸಚಿವರಾಗಿದ್ದಾರೆ.