i
ಬಡತನದಲ್ಲಿ ಅರಳಿದ ಭೂಮಿಕಾ, ನೌಕಾದಳಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ಪ್ರತಿಭೆ…
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಕಿತ್ತು ತಿನ್ನುವ ಬಡತನ ಒಂದು ಕಡೆಯಾದರೆ ಸಾಧನೆ ಮಾಡಿಯೇ ತೀರುವೆ ಎನ್ನುವ ಛಲ ಇನ್ನೊಂದು ಕಡೆ. ತಂದೆ ಕಳೆದುಕೊಂಡು ತಾಯಿಯ ನೆರಳಿನಲ್ಲೆ ಬೆಳೆದ ಮಗಳು ಮಾಡಿರುವ ಸಾಧನೆ ಮೆಚ್ಚುವಂತದ್ದು.
ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿರುವ ಮತ್ತು ಉತ್ತಮ ಸಾಧನೆ ಮಾಡಿರುವ ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಮಂಟಪ ಮೆಟ್ಟಿಲು ಹೊಳೆ ರಸ್ತೆಯ ಶಿಬಾರ ಸರ್ಕಲ್ನ ಎಸ್ಎಸ್ಕೆ ಕಲ್ಯಾಣ ಮಂಟಪದ ಬಳಿ ವಾಸ ಇರುವ ದಿವಂಗತ ಮಂಜುನಾಥ್ ಹಾಗೂ ಲತಾ ದಂಪತಿಯ ಎರಡನೇ ಪುತ್ರಿ ವೈ. ಎಂ. ಭೂಮಿಕಾ.
ವೈ. ಎಂ. ಭೂಮಿಕಾ ಅವರು ಭಾರತೀಯ ನೌಕಾದಳಕ್ಕೆ ಆಯ್ಕೆಯಾಗಿರುವ ಮೂಲಕ ಕರ್ನಾಟಕದ ಹರಿಹರದಿಂದ ಆಯ್ಕೆಯಾಗಿರುವ ಏಕೈಕ ಅಭ್ಯರ್ಥಿ ಇವರಾಗಿದ್ದಾರೆ.
ನೌಕಾದಳಕ್ಕೆ ಆಯ್ಕೆಯಾದವರ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಈ ಪೈಕಿ ಕರ್ನಾಟಕದಿಂದ ಆಯ್ಕೆಯಾಗಿರುವ ಭೂಮಿಕಾ ಹರಿಹರ, ದಾವಣಗೆರೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಕೀರ್ತಿ ತಂದು ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಈಕೆಯ ಸಾಧನೆ ಹಿಂದಿನ ಪ್ರೇರಕ ಶಕ್ತಿ ಅಂದರೆ ಈಕೆ ತಾಯಿ ಲತಾ.
ಮನೆಯಲ್ಲಿ ಕಿತ್ತು ತಿನ್ನುವ ಬಡತನ. ತನ್ನ ಗಂಡನನ್ನು ಅಪಘಾತದಲ್ಲಿ ಕಳೆದುಕೊಂಡ ಲತಾ ಅವರು ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನ ಓದಿಸುವ ಛಲ ಮತ್ತು ಕನಸು ಬಿಡಲಿಲ್ಲ. ಆದರೆ, ಮನೆಯಲ್ಲಿ ದುಡಿಯುವುದು ಈ ತಾಯಿ ಮಾತ್ರ. ಬೇರೆ ಯಾರ ಆಸರೆ ಇಲ್ಲದೇ, ಅಂಗನವಾಡಿಯಲ್ಲಿ ಆಯಾ ಕೆಲಸ ಮಾಡಿಕೊಂಡು ಮಕ್ಕಳನ್ನು ದಡ ಸೇರಿಸುವ ಕಾಯಕದಲ್ಲಿ ನಿರತರಾಗಿದ್ದ ತಾಯಿ ಲತಾ ಕನಸು ನನಸಾಗುವ ಸಮಯ ಹತ್ತಿರವಾಗುತ್ತಿದೆ.
ಕಳೆದ ಆರು ವರ್ಷಗಳ ಹಿಂದೆ ಮಂಜುನಾಥ್ ಅವರು, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕಾಕೊಳ ಗ್ರಾಮದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆಗ ಮೂವರು ಮಕ್ಕಳ ಜೊತೆ ಲತಾ ಅವರು ದಿಕ್ಕೆಟ್ಟು ಕೂತಿದ್ದರು. ಮನೆಯಲ್ಲಿ ಬಡತನ ಸುಡುತ್ತಿದ್ದರೂ ಇದಕ್ಕೆ ಪ್ರತಿರೋಧವೆಂಬಂತೆ ನಿಂತು ತನ್ನ ದುಡಿಮೆಯಲ್ಲಿ ಮಕ್ಕಳ ಬದುಕು ರೂಪಿಸಬೇಕು ಎಂಬ ಪಣತೊಟ್ಟರು. ಅಂಗನವಾಡಿಯಲ್ಲಿ ಆಯಾ ಕೆಲಸ ಮಾಡುತ್ತಿದ್ದರೂ, ಬರುತ್ತಿದ್ದ ಆದಾಯವೂ ಕಡಿಮೆ. ಈ ಆದಾಯದಲ್ಲಿ ಮನೆ ನಡೆಯಬೇಕು, ಮಕ್ಕಳ ಓದು, ಬಟ್ಟೆ, ಪಠ್ಯಪುಸ್ತಕ ಸೇರಿದಂತೆ ಇತರೆ ಖರ್ಚು ಹೊಂದಿಸುವುದು ತುಂಬಾನೇ ಕಷ್ಟವಾಗಿತ್ತು. ಆದರೂ ಎದೆಗುಂದದೇ ಮಕ್ಕಳ ಬದುಕಿಗೆ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಈಗ ಮಗಳ ಸಾಧನೆ ತಾಯಿಯ ಕಷ್ಟವೆಲ್ಲಾ ನಿವಾರಣೆಯಾಗುವ ಕಾಲ ಸನ್ನಿಹಿತವಾಗುತ್ತಿದೆ.
ಭೂಮಿಕಾ ಶಿಕ್ಷಣ- ಭೂಮಿಕ ಅವರ ಜೀವನ ಎಲ್ಲರಂತಿರಲಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸುವ ಛಲ ಮಾತ್ರ ಎದ್ದು ಕಾಣುತ್ತಿತ್ತು. ಕಿತ್ತು ತಿನ್ನುವ ಬಡತನದಿಂದ ಸಾಕಷ್ಟು ಪಾಠ ಕಲಿತಿದ್ದ ಭೂಮಿಕ, ತಾಯಿಯ ಕಣ್ಣೀರು, ಬಡತನದ ಬದುಕು ಬದಲಾಯಿಸಬೇಕೆಂಬ ಹಠ ತೊಟ್ಟಿದ್ದರು. ದಾವಣಗೆರೆಯಲ್ಲಿ 1 ಹಾಗೂ 2 ನೇ ತರಗತಿಯನ್ನು ರಶ್ಮಿ ಶಾಲೆಯಲ್ಲಿ ಓದಿದ ಈಕೆ ಹಾಸ್ಟೆಲ್ನಲ್ಲಿದ್ದರು. 3 ರಿಂದ 7ನೇ ತರಗತಿಯವರೆಗೆ ಹರಿಹರ ಜಿ ಹೆಚ್ ಪಿ ಎಸ್ ಶಾಲೆಯಲ್ಲಿ ಅಭ್ಯಾಸ ಮಾಡಿದ ಭೂಮಿಕಾ, 8ರಿಂದ 10ನೇ ತರಗತಿಯವರೆಗೆ ಸುತ್ತೂರಿನ ಜೆಎಸ್ಎಸ್ ಶಾಲೆಯಲ್ಲಿ ಓದಿದರು.
ಮೈಸೂರಿನ ದೊಡ್ಡಕಾನ್ಯ ಮೊರಾರ್ಜಿ ದೇಸಾಯಿ ರೆಸಿಡೆನ್ಶಿಯಲ್ ವಿದ್ಯಾರ್ಥಿನಿಯರ ಕಾಲೇಜು ಹಾಗೂ ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಫಾರ್ಮಸಿ ಅಭ್ಯಾಸ ಮಾಡಿದರು. ಆ ಬಳಿಕ ಭಾರತೀಯ ನೌಕಾದಳಕ್ಕೆ ಅರ್ಜಿ ಆಹ್ವಾಸನಿಸಲಾಗಿತ್ತು.
ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದ ಭೂಮಿಕಾ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸದ್ಯಕ್ಕೆ ತರಬೇತಿ ಪಡೆದು ಆ ಬಳಿಕ ಕೆಲಸಕ್ಕೆ ಹೋಗಲಿದ್ದಾರೆ.
ಹರಿಹರ ಪಟ್ಟಣದ ಬಡ ಕುಟುಂಬದಲ್ಲಿ ಜನಿಸಿದ ಭೂಮಿಕಾ ಇಂದು ದೇಶದ ಪ್ರತಿಷ್ಠಿತ ಭಾರತೀಯ ನೌಕಾದಳಕ್ಕೆ ಆಯ್ಕೆಯಾಗುವ ಮೂಲಕ ಬೆಂಕಿಯಲ್ಲಿ ಅರಳಿದ ಹೂವು ಎಂಬಂತೆ ಬಡತನಕ್ಕೆ ಸೆಡ್ಡು ಹೊಡೆದು ಜೀವನದಲ್ಲಿ ಅತ್ಯುನ್ನತ ಹುದ್ದೆ ಅಲಂಕರಿಸಲಿ ಎಂಬುದು ಶಿಕ್ಷಕರು ಹಾಗೂ ಹರಿಹರ ಪಟ್ಟಣದ ಜನರ ಆಶಯವಾಗಿದೆ. ಭೂಮಿಕಾ ಬಾಲ್ಯದಲ್ಲಿ ಅನುಭವಿಸಿದ ಕಷ್ಟ ಒಂದು ಕಡೆಯಾದರೆ ತಂದೆ ಕಳೆದುಕೊಂಡ ನೋವು ಮತ್ತೊಂದೆಡೆ. ಭೂಮಿಕ ಅವರಿಗೆ ತಾಯಿಯೇ ಆಶಾಗೋಪುರ. ಅಮ್ಮನೇ ಎಲ್ಲವೂ. ಆಕೆ ಕಷ್ಟವನ್ನು ಕಣ್ಣಾರೆ ಕಂಡು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಪಣತೊಟ್ಟು ಯಶಸ್ವಿಯಾಗಿದ್ದಾರೆ.
ಭಾರತೀಯ ನೌಕಾದಳಕ್ಕೆ ಆಯ್ಕೆಯಾಗಿರುವ ಭೂಮಿಕಾ ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡು, ನಿತ್ಯ ಬೆಳಗ್ಗೆ ಹಾಗೂ ಸಂಜೆ ಸುಮಾರು ಮೂರರಿಂದ 4 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದೆ. ಮೊಬೈಲ್ ಮತ್ತು ಇತರೆ ಸಾಮಾಜಿಕ ಜಾಲತಾಣ ಬಳಸುತ್ತಿರಲಿಲ್ಲ. ಫೋನ್ನಲ್ಲಿ ಹೆಚ್ಚು ಹೊತ್ತು ಸಮಯ ಕಳೆಳೆಯದೇ ನೌಕಾದಳಕ್ಕೆ ಸಂಬಂಧಿಸಿದ ಮಾಹಿತಿ ಕಲೆ ಹಾಕಲಷ್ಟೇ ಮೊಬೈಲ್ ಬಳಕೆ ಮಾಡುತ್ತಿದ್ದೆ. ಕಷ್ಟಪಟ್ಟು ಓದಿದ ಪರಿಣಾಮ ಈ ಸಾಧನೆ ಸಾಧ್ಯವಾಗಿದೆ ಎಂದು ಭೂಮಿಕಾ ಸಾಧನೆ ಕುರಿತು ಹೇಳಿದರು.