i
ಬಿಪಿಎಲ್ ಕುಟುಂಬಗಳಿಗೆ 10 ಕೆಜಿ ಅಕ್ಕಿ, ಮಾರ್ಗಸೂಚಿ ಪ್ರಕಟ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಭರವಸೆ(ಗ್ಯಾರಂಟಿ) ನೀಡಿದಂತೆ ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೆ ಅನ್ನಭಾಗ್ಯ ಯೋಜನೆಯಡಿ ಜು.1 ರಿಂದ ಅನ್ವಯವಾಗುವಂತೆ 10 ಕೆಜಿ ಆಹಾರ ಧಾನ್ಯ ವಿತರಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತಿಯೊಬ್ಬರಿಗೂ 7 ಕೆಜಿ ಅಕ್ಕಿ ನೀಡಲಾಗುತ್ತಿತ್ತು. ಈ ಪ್ರಮಾಣವನ್ನು ಹಿಂದಿನ ಬಿಜೆಪಿ ಸರ್ಕಾರ 5 ಕೆಜಿಗೆ ಇಳಿಸಿತ್ತು. ಚುನಾವಣೆ ಪ್ರಣಾಳಿಕೆ ವೇಳೆ ನಮ್ಮ ಸರ್ಕಾರ ಬಂದರೆ ಪ್ರತಿ ಸದಸ್ಯರಿಗೆ 10 ಕೆಜಿ ಆಹಾರ ಧಾನ್ಯ ಒದಗಿಸುವುದಾಗಿ ಹೇಳಿದ್ದೇವು. ಅದರಂತೆ ಜುಲೈ 1 ರಿಂದ ಆಹಾರ ಧಾನ್ಯ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಜು. 1 ರಿಂದ ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲ ಫಲಾನುಭವಿಗಳಿಗೆ ತಲಾ 10 ಕೆ.ಜಿ.ಅಕ್ಕಿ, ಅಂತ್ಯೋದಯ ಫಲಾನುಭವಿಗಳು ಮೂರು ಮಂದಿ ಇದ್ದರೆ 35 ಕೆಜಿ ಅಕ್ಕಿ ಒಂದು ವೇಳೆ ಮೂರಕ್ಕಿಂತ ಅಂದರೆ 4 ಮಂದಿ ಇದ್ದರೆ 40 ಕೆಜಿ, 5 ಮಂದಿ ಇದ್ದರೆ 50 ಅಕ್ಕಿ ನೀಡಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ. ಅಂತ್ಯೋದಯ ಫಲಾನುಭವಿಗಳು ಮೂರು ಮಂದಿ ಇದ್ದರೆ ಕೇಂದ್ರ ಸರ್ಕಾರ 35 ಕೆಜಿ ಆಹಾರ ಧಾನ್ಯ ಒದಗಿಸುತ್ತದೆ. ಅದೇ ರೀತಿ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಒದಗಿಸುತ್ತಿದೆ. ಮಾರ್ಗಸೂಚಿ ಪ್ರಕಾರ ಜು.1 ರಿಂದ ಬಿಪಿಎಲ್, ಅಂತ್ಯೋದಯ ಫಲಾನುಭವಿಗಳಿಗೆ ತಲಾ 10 ಕೆಜಿ ಅಕ್ಕಿ ದೊರೆಯಲಿದೆ.