i
ಜನರನ್ನು ಸಮಾಧಾನಪಡಿಸಲು ಆಗುತ್ತಿಲ್ಲ. ಅನಾಹುತಗಳು ಆಗಬಹುದು-ಶಾಸಕ ಜಯಚಂದ್ರ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕ್ಷೇತ್ರದ ಜನರು ಮತ್ತು ಕುಂಚಿಟಿಗ ಸಮಾಜ ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದಾರೆ. ಅವರ ಅಸಮಾಧಾನ ಸುಮ್ಮನಿರಿಸಲು ಸಾಧ್ಯವಾಗುತ್ತಿಲ್ಲ, ಮುಂದೆ ಏನಾದರೂ ತೊಂದರೆ ಆದರೆ ನಾನು ಹೊಣೆಯಲ್ಲ ಎಂದು ಸಚಿವ ಸ್ಥಾನ ಆಕಾಂಕ್ಷಿ ಹಿರಿಯ ಶಾಸಕ ಟಿ.ಬಿ ಜಯಚಂದ್ರ ಎಚ್ಚರಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗುತ್ತದೆ ಎನ್ನುವ ನಿರೀಕ್ಷೆ ಕುಂಚಿಟಿಗ ಸಮುದಾಯ ಮತ್ತು ಶಿರಾ ಕ್ಷೇತ್ರದ ಜನರಲ್ಲಿತ್ತು. ಆದರೂ ಸಚಿವ ಸ್ಥಾನ ಕೈತಪ್ಪಿದೆ ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅವರು ಯಾವ ರೀತಿ ತೀರ್ಮಾನ ಮಾಡುತ್ತಾರೋ ನೋಡೋಣ ಎಂದು ಸೂಚ್ಯವಾಗಿ ಹೇಳಿದರು.
ಕ್ಷೇತ್ರದ ಜನರನ್ನು ಸಮಾಧಾನಪಡಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಮುಂದೆ ಅನಾಹುತಗಳು ಆಗಬಹುದು. ಪಕ್ಷದ ಮೇಲೆ ದುಷ್ಪರಿಣಾಮ ಆಗಬಹುದು. ಎಚ್ಚರಿಕೆ ತೆಗೆದುಕೊಳ್ಳಬೇಕೆಂದು ಹೇಳಿದ್ದೇನೆ. ಯೋಚನೆ ಮಾಡುತ್ತೇವೆಂದು ಇಬ್ಬರೂ ಹೇಳಿದ್ದಾರೆ ಎಂದು ಜಯಚಂದ್ರ ತಿಳಿಸಿದರು.
ನಾನು ಸಚಿವನಾದರೆ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳು ಜಾರಿಯಾಗುತ್ತವೆ. ಸಮಗ್ರ ಅಭಿವೃದ್ಧಿ ಆಗಲಿದೆ ಎಂದು ಜನ ಆಸೆಪಟ್ಟಿದ್ದರು. ಆದರೆ ಯಾವ ಕಾರಣಕ್ಕಾಗಿ ಸಚಿವ ಸ್ಥಾನ ನೀಡಲಿಲ್ಲವೋ ಗೊತ್ತಿಲ್ಲ, ಕುಂಚಿಟಿಗ ಸಮಾಜದಿಂದ ನಾನೊಬ್ಬನೇ ಗೆದ್ದಿದ್ದೆ. ಸಮಾಜಕ್ಕೂ ನ್ಯಾಯ ಸಿಗಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಬಿಡಿಎ ಅಧ್ಯಕ್ಷ, ದೆಹಲಿ ವಿಶೇಷ ಪ್ರತಿನಿಧಿ ಸ್ಥಾನ ಒಪ್ಪಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ಅವರು ಏನು ಚರ್ಚೆ ಮಾಡಿದ್ದಾರೋ ಗೊತ್ತಿಲ್ಲ. ನಾನು ನಿರ್ದಿಷ್ಟವಾಗಿ ಏನನ್ನೂ ಕೇಳಿಲ್ಲ, ಆದರೆ ಜನರ ಅಸಮಾಧಾನಗಳು, ಆಕ್ರೋಶಗಳು ಎಲ್ಲೆಡೆ ವ್ಯಕ್ತವಾಗುತ್ತಿವೆ ಎಂದು ತಿಳಿಸಿದರು.
ಕಾಂಗ್ರೆಸ್ ನೀಡಿದ 5 ಗ್ಯಾರಂಟಿಗಳ ಜಾರಿ ಕುರಿತು ಪ್ರತಿಕ್ರಿಯಿಸಿದ ಅವರು, ಸಚಿವ ಸಂಪುಟದಲ್ಲಿ ತೀರ್ಮಾನ ಆಗಬೇಕು. ಸಂಪನ್ಮೂಲಗಳ ಕ್ರೋಡೀಕರಣ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಅಲ್ಲಿಯವರೆಗೆ ಸಚಿವರುಗಳು ಈ ಬಗ್ಗೆ ವಿಶ್ಲೇಷಿಸುವುದು ಸರಿಯಲ್ಲ. ಹಾರಿಕೆ ಉತ್ತರ ಕೊಟ್ಟರೆ ಜನರ ಮನಸ್ಸಿನಲ್ಲಿ ಗೊಂದಲಗಳು ಮೂಡುತ್ತದೆ. ಹೀಗಾಗಿ ಯಾವ ಸಚಿವರೂ ಮಾತನಾಡಬಾರದು ಎಂದು ಶಾಸಕ ಟಿ.ಬಿ.ಜಯಚಂದ್ರ ಸಲಹೆ ನೀಡಿದರು.