i
ತೇಜೋವಧೆಗಾಗಿ ಟ್ರೋಲ್, ಅನೈತಿಕ ಪೊಲೀಸ್ ಗಿರಿ ಮಾಡಿದರೆ ಹುಷಾರ್-ಸಿಎಂ ಸಿದ್ದರಾಮಯ್ಯ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಮಾಜ ಶಾಂತವಾಗಿರಬೇಕು, ಸಮಾಜ ಶಾಂತವಾಗಿದ್ದರೆ ರಾಜ್ಯ, ದೇಶ ಶಾಂತವಾಗಿರುತ್ತದೆ. ಹಾಗಾಗಿ ಅನೈತಿಕ ಪೊಲೀಸ್ ಗಿರಿ ಮಾಡುವವರಿಗೆ, ದ್ವೇಷದ ರಾಜಕಾರಣಕ್ಕೆ, ತೇಜೋವಧೆಗಾಗಿ ಟ್ರೋಲ್ ಮಾಡುವವರಿಗೆ, ಸಾಹಿತಿಗಳಿಗೆ ಬೆದರಿಕೆ ಹಾಕುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಖಡಕ್ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿಎಂ, ಕನ್ನಡ ನಾಡಿನ ಸೌಹಾರ್ದತೆ, ಜಾತ್ಯತೀತ ಪರಂಪರೆ ರಕ್ಷಣೆ ವಿಚಾರದಲ್ಲಿ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಾಹಿತಿಗಳು, ಬರಹಗಾರರು, ಜನಪರ ಸಂಘಟನೆಗಳಿಗೆ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಸುಳ್ಳು ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗುವುದು. ಕನ್ನಡ ಪರ ಹೋರಾಟಗಾರರು, ರೈತರು, ಕಾರ್ಮಿಕರು, ದಲಿತ ಹೋರಾಟಗಾರರ ಮೇಲೆ ಹಾಗೂ ಬರಹಗಾರರ ವಿರುದ್ಧ ದಾಖಲಾದ ಸುಳ್ಳು ಮೊಕದ್ದಮೆ ಹಿಂಪಡೆಯುತ್ತೇವೆ ಎಂದು ಸಿಎಂ ಭರವಸೆ ನೀಡಿದ್ದಾರೆ.
ಮಕ್ಕಳ ಮನಸ್ಸು ಪಠ್ಯ, ಪಾಠಗಳ ಮೂಲಕ ಕಲುಷಿತಗೊಳಿಸುವ ಕೃತ್ಯ ಸಹಿಸುವುದಿಲ್ಲ. ಶೈಕ್ಷಣಿಕ ವರ್ಷ ಆರಂಭ ಆಗಿರುವುದರಿಂದ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.