i
ಸಚಿವ ಸ್ಥಾನ ವಂಚಿತ ಹಿರಿಯ ಕಾಂಗ್ರೆಸ್ ನಾಯಕರ ಭುಗಿಲೆದ್ದ ಅಸಮಾಧಾನ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾತಿವಾರು, ಪ್ರದೇಶವಾರು ಸಾಮಾಜಿಕ ನ್ಯಾಯ ಸಿಕ್ಕಿಲ್ಲ, ಸಣ್ಣಪುಟ್ಟ ಜಾತಿಗಳನ್ನು ಅತ್ಯಂತ ನಿರ್ಲಕ್ಷ್ಯೆ ಮಾಡಲಾಗಿದೆ, 3 ರಿಂದ 8 ಸಚಿವ ಸ್ಥಾನಗಳನ್ನು ಒಂದೊಂದು ಜಾತಿಗೆ ನೀಡುವ ಬದಲು ಎಲ್ಲ ಜಾತಿ ಜನಾಂಗಗಳಿಗೆ ಸಚಿವ ಸ್ಥಾನ ಕೊಡಬಹುದಿತ್ತು ಎನ್ನುವ ಕೂಗು ಒಂದು ಕಡೆಯಾದರೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರುಗಳು ಸಚಿವ ಸ್ಥಾನ ಕೈ ತಪ್ಪಿರುವುದಕ್ಕೆ ತೀವ್ರ ಅಸಮಾಧಾನ ಹೊರ ಹಾಕಿದ್ದು ಕಾಂಗ್ರೆಸ್ ಪಕ್ಷದಲ್ಲೀಗ ಅಸಮಾಧಾನ ಭುಗಿಲೆದ್ದಿದೆ.
ಲಂಬಾಣಿ, ಉಪ್ಪಾರ, ಕುಂಚಿಟಿಗ ಸೇರಿದಂತೆ ಮತ್ತಿತರ ಹಲವು ಜಾತಿಗಳಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸದೇ ಇರುವುದರಿಂದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೇ ಕಾಂಗ್ರೆಸ್ ನಾಯಕರು ಪ್ರತ್ಯಕ್ಷ-ಪರೋಕ್ಷವಾಗಿ ಮಾಧ್ಯಮಗಳ ಮೂಲಕ ಕಾಂಗ್ರೆಸ್ ನಾಯಕರಾದ ಪುಟ್ಟರಂಗಶೆಟ್ಟಿ, ಬಿ.ಕೆ.ಹರಿಪ್ರಸಾದ್, ಟಿ.ಬಿ.ಜಯಚಂದ್ರ, ಆರ್.ವಿ.ದೇಶಪಾಂಡೆ ಸೇರಿದಂತೆ ಮತ್ತಿತರರು ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಭವಿಷ್ಯದಲ್ಲಿ ಇದು ಎಲ್ಲಿಗೆ ಮುಟ್ಟುತ್ತದೆ ಹೇಳಲು ಸಾಧ್ಯವಿಲ್ಲ.
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಸ್ವಂತ ಮನೆಯಲ್ಲಿ ಇರುವವನು, ಬಾಡಿಗೆ ಮನೆ ತೆಗೆದುಕೊಂಡು ಬಂದವನಲ್ಲ. ಈ ಮನೆ ಬಿಟ್ಟು ಹೋಗಲ್ಲ ಅಥವಾ ಧ್ವಂಸ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯನವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ಮಾಡಿದರು.
ರಾಜೀನಾಮೆ ಗೀಜಿನಾಮೆ ಪ್ರಶ್ನೆಗೆ ನಾನು ಉತ್ತರ ಕೊಡಲು ಸಾಧ್ಯವಿಲ್ಲ. ಸಾಮಾಜಿಕ ನ್ಯಾಯಕ್ಕೂ, ಅಹಿಂದಕ್ಕೂ ಬಹಳ ವ್ಯತ್ಯಾಸವಿದೆ. ನಾನು ಅಹಿಂದ ಎಂದು ಯೋಚನೆ ಮಾಡುವವನಲ್ಲ. ನಾನು ಯೋಚನೆ ಮಾಡತಕ್ಕಂತಹದ್ದು ಪ್ರತಿಯೊಬ್ಬರಿಗೂ ಸಹ ಸಮಾನವಾದ ಅವಕಾಶಗಳು, ಸಮಾನವಾದ ಹಕ್ಕು. ಕಾಂಗ್ರೆಸ್ ಪಕ್ಷದ ಸಿದ್ದಾಂತ ಏನಿದೆ, ಸರ್ವ ಧರ್ಮ ಸಮನ್ವಯ ಸಮಭಾವ ಅದರಲ್ಲಿ ನಂಬಿಕೆ ಇಟ್ಟುಕೊಂಡವನು. ಯಾವುದೇ ಬೇಧ ಭಾವ ಇಲ್ಲ. ದೊಡ್ಡವರು-ಸಣ್ಣವರು ಇಲ್ಲ, ಎಲ್ಲರೂ ಸಹ ಒಂದೆ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರ ಹಾಕಿದರು.
ದೇಶದ ಕಾಂಗ್ರೆಸ್ ಪಕ್ಷ ಆಡಳಿತ ಇರುವಂತ 5 ರಾಜ್ಯಗಳಲ್ಲಿ ನಾನು ಕ್ಯಾಬಿನೆಟ್ ರಚಿಸಿ ಬಂದವನು. ಈಗಿರುವ ಮಂತ್ರಿಗಳು 500 ವರ್ಷ ಇರಬಹುದು. ನಾವೂ ಆ ಕನಸು ಕಾಣುವುದರಲ್ಲಿ ತಪ್ಪಿಲ್ಲ ಎಂದು ಹರಿಪ್ರಸಾದ್ ವ್ಯಂಗ್ಯವಾಡಿದರು.
ಡಿ.ಕೆ.ಶಿವಕುಮಾರ್ ಅವರನ್ನು ಸದ್ಯಕ್ಕೆ ಡಿಸಿಎಂ ಮಾಡಿದ್ದೇವಲ್ಲ. ಸಿಎಂ ಆಗಲು ಇನ್ನು ಒಂದು ಸ್ಟೆಪ್ ಮುಂದಕ್ಕೆ ಹೋಗಬೇಕು. ಸಮಯ ಬಂದಾಗ ಮಾತನಾಡುತ್ತೇನೆ. ವಾಟ್ಸಾಪ್ ಯೂನಿವರ್ಸಿಟಿ, ಟೆಲಿವಿಷನ್ ಯೂನಿವರ್ಸಿಟಿ ಚೆನ್ನಾಗಿದ್ದರೆ ಸರ್ಕಾರದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯಲಿದೆ ಎಂದು ಟಾಂಗ್ ನೀಡಿದರು.
ಅಧಿಕಾರ ಹಂಚಿಕೆ ವಿಚಾರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಣ್ ದೀಪ್ ಸಿಂಗ್ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಈ ಏಳು ಜನರಿಗೆ ಮಾತ್ರ ಗೊತ್ತಿರುವುದು. ಎಂಟನೆಯವನು ಹೇಳಿದರೆ ಅದು ಸುಳ್ಳು ಅಧಿಕೃತವಲ್ಲ, ಏಳು ಜನರ ಮಧ್ಯೆ ಮಾತ್ರ ಚರ್ಚೆ ನಡೆದಿದೆ. ಉಳಿದವರು ಹೇಳುತ್ತಿರುವುದು ಯಾರನ್ನಾದರೂ ಸಂತೋಷ ಪಡಿಸಲು ಮಾತ್ರ ಎಂದು ಎಂ.ಬಿ.ಪಾಟೀಲ್ ಗೆ ಟಾಂಗ್ ನೀಡಿದರು.
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ ಇವರು ಮುಖ್ಯಮಂತ್ರಿ ಆಗುತ್ತಾರೆಂದು ದಲಿತರ ಮತಗಳು ಮತ್ತು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡು ಒಕ್ಕಲಿಗ ಸಮುದಾಯದ ಮತ ಪ್ರಮಾಣ ಕಾಂಗ್ರೆಸ್ ಪಕ್ಷಕ್ಕೆ ಬಂದಿದೆ ಎಂದು ಹರಿಪ್ರಸಾದ್ ಹೇಳಿದರು.
ಲೋಕಸಭಾ ಚುನಾವಣೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡುವುದು ನಮ್ಮ ಗುರಿಯಾಗಿದೆ. ಹೊಸ ಸಂಸತ್ ಭವನದ ಉದ್ಘಾಟನೆಯ ವೇಳೆ ಸೆಂಗೋಲ್ ಅನ್ನುವುದನ್ನು ತಂದಿದ್ದಾರೆ. ಅದು ಸರ್ವಾಧಿಕಾರವನ್ನು ಸೂಚಿಸುತ್ತದೆ ಎಂದು ಮೋದಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ ಮಾಡಿದರು.