i
ಬಾಡಿಗೆದಾರರು ವಿದ್ಯುತ್ ಬಿಲ್ ಕಟ್ಟುವಂತಿಲ್ಲ, ಕಾಂಗ್ರೆಸ್ ನುಡಿದಂತೆ ನಡೆದಿದೆ, ಬಿಜೆಪಿ 15 ಲಕ್ಷ ರೂ.ಕೊಡಲಿ-ಡಿಕೆಶಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೃಹ ಜ್ಯೋತಿ ಯೋಜನೆ ಬಾಡಿಗೆ ಮನೆಯಲ್ಲಿರುವವರಿಗೂ 200 ಯೂನಿಟ್ ವಿದ್ಯುತ್ ಬಳಕೆಗೆ ಅವಕಾಶ ನೀಡಲಾಗುತ್ತದೆ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮನೆಯ ವಿದ್ಯುತ್ ಮೀಟರ್ ಓನರ್ ಹೆಸರಿನಲ್ಲಿ ಇರಬಹುದು. ಬಾಡಿಗೆ ಮನೆಯಲ್ಲಿ ಇರುವವನು ಬಡವನಲ್ವಾ? ಬಾಡಿಗೆ ಮನೆ ಇರಲಿ ಸ್ವಂತ ಮನೆ ಇರಲಿ. ನಾವು ಏನು ಹೇಳಿದ್ದೇವೋ ನಮ್ಮ ಮಾತು ಖಚಿತ. ಉಚಿತ ಅಂತ ಹೇಳಿದ್ದೇವೆ ಉಚಿತಾನೇ. 150 ಯೂನಿಟ್ ಬಳಸುತ್ತಿದ್ದವರು 200 ಯೂನಿಟ್ ಬಳಸುತ್ತಾರೆ. ಕರೆಂಟ್ ಏಕಾಏಕಿ ಬಳಸೋದು ಹೆಚ್ಚಳ ಆಗಬಾರದು ಹಾಗಾಗಿ ಶೇ.10 ರಷ್ಟು ಹೆಚ್ಚಳ ಮಾಡಿದ್ದೇವೆ ಎಂದು ಡಿಕೆಶಿವಕುಮಾರ್ ತಿಳಿಸಿದರು. 2009ರಲ್ಲಿ ಬಿಜೆಪಿಯವರು 15 ಲಕ್ಷ ರೂ.ಗಳನ್ನು ಪ್ರತಿಯೊಬ್ಬರ ಅಕೌಂಟ್ ಗೆ ಹಾಕುತ್ತೇವೆ ಎಂದು ವಚನಭ್ರಷ್ಟರಾದರು. ಮೊದಲು ಅವರು 15 ಲಕ್ಷ ರೂ.ಗಳನ್ನು ದೇಶದ ಎಲ್ಲ ಜನರಿಗೂ ಹಾಕಲಿ ಎಂದು ತಾಕೀತು ಮಾಡಿದ ಡಿಕೆ ಶಿವಕುಮಾರ್, ಕಪ್ಪು ಹಣ ತರುತ್ತಾರೋ ಬಿಡುತ್ತಾರೋ 15 ಲಕ್ಷ ಹಾಕಬೇಕು, ಹಾಗೆ ವರ್ಷಕ್ಕೆ ಎರಡು ಕೋಟಿಯಂತೆ 9 ವರ್ಷಕ್ಕೆ 18 ಕೋಟಿ ಉದ್ಯೋಗ ಕೊಡಲಿ ಎಂದು ಸವಾಲ್ ಹಾಕಿದರು.
ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು ಮಾಡಲಿ. ಈಗ ಅವರಿಗೆ ಟೈಮ್ ಇದೆ, ಅವರ ಪರೀಕ್ಷೆ ಬರ್ತಾ ಇದೆ. ಆ ಪರೀಕ್ಷೆಯಲ್ಲಿ ಅವರು ಪಾಸ್ ಆಗಲು ನಾವು ಹೇಗೆ ಮಾತು ಉಳಿಸಿಕೊಂಡೆವೋ ಅವರು ಉಳಿಸಿಕೊಳ್ಳಲಿ ಎಂದು ಡಿಕೆ ಶಿವಕುಮಾರ್ ಸವಾಲ್ ಹಾಕಿದರು.
ನಾವು ನುಡಿದಂತೆ ನಡೆದಿದ್ದೇವೆ. ಗ್ಯಾರಂಟಿ ಯೋಜನೆಗಳ ಬಗ್ಗೆ ವಿಪಕ್ಷದವರು ಟೀಕೆ ಮಾಡುತ್ತಿದ್ದಾರೆ. ವಿರೋಧ ಪಕ್ಷದವರು ಟೀಕೆ ಮಾಡುವುದಕ್ಕೆ ಇರುವುದು. ವಿಪಕ್ಷ ಟೀಕೆ ಮಾಡಲಿ, ನಾವು ಜನರ ಪರ ಕೆಲಸ ಮಾಡುತ್ತೇವೆ ಎಂದು ಡಿಕೆಶಿ ತಿಳಿಸಿದರು.