i
ಡಿ.ಸುದಾಕರ್ ರಾಜಕಾರಣದ ಇಚ್ಚಾಶಕ್ತಿ ಜ್ಞಾನಕ್ಕೆ ಸಚಿವ ಸಂಪುಟದ ಸ್ಥಾನ ಮಾನ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಕ್ಷೇತ್ರದ ಶಾಸಕ ಡಿ ಸುಧಾಕರ್ 2023 ರ ನೂತನ ಸಚಿವರಾಗಿ ಆಯ್ಕೆಯಾಗುವ ಮೂಲಕ ಕ್ಷೇತ್ರಕ್ಕೆ ಮತ್ತು ಜಿಲ್ಲೆಯ ಘನತೆ ಹೆಚ್ಚಿಸಿದ್ದಾರೆ. ಸುಧಾಕರ್ ಇವರು 2004ರ ಸಂದರ್ಭದಲ್ಲಿ ಚಳ್ಳಕೆರೆ ಕ್ಷೇತ್ರದಿಂದ ಪ್ರಥಮವಾಗಿ ಶಾಸಕರಾದ ಇವರು ಆ ಸಮಯದಲ್ಲಿ ಚಳ್ಳಕೆರೆ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆದು ಕ್ಷೇತ್ರದಲ್ಲಿ ಜನರ ವಿಶ್ವಾಸಕ್ಕೆ ಹತ್ತಿರವಾಗಿದ್ದರು.
2008 ರಾಜ್ಯದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ವೇಳೆಯಲ್ಲಿ ರಾಜ್ಯದಲ್ಲಿ ಕ್ಷೇತ್ರದ ಮರು ವಿಂಗಡಣೆಯ ಸಂದರ್ಭದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರವು ಎಸ್ ಟಿ ಸಮುದಾಯಕ್ಕೆ ಮೀಸಲಾಗಿರುವ ಕಾರಣಕ್ಕೆ ಹಿರಿಯೂರು ಕ್ಷೇತ್ರದಿಂದ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು.
3 ವರ್ಷಗಳ ಕಾಲ ಸಮಾಜಕಲ್ಯಾಣ ಮಂತ್ರಿಯಾದ ಇವರು ಸಾಕಷ್ಟು ಪ್ರಮಾಣದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ದೊಡ್ಡ ಪ್ರಮಾಣದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಪಕ್ಷೇತರ ಶಾಸಕರಾಗಿ ಮಂತ್ರಿಯಾದ ಇವರಿಗೆ ಆ ಸಮಯದ ಸರ್ಕಾರದಲ್ಲಿ ಗೌರವ ಸಿಗದ ಕಾರಣಕ್ಕೆ ಸ್ವಾಭಿಮಾನ, ವೈಯಕ್ತಿಕ ಘನತೆಗೆ ಧಕ್ಕೆ ಆಗದಂತೆ ಎಚ್ಚರವಹಿಸಿ ಸರ್ಕಾರದಿಂದ ಹೊರಗೆ ಬಂದು ಮಂತ್ರಿಗಿರಿಗೆ ರಾಜಿನಾಮೆ ನೀಡಿ ಕಾಂಗ್ರೆಸ್ ಪಕ್ಷದ ಕಡೆಗೆ ಹೆಜ್ಜೆ ಹಾಕಿದರು. ಇದಕ್ಕೆ ಮುಖ್ಯ ಕಾರಣ ಡಿ ಕೆ ಶಿವಕುಮಾರ್ ರವರ ವಿಶ್ವಾಸ ಎನ್ನಲಾಗುತ್ತಿದೆ.
ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ 2013ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಶಾಸಕರಾಗಿ ಆಯ್ಕೆ ಆಗುವ ಮೂಲಕ ರಾಜಕೀಯದಲ್ಲಿ ಯಶಸ್ಸು ಕಂಡ ಇವರಿಗೆ ಜನಪ್ರಿಯತೆ ಮತ್ತಷ್ಟು ಹೆಚ್ಚುತ್ತದೆ.
2018ರ ಚುನಾವಣೆಯಲ್ಲಿ ಕೆಲವು ಕಾರಣದಿಂದ ಇವರು ಸೋಲು ಕಂಡಿರು. 18 ರಿಂದ 23ರ ವರೆಗೆ 5 ವರ್ಷಗಳ ಕಾಲ ಹಿರಿಯೂರು ತಾಲೂಕಿನ ಜನರ ಸಂಪರ್ಕದಲ್ಲಿ ನಿರಂತರವಾಗಿ ಇದ್ದ ಇವರು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಶಕ್ತಿ ತುಂಬಿದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಪರವಾಗಿ ಸ್ಥಳಿಯ ಸಂಸ್ಥೆಗಳ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಗೆಲುವಿಗೆ ಕಾರಣರಾದರು.
2023ರ ಈ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಯಶಸ್ಸು ಕಂಡ ಇವರು ದೊಡ್ಡ ಪ್ರಮಾಣದಲ್ಲಿ ಚುನಾವಣೆ ಎದುರಿಸಿ 33 ಸಾವಿರ ಅಂತರದಿಂದ ಗೆಲುವು ಸಾಧಿಸುವುದಕ್ಕೆ ಕ್ಷೇತ್ರದ ಜನರ ಪ್ರೀತಿ ವಿಶ್ವಾಸ, ನಂಬಿಕೆ ಕಾರಣವಾಗಿದೆ. ಅಷ್ಟೇ ಇಂದು ಡಿ.ಸುಧಾಕರ್ ಅವರು ತೇರುಮಲ್ಲೇಶ್ವರ ಸ್ವಾಮಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸಕ್ಕೆ ಮತ್ತೊಮ್ಮೆ ಭಜನರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಗೆದ್ದವರು ಸುಮಾರು ದಶಕದಿಂದ ಸಚಿವರು ಆಗುತ್ತಿದ್ದ ವಿಚಾರ ವಾಡಿಕೆ ಇತ್ತು ಅದು ಮತ್ತೆ ಮುಂದುವರಿದಿದೆ ಎಂದು ಹೇಳಬಹುದು. ಕೆ ಎಚ್ ರಂಗನಾಥ್. ಡಿ ಮಂಜುನಾಥ್ ಮತ್ತು ಡಿ ಸುಧಾಕರ್ ಅವರು ಸತತವಾಗಿ ಮಂತ್ರಿಯಾಗಿದ್ದ ಆ ವಿಚಾರ ಈ ಸಮಯದಲ್ಲಿ ನೆನೆಯಬಹುದು.
ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಬೇಕು ಎಂಬ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಚೈತನ್ಯ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಆ ಒಂದು ಸಮಯದಲ್ಲಿ ಚಳ್ಳಕೆರೆ ಕ್ಷೇತ್ರದ ಶಾಸಕ ಸ್ಥಾನಕ್ಕೆ ಆಕಾಂಕ್ಷೆಯಾಗಿದ್ದ ಸುಧಾಕರ್ ಅವರು ಚಳ್ಳಕೆರೆ ತಾಲೂಕಿನಾದ್ಯಂತ ಯಾತ್ರೆಯನ್ನು ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಾಣಲು ಕಾರಣರಾಗಿದ್ದರು. ಈ ಯಾತ್ರೆಯ ಸಮಯದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರ ಜೊತೆಗೆ ಸಕ್ರಿಯವಾಗಿ ಪಾಲ್ಗೊಂಡಿದ್ದ ರಘು ಗೌಡ ಮತ್ತು 2018 ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲಾ ಪ್ರಚಾರ ಸಮಿತಿಯ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯನಾಗಿ ಹಿರಿಯೂರು ತಾಲೂಕಿನ ಚುನಾವಣೆಯ ಪ್ರಕ್ರಿಯೆಯಲ್ಲಿ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರ ಜೊತೆಯಲ್ಲಿ ಪಾಲ್ಗೊಂಡಿದ್ದ ವಿಚಾರವನ್ನು ಅವರು ಸ್ಮರಿಸುತ್ತಾರೆ.
ಚಿತ್ರದುರ್ಗ ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸತತವಾಗಿ 15 ವರ್ಷಗಳ ಕಾಲ ಆಡಳಿತದ ಚುಕ್ಕಾಣಿ ಹಿಡಿಯುವ ಮೂಲಕ ಡಿ. ಸುಧಾಕರ್ ಅವರು ಸಹಕಾರ ಕ್ಷೇತ್ರದಲ್ಲಿಯೂ ಹಿಡಿತ ಹೊಂದಿದ್ದಾರೆ. ಒಟ್ಟಾರೆ ಕೋಟೆ ನಾಡಿಗೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕ ಡಿ.ಸುಧಾಕರ್ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅಲ್ಲದೆ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಯೋಜನೆ ಮತ್ತು ಆರ್ಥಿಕ ಇಲಾಖೆ ಸಚಿವರಾಗಿ ನೇಮಕಗೊಂಡಿದ್ದಾರೆ.