i
ದೇವರಾಜ್ ಅರಸ್ ಅವರು ಶೋಷಿತ, ಅಲಕ್ಷಿತ ಸಮುದಾಯಗಳ ಧ್ವನಿಯಾಗಿ ಕೆಲಸ ಮಾಡಿದರು-ಕುಮಾರ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ರಾಜ್ಯ ಕಂಡಂತಹ ದೇವರಾಜ್ ಅರಸ್ ಅವರು ಶೋಷಿತ, ಅಲಕ್ಷಿತ ಸಮುದಾಯಗಳ ಧ್ವನಿಯಾಗಿ ಕೆಲಸ ಮಾಡಿ ಹಿಂದುಳಿದ ಜಾತಿ, ಜನಾಂಗಗಳನ್ನು ಮುಖ್ಯವಾಹಿನಿಗೆ ತಂದರು ಎಂದು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಜಿಲ್ಲಾ ಘಟಕ ಅಧ್ಯಕ್ಷ ಎನ್.ಡಿ.ಕುಮಾರ್ ತಿಳಿಸಿದರು. ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದೇವರಾಜ್ ಅರಸ್ ರವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇವರಾಜ ಅರಸು ಆಡಳಿತಾವಧಿಯಲ್ಲಿ ಧ್ವನಿ ಇಲ್ಲದ ಹಲವು ಹಿಂದುಳಿದ ಅಲಕ್ಷಿತ ಸಮುದಾಯಗಳಿಗೆ ರಾಜಕೀಯ ಶಕ್ತಿ ತುಂಬಿ ಮುಖ್ಯವಾಹಿನಿಗೆ ತಂದಿದ್ದಾರೆ. ರಾಜ್ಯದಲ್ಲಿನ ಶೋಷಿತ ಸಮುದಾಯವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಿದ್ದರು. ಬಲಿಷ್ಠ ಜಾತಿಗಳಂತೆ ಹಿಂದುಳಿದ ಸಮಾಜಗಳಿಗೂ ಸ್ಥಾನಮಾನವನ್ನು ದೇವರಾಜ ಅರಸು ನೀಡಿದ್ದರು ಎಂದು ಕುಮಾರ್ ತಿಳಿಸಿದರು.
ದೇವರಾಜು ಅರಸು ರವರ ಉತ್ತರಾಧಿಕಾರಿಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ. ಹಿಂದುಳಿದ ವರ್ಗದವರಿಗೆ ವಿಶೇಷ ಸ್ಥಾನಮಾನ ನೀಡುವುದರ ಮೂಲಕ ಮುಖ್ಯವಾಹಿನಿಗೆ ಕರೆತರುವ ಕಾರ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದರು. ದೇವರಾಜ ಅರಸು ಮತ್ತು ಸಿದ್ದರಾಮಯ್ಯರವರು ಕಾಂಗ್ರೆಸ್ ಎರಡು ಕಣ್ಣುಗಳಿದ್ದಂತೆ ಎಂದು ಕುಮಾರ್ ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಮಾತನಾಡಿ, ದೇವರಾಜ್ ಅರಸುರವರು ಎರಡು ಭಾರಿ ಮುಖ್ಯಮಂತ್ರಿಗಳಾಗಿ ಉತ್ತಮ ಸೇವೆ ಮಾಡಿದ್ದರಿಂದ ಜನಮನದಲ್ಲಿ ಉಳಿದಿದ್ದಾರೆ. ಸರಳತೆಗೆ ನಿರ್ದಶನವಾಗಿದ್ದವರು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ವಿಶೇಷವಾದ ಕಾಳಜಿ ಹೊಂದಿದ್ದ ಅವರು ಸಣ್ಣ ಸಣ್ಣ ಸಮುದಾಯವರನ್ನು ಗುರುತಿಸಿ ಚುನಾವಣೆಯಲ್ಲಿ ಗೆಲ್ಲಸಿ ರಾಜಕೀಯ ಅಧಿಕಾರ ನೀಡಿದ್ದರು ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ಡಿ.ಎನ್.ಮೈಲಾರಪ್ಪ ಮಾತನಾಡಿ, ಭೂ ಒಡೆತನ ಜಾರಿ ಮಾಡುವುದರ ಮೂಲಕ ಸಾವಿರಾರು ಕುಟುಂಬಗಳಿಗೆ ಭೂಮಿ ಹಂಚಿಕೆ ಮಾಡಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಬಡವರ ಬಗ್ಗೆ ಕಾಳಜಿ ಹೊಂದಿದ್ದ ಅರಸು, ಎಲ್ಲ ವರ್ಗದ ಜನರಿಗೆ ವಿವಿಧ ರೀತಿಯ ಯೋಜನೆ ನೀಡುವುದರ ಮೂಲಕ ಆರ್ಥಿಕ ಶಕ್ತಿ ತುಂಬಿದ್ದರು ಎಂದು ಹೇಳಿದರು.
ಜಿಲ್ಲಾ ಮಂತ್ರಿ ಸ್ಥಾನವನ್ನು ಜಿಲ್ಲೆಯವರಿಗೆ ನೀಡಬೇಕಿದೆ ಬೇರೆಯವರಿಗೆ ನೀಡಬಾರದು. ಮುಂಬರುವ ಲೋಕಸಭಾ ಚುಣಾವಣೆ ಎದುರಿಸಲು ಈಗಿನಿಂದಲೇ ಸಜ್ಜಾಗಬೇಕಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಈ ಬಾರಿ ಗೆಲ್ಲಲೇ ಬೇಕಿದೆ. ಗ್ಯಾರಂಟಿಯಿಂದಾಗಿ ವಿರೋಧ ಪಕ್ಷದವರಿಗೆ ನಡುಕ ಉಂಟಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತಾಜ್ಪೀರ್ ಮಾತನಾಡಿ ದೇವರಾಜ್ ಅರಸು ರವರು ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಸಣ್ಣ ಸಮುದಾಯವರು ರಾಜಕೀಯ ಮಾಡುವುದಕ್ಕೆ ಬರುತ್ತಿರಲಿಲ್ಲ ಇವರು ಅದಿಕಾರಕ್ಕೆ ಬಂದ ಮೇಲೆ ಸಣ್ಣಪುಟ್ಟ ಜಾತಿಯವರು ರಾಜಕೀಯ ಮಾಡಬಹುದೆಂದು ತೋರಿಸಿದವರು ಅರಸು ಎಂದು ತಿಳಿಸಿ, ಐದು ವರ್ಷ ಮುಖ್ಯಮಂತ್ರಿಗಳಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ಇದುವರೆವಿಗೂ ರಾಜ್ಯವನ್ನು ಐದು ವರ್ಷ ಆಳಿದವರಲ್ಲಿ ಅರಸುರವರು ಮೊದಲಿಗರಾದರೆ ಸಿದ್ದರಾಮಯ್ಯರವರು
ಎರಡನೇಯವರಾಗಿದ್ದಾರೆ ಎಂದು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಮಂಜಪ್ಪ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಹೆಚ್ ಶಬ್ಬೀರ್ ಭಾಷಾ, ಜಿಲ್ಲಾ ಪಂಚಾಂಯಿತಿ ಮಾಜಿ ಸದಸ್ಯ ಪ್ರಕಾಶ್ ಮೂರ್ತಿ, ಮುಖಂಡರಾದ ಖುದ್ದೂಸ್, ರವಿ ಕುಮಾರ್, ತಿಪ್ಪೇಸ್ವಾಮಿ, ಪ್ರಕಾಶ್ ಬೆನ್ನೂರ್, ಎಸ್ಸಿ ಸೆಲ್ ಅಧ್ಯಕ್ಷ ಜಯಣ್ಣ, ಮೂಡಲಗಿರಿಯಪ್ಪ, ಸ್ವಾಮಿ, ಪೈಲ್ವಾನ್ ತಿಪ್ಪೇಸ್ವಾಮಿ, ಜಯಣ್ಣ, ಒಡೆಯರ್ ಸೇರಿದಂತೆ ಇತರರು ಭಾಗವಹಿಸಿದ್ದರು.