i
ಮನೆ ಮಾಲೀಕರು, ಬಾಡಿಗೆದಾರರು 200 ಯೂನಿಟ್ ವಿದ್ಯುತ್ ಉಚಿತ ಪಡೆಯಬೇಕಾದರೆ ಏನು ಮಾಡಬೇಕು ನೋಡಿ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯಡಿ ಗ್ರಾಹಕರು 200 ಯೂನಿಟ್ವರೆಗೂ ಉಚಿತವಾಗಿ ವಿದ್ಯುತ್ ನೀಡುವ ಈ ಯೋಜನೆಯ ಮಾರ್ಗಸೂಚಿಯನ್ನು ಇಂಧನ ಇಲಾಖೆ ಸೋಮವಾರ ಬಿಡುಗಡೆ ಮಾಡಿದ್ದು ಬಾಡಿಗೆದಾರರು ಈ ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ದಟ್ಟವಾಗಿದೆ. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚಿನ ಆರ್.ಆರ್.ಸಂಖ್ಯೆ ಹೊಂದಿದ್ದರೆ, ಆ ಪೈಕಿ ಒಂದಕ್ಕೆ ಮಾತ್ರ ಉಚಿತ ವಿದ್ಯುತ್ ಸೌಲಭ್ಯ ದೊರೆಯಲಿದೆ ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ ಬಾಡಿಗೆ ಮನೆಗಳಲ್ಲಿ ವಾಸಿಸುವವರು ಗೃಹಜ್ಯೋತಿ ಯೋಜನೆಯ ಲಾಭದಿಂದ ವಂಚಿತರಾಗಲಿದ್ದಾರೆ. ಮನೆ ಮಾಲಿಕ ವಾಸ ಮಾಡುವ ಮನೆಗೆ ಶಕ್ತಿ ಯೋಜನೆ ಲಾಭ ಪಡೆಯುತ್ತಾನೆ. ಆದರೆ ಬಾಡಿಗೆ ಮನೆಗಳಿಗೆ ಅಳವಡಿಸಿರುವ ವಿದ್ಯುತ್ ಸಂಪರ್ಕಗಳಿಗೆ ಮಾಲೀಕನ ಹೆಸರಿನಲ್ಲಿ ಆರ್.ಆರ್.ಸಂಖ್ಯೆ ಇರುವುದರಿಂದ ಬಾಡಿಗೆದಾರರು ಸೌಲಭ್ಯದಿಂದ ವಂಚಿತರಾಗಲಿದ್ದಾರೆ ಎನ್ನಲಾಗಿದೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜೂ.2ರಂದು ನಡೆದಿದ್ದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ ಶೇ.60ರಷ್ಟು ಮಂದಿ ಬಾಡಿಗೆ ಮನೆಗಳಲ್ಲಿರುವವರೇ ಇದ್ದಾರೆ. ಇದು ಸರ್ಕಾರದ ಗಮನದಲ್ಲಿದೆ. ಬಾಡಿಗೆಗಿರುವ ಬಡವನ ಮನೆಯಲ್ಲೂ ಜ್ಯೋತಿ ಬೆಳಗಬೇಕು. ಹೀಗಾಗಿ ಬಾಡಿಗೆದಾರರನ್ನು ಹೊರಗಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು. ಆದರೆ, ಈಗ ಪ್ರಕಟಗೊಂಡಿರುವ ಮಾರ್ಗಸೂಚಿಯಲ್ಲಿ ಗೃಹ ವಿದ್ಯುತ್ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಆರ್.ಆರ್. ನಂಬರ್(ಮೀಟರ್) ಇದ್ದರೆ ಆ ಪೈಕಿ ಒಂದು ಆರ್.ಆರ್. ನಂಬರ್ ಮಾತ್ರ ಯೋಜನೆಯಡಿ ಸೌಲಭ್ಯಕ್ಕೆ ಅರ್ಹರು ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಮಾರ್ಗಸೂಚಿಯಲ್ಲಿ ಯೋಜನೆ ಗೃಹ ಬಳಕೆಗೆ ಮಾತ್ರ ಅನ್ವಯವಾಗಲಿದ್ದು, ವಾಣಿಜ್ಯ ಉದ್ದೇಶಕ್ಕೆ ಈ ಯೋಜನೆ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಬಳಕೆದಾರರ ಆರ್.ಆರ್ ನಂಬರ್(ಐಡಿ ಸಂಖ್ಯೆ) ಎನ್ನು ಆಧಾರ್ಗೆ ಜೋಡಣೆ ಮಾಡಬೇಕು.
ಉಚಿತ ವಿದ್ಯುತ್ ಬಿಲ್ಲಿಂಗ್ ಹೇಗೆ?
ಶಕ್ತಿ ಯೋಜನೆ ಅಡಿಯ ಫಲಾನುಭವಿಗಳು ಪ್ರತಿ ತಿಂಗಳು ಬಳಕೆ ಮಾಡುವ ಮೀಟರ್ ರೀಡಿಂಗ್ ತೆಗೆದು ಒಟ್ಟು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ಲನ್ನು ನಮೂದಿಸಬೇಕು. ಗೃಹ ವಿದ್ಯುತ್ ಬಳಕೆದಾರನ ಅರ್ಹ ಮೊತ್ತವನ್ನು ಬಿಲ್ನಲ್ಲಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ಗ್ರಾಹಕರಿಗೆ ನೆಟ್ ಬಿಲ್ ನೀಡಬೇಕು. ಗ್ರಾಹಕರು ಸಂಬಂಧಪಟ್ಟ ಶುಲ್ಕವನ್ನು ಪಾವತಿಸಬೇಕು. ಅರ್ಹ ಯುನಿಟ್ ಅಥವಾ ಮೊತ್ತಕ್ಕಿಂತ ಒಳಗಡೆ ಬಿಲ್ ಆಗಿದ್ದರೆ ಅಂತಹ ಗ್ರಾಹಕರಿಗೆ ಶೂನ್ಯ ಬಿಲ್ ನೀಡಲಾಗುತ್ತದೆ.
ಪ್ರಸಕ್ತ ಶಕ್ತಿ ಯೋಜನೆಯಲ್ಲಿ 200 ಯೂನಿಟ್ ಉಚಿತವಾಗಿದ್ದರೂ ಸಹ ಕಳೆದ 12 ತಿಂಗಳ ಸರಾಸರಿ ಆಧರಿಸಿ ಶೇ.10ರಷ್ಟುಹೆಚ್ಚುವರಿ ಯೂನಿಟ್ ವಿದ್ಯುತ್ ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ. ಜತೆಗೆ ಗರಿಷ್ಠ 200 ಯೂನಿಟ್ ಮಿತಿ ನಿಗದಿ ಮಾಡಲಾಗಿದೆ. ಕಳೆದ ವರ್ಷದ ಸರಾಸರಿಯ ಮೇಲೆ ಶೇ.10ಕ್ಕಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಹೆಚ್ಚುವರಿ ಮೊತ್ತವನ್ನು ಗ್ರಾಹಕರು ಪಾವತಿಸಬೇಕು. 200 ಯೂನಿಟ್ಗಿಂತ ಹೆಚ್ಚು ಬಳಕೆ ಮಾಡಿದರೆ ಪೂರ್ಣ ಬಿಲ್ ಪಾವತಿಸಬೇಕು. ಹಿಂದಿನ ಬಾಕಿ ಪಾವತಿಸಬೇಕು: ಜೂ.30ರ ಅಂತ್ಯದ ವೇಳೆಗೆ ಬಳಕೆಯ ವಿದ್ಯುತ್ ಶುಲ್ಕದ ಬಾಕಿ ಮೊತ್ತವನ್ನು 3 ತಿಂಗಳೊಳಗಾಗಿ ಪಾವತಿಸಬೇಕು. ನಿಗದಿತ ಅವಧಿಯಲ್ಲಿ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಜತೆಗೆ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಯೋಜನೆಯ ಫಲಾನುಭವಿ ಗ್ರಾಹಕರುಗಳನ್ನು ಗೃಹಜ್ಯೋತಿಯಡಿ ಸೇರಿಸಲಾಗುವುದು. ಗ್ರಾಹಕರಿಗೆ ನೀಡಿದ ಉಚಿತ ಮೊತ್ತವನ್ನು ಸರ್ಕಾರದಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸಹಾಯಧನದ ಮೂಲಕ ನೀಡಲಾಗುತ್ತದೆ.
ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಕೆ-ಅರ್ಜಿದಾರರು ಎಸ್ಕಾಂನ ಕಸ್ಟಮರ್ ಐಡಿಯನ್ನು (ಬಳಕೆದಾರರ ಗುರುತಿನ ಸಂಖ್ಯೆ) ಆಧಾರ್ಗೆ ಜೋಡಿಸಬೇಕು. ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿಗೆ ಮಾತ್ರ ಅನ್ವಯ. ಯಾವಾಗಿನಿಂದ ಅರ್ಜಿ ಸಲ್ಲಿಸಬೇಕು ಮತ್ತು ದಾಖಲೆಗಳೇನು ಬೇಕೆಂದು ಇನ್ನೂ ತಿಳಿಸಿಲ್ಲ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ ಮಾಧ್ಯಮಗಳೊಂದಿಗೆ ಮಾತನಾಡಿ, ಶಕ್ತಿ ಯೋಜನೆ ಅಡಿ 200 ಯೂನಿಟ್ ವಿದ್ಯುತ್ ಉಚಿತ ಪಡೆಯುವ ಯೋಜನೆಗೆ ಬಾಡಿಗೆದಾರರಿಗೆ ಯೋಜನೆ ಅನ್ವಯವಾಗಲ್ಲ ಎಂದು ನಾವು ಹೇಳಿಲ್ಲ. ಸರ್ಕಾರದ ನಿರ್ಧಾರದಂತೆ ಮಾರ್ಗಸೂಚಿ ಪ್ರಕಟಿಸಲಾಗಿದೆ. ಒಬ್ಬರ ಹೆಸರಿನಲ್ಲಿ ಹೆಚ್ಚು ಆರ್.ಆರ್. ನಂಬರ್ ಇದ್ದರೆ ಒಂದಕ್ಕೆ ಮಾತ್ರ ಯೋಜನೆ ಅನ್ವಯವಾಗುತ್ತದೆ. ಇದರಿಂದ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಅನ್ಯಾಯವಾಗುವುದಾದರೆ ನಮ್ಮ ಗಮನಕ್ಕೆ ತರಲಿ. ನಾವು ಅಧಿಕಾರಿಗಳಿಂದ ಹೊಸದಾಗಿ ಪ್ರಸ್ತಾವನೆ ತರಿಸಿಕೊಂಡು ಪರಿಶೀಲಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.